ಮೈಸೂರಲ್ಲಿ ಜನಮನ ಸೆಳೆದ ಛಾಯಾಚಿತ್ರ ಪ್ರದರ್ಶನಕ್ಕೆ ಸಿಎಂ ಚಾಲನೆ
ಮೈಸೂರು, ಸೆಪ್ಟೆಂಬರ್ 11: ಮೈಸೂರು ನಗರ ಪತ್ರಿಕಾ ಛಾಯಾಗ್ರಾಹಕರ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಮಂಗಳವಾರ ಮೈಸೂರಿನಲ್ಲಿ ಆಯೋಜಿಸಿದ್ದ ಛಾಯಾಚಿತ್ರ ಪ್ರದರ್ಶನ- 2018 ಕಾರ್ಯಕ್ರಮವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಉದ್ಘಾಟಿಸಿದರು.
ಮಾಧ್ಯಮದಲ್ಲಿ ಅಸಾಧ್ಯವಾದುದು ಚರ್ಚೆಯಾಗುತ್ತಿದೆ:ಸಿಎಂ ಕುಮಾರಸ್ವಾಮಿ
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸುಮಾರು 20 ವರ್ಷ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ ಹಾಗೂ 60 ವರ್ಷ ವಯೋಮಾನ ಹೊಂದಿದ ಪತ್ರಕರ್ತರಿಗೆ ಅಗತ್ಯ ಸವಲತ್ತುಗಳನ್ನು ಸರ್ಕಾರದ ವತಿಯಿಂದ ಕೊಡುವ ಬಗ್ಗೆ ಸದ್ಯದಲ್ಲೇ ಗಮನ ಹರಿಸಲಾಗುವುದು ಎಂದರು.
ಸಂಕಷ್ಟದಲ್ಲಿರುವ ಪತ್ರಕರ್ತರ ಜೀವನ ಉತ್ತಮಗೊಳಿಸುವ ರೀತಿಯಲ್ಲಿ ಕಾರ್ಯಕ್ರಮ ಕೊಡಬೇಕಾಗಿದೆ ಎಂದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಹಾಗೂ ಛಾಯಾಚಿತ್ರಗಳಿಗೆ ಜೀವ ತುಂಬುತ್ತಿದ್ದ ಪತ್ರಿಕಾ ಛಾಯಾಗ್ರಾಹಕ ಟಿ.ಎಸ್. ಸತ್ಯನ್ ಅವರು ಮೈಸೂರಿನವರು ಎಂಬುದು ಹೆಮ್ಮೆಯ ವಿಷಯ, ಪತ್ರಿಕಾ ಛಾಯಾಗ್ರಾಹಕರು ಭಾವನಾತ್ಮಕ ಜೀವಿಗಳು. ರಮಣೀಯವಾದ ಸ್ಥಳಗಳು, ಅರಣ್ಯ ಮುಂತಾದ ಸ್ಥಳಗಳಲ್ಲಿ ಅಪರೂಪದ ಕ್ಷಣಗಳನ್ನು ವನ್ಯಜೀವಿಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುವುದು ವಿಶೇಷ
ಕಾಂಗ್ರೆಸ್ -ಜೆಡಿಎಸ್ ನಡುವೆ ಯಾವುದೇ ಸಮಸ್ಯೆ ಇಲ್ಲ: ಕುಮಾರಸ್ವಾಮಿ
ನೂರಾರು ಪದಗಳಲ್ಲಿ ಹೇಳಬೇಕಾದನ್ನು ಒಂದು ಛಾಯಾಚಿತ್ರ ಹೇಳುತ್ತದೆ. ದೂರದರ್ಶನ ಹೆಚ್ಚು ಜನಪ್ರಿಯಗೊಳ್ಳುವ ಮುನ್ನವೇ ಪತ್ರಿಕಾ ಛಾಯಾಗ್ರಹಣ ಹೆಚ್ಚು ಜನಪ್ರಿಯಗೊಂಡಿತ್ತು. ಈಗಲೂ ಅಷ್ಟೇ ಪ್ರಾಮುಖ್ಯತೆ ಹೊಂದಿದೆ ಎಂದರು.
ಸಮಾರಂಭದಲ್ಲಿ ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ. ದೇವೇಗೌಡ, ಪ್ರವಾಸೋದ್ಯಮ ಸಚಿವರಾದ ಸಾ ರಾ ಮಹೇಶ್, ಹಿರಿಯ ಪತ್ರಕರ್ತ ಕೆ. ಶಿವಕುಮಾರ್, ಉದ್ಯಮಿ ಪಿ.ವಿ. ಗಿರಿ, ಪತ್ರಿಕಾ ಛಾಯಾಗ್ರಾಹಕ ಪ್ರಗತಿ ಗೋಪಾಲಕೃಷ್ಣ, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಉಪಸ್ಥಿತರಿದ್ದರು.