ಸರ್ವರಿಗೂ ಒಳಿತು ಬಯಸುವ ಕಲ್ಯಾಣ ಚಿಂತನೆಯ ಅಗತ್ಯತೆ ಇದೆ: ಸಿಎಂ ಬೊಮ್ಮಾಯಿ
ಮೈಸೂರು, ಸೆಪ್ಟಂಬರ್ 26: ಎಲ್ಲ ರಂಗಗಳಲ್ಲಿ ಕಲ್ಯಾಣ ಕೆಲಸ ಮಾಡುವ ಮೂಲಕ ಕನ್ನಡ ನಾಡನ್ನು ಸರ್ವ ಶ್ರೇಷ್ಠವಾಗಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸೋಮವಾರ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಅಗ್ರ ಪೂಜೆಯೊಂದಿಗೆ ಈ ವರ್ಷದ 'ದಸರಾ ಮಹೋತ್ಸವ' ಚಾಲನಾ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇದೇ ವೇಳೆ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ದಸರಾ ಹಬ್ಬವನ್ನು ಉದ್ಘಾಟಿಸಿದರು.
ವಿಶ್ವ ವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ರಂಗಗಳಲ್ಲಿ ಅಭಿವೃದ್ಧಿಯ ಕೆಲಸಗಳನ್ನು ಮಾಡಬೇಕಿದೆ. ಆ ಮೂಲಕ ನಾಡಿನಲ್ಲಿರುವ ಬಡ ಜನರ ಬದುಕನ್ನು ಉನ್ನತಕ್ಕೆ ಕೊಂಡೊಯ್ಯಬೇಕಿದೆ. ಸರ್ವರಿಗೂ ಲೇಸನ್ನು ಬಯಸುವ ಕಲ್ಯಾಣದ ಚಿಂತನೆಯ ಅವಶ್ಯಕತೆ ಇದೆ. ತಾಯಿ ಚಾಮುಂಡೇಶ್ವರಿ ಕರುಣೆಯಿಂದ ನಾಡಿಗೆ ಒಳಿತಾಗಲಿ. ಕನ್ನಡ ನಾಡನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಕನಸ ಸಾಕಾರವಾಗಲಿದೆ ಎಂದು ಅವರು ಹೇಳಿದರು.
ಗತವೈಭವ ನೆನೆಪಿಸುವ ಅದ್ಧೂರಿ ದಸರಾ
ಇಂದು ಚಾಲನೆಗೊಂಡ ದಸರಾ ಹಬ್ಬದಾಚರಣೆ ಹಲವಾರು ವಿಶೇಷತೆಗಳಿಂದ ಕೂಡಿವೆ. ಕಳೆದ 2 ವರ್ಷಗಳಿಗಿಂತ ಅರ್ಥಪೂರ್ಣವಾಗಿ, ಗತವೈಭವವನ್ನು ನೆನೆಪಿಸುವ ರೀತಿಯಲ್ಲಿ ಅದ್ಧೂರಿಯಾಗಿ ನಾವೆಲ್ಲರೂ ಒಟ್ಟಾಗಿ ಆಚರಣೆ ಮಾಡುತ್ತಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು.
ನಾಡಿನ ದುಡಿಯುವ ವರ್ಗದ ಕಾರ್ಮಿಕರು, ರೈತರು, ಸಾಮಾನ್ಯ ಜನರು ಮನೆ, ಮನೆಯಲ್ಲಿ ದಸರಾ ಹಬ್ಬ ಆಚರಿಸಲಾಗುತ್ತಿದೆ. ಹೀಗಾಗಿಯೇ ಇದೊಂದು ನಾಡ ಹಬ್ಬ ಎಂದು ಕರೆಯುತ್ತಾರೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದು ನಾಡಿನ ಅಭಿವೃದ್ಧಿ, ಸಮೃದ್ಧಿ, ಸುಭಿಕ್ಷೆಯಿಂದ ಇಡಲು ನಾವು ಪ್ರಾರ್ಥಿಸಬೇಕು. ಸದಾ ಕಾಲ ಆ ದೇವಿ ನಮ್ಮ ಪ್ರಾರ್ಥನೆಗೆ ಓಗೊಟ್ಟು ಕಾಲಕಾಲಕ್ಕೆ ಮಳೆ, ಬೆಳೆ ಕೊಟ್ಟು ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಎಲ್ಲಾ ಶಕ್ತಿ ಯ ಆಶೀರ್ವಾದ ನೀಡುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.
ಚಾಮುಂಡಿಬೆಟ್ಟದ ಚಾಮುಂಡೇಶ್ವರಿಗೆ ಪ್ರತಿನಿತ್ಯ ಪೊಲೀಸ್ ಸೆಲ್ಯೂಟ್!
ತಾಯಿಯ 'ಶಕ್ತಿಪೀಠ'ದಿಂದ ನಾಡಿಗೆ ಶಕ್ತಿ
ಚಾಮುಂಡಿ ಬೆಟ್ಟದಲ್ಲಿ ಸ್ಥಾಪನೆಯಾಗಿರುವ ತಾಯಿಯ 'ಶಕ್ತಿಪೀಠ'ವು ಇಡೀ ನಾಡಿಗೆ ಶಕ್ತಿ ನೀಡುತ್ತಿದೆ. ಅದರ ಫಲವಾಗಿ ಮೈಸೂರು ಮಹಾರಾಜರ ಕಾಲದಿಂದಲೂ ಈವರೆಗೆ ದೇವಿಯ ಪೂಜೆಯನ್ನು ಮುಂದುವರೆಸಲಾಗುತ್ತಿದೆ. ದೇವ ಪೂಜೆಗೆ ತನ್ನದೇ ಆದ ವೈಶಿಷ್ಟವಿದೆ. ಗತಕಾಲದ ವೈಭವದ ಜೊತೆಗೆ ಪ್ರಸ್ತುತ ಕಾಲಘಟ್ಟದಲ್ಲಿ ಕನ್ನಡ ನಾಡಿನ ಶ್ರೇಯೋಭಿವೃದ್ಧಿ ಅಷ್ಟೇ ಮುಖ್ಯವಾಗಿದೆ. ಇಂದಿನ ಹತ್ತು ಹಲವಾರು ನೈಸರ್ಗಿಕ ಸವಾಲುಗಳನ್ನು, ನಾವು ಸಮರ್ಥವಾಗಿ ಎದುರಿಸಿ ಜನಕಲ್ಯಾಣದ ಕಡೆ ದಾಪುಗಾಲು ಹಾಕುತ್ತಿದ್ದೇವೆ ಎಂದು ಅವರು ತಿಳಿಸಿದರು.
ಮೊದಲ ಭಾರಿಗೆ ರಾಷ್ಟ್ರಪತಿ ಮುರ್ಮು ಭೇಟಿ
ತಾಯಿ ಚಾಮುಂಡೇಶ್ವರಿಯ ಅಗ್ರಪೂಜೆಯೊಂದಿಗೆ 2022ರ ದಸರಾ ಮಹೋತ್ಸವದ ಉದ್ಘಾಟನೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಾರ್ಯಕ್ರಮ ನೆರವೇರಿಸಿರುವುದು ಸಂತೋಷ ಮತ್ತು ಅತ್ಯಂತ ಅಪರೂಪದ ಘಟನೆ. ಇತ್ತೀಚಿನ ದಿನಗಳಲ್ಲಿ ರಾಷ್ಟಪತಿಯೊಬ್ಬರು ದಸರಾ ಉದ್ಘಾಟನೆ ಮಾಡಿರುವ ಉದಾಹರಣೆ ಇಲ್ಲ. ಅವರಿಗೆ ಆಹ್ವಾನ ನೀಡಿದ ಕೂಡಲೇ ಒಪ್ಪಿಗೆ ಸೂಚಿಸಿ, ರಾಷ್ಟಪತಿಯಾದ ನಂತರ ಭೇಟಿ ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕ ಎಂದರು.
ಅಲ್ಲದೇ ತಾಯಿ ಚಾಮುಂಡೇಶ್ವರಿ ಪೂಜೆ ಮಾಡುವ ಸೌಭಾಗ್ಯ ಸಿಕ್ಕಿರುವುದು ನನ್ನ ಪುಣ್ಯ ಎಂದು ರಾಷ್ಟ್ರಪತಿಗಳಿಗೆ ತಿಳಿಸಿದ್ದಾರೆ. ಇಷ್ಟು ಶ್ರದ್ಧೆ ಭಕ್ತಿ ಇರುವ ಅವರು ರಾಷ್ಟದ ಶ್ರೇಯಸ್ಸಿಗಾಗಿ ತಮ್ಮ ಭಕ್ತಿ ಅರ್ಪಿಸಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.
ಉತ್ತಮ ವಿಚಾರ ಪುರಸ್ಕರಿಸಬೇಕು
ದುಷ್ಟರ ಸಂಹಾರ, ಶಿಷ್ಟರ ಪರಿಪಾಲನೆ ಮೊದಲಿನಿಂದಲೂ ಬಂದಿದೆ. ಆದರೆ ನಮ್ಮೊಳಗಿನ ಅವಗುಣಗಳ ನಿಗ್ರಹವನ್ನು ಆತ್ಮಸಾಕ್ಷಿಯಾಗಿ ನಾವೇ ಮಾಡಿಕೊಳ್ಳಬೇಕು. ನಮ್ಮ ಆತ್ಮಶುದ್ಧೀಕರಣದ ಮೂಲಕ ದುಷ್ಟ ವಿಚಾರ ದೂರವಿಡುವ, ಉತ್ತಮ ವಿಚಾರಗಳಿಗೆ ಪುರಸ್ಕಾರ ನೀಡುವ ಪರಿಪಾಠ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್ ಜೋಶಿ, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಮೈಸೂರು ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಸಚಿವ ಸುನಿಲ್ ಕುಮಾರ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ರಾಮದಾಸ್ ಮತ್ತಿತರರು ಉಪಸ್ಥಿತರಿದ್ದರು.