ಮೊದಲ ಸ್ಥಾನ ತಪ್ಪಿಸಿಕೊಂಡ 'ಕ್ಲೀನ್ ಸಿಟಿ' ಮೈಸೂರು, ಕಾರಣ ನೂರು!
ಮೈಸೂರು, ಮಾರ್ಚ್ 6: ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಪ್ರಕಟಿಸಿದ ಸ್ವಚ್ಛ ನಗರಗಳ ರಾಂಕಿಂಗ್ ನಲ್ಲಿ ಮೈಸೂರು 3ನೇ ಕ್ಲೀನೆಸ್ಟ್ ಸಿಟಿ ಪಟ್ಟವನ್ನು ಪಡೆದುಕೊಂಡಿದೆ. ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ 2015 ಮತ್ತು 2016ರಲ್ಲಿ ಅಗ್ರಸ್ಥಾನ ಲಭಿಸಿತ್ತು. ಆದರೆ, 2017ರಲ್ಲಿ ಐದನೇ ಸ್ಥಾನಕ್ಕೆ ಕುಸಿತ ಕಂಡಿತ್ತು.
ನಂತರ 2018ರಲ್ಲಿ ಎಂಟನೇ ಸ್ಥಾನಕ್ಕೆ ಕುಸಿದಿತ್ತು. ಈ ಬಾರಿ ಮತ್ತೆ ಮೂರನೇ ಸ್ಥಾನಕ್ಕೆ ಜಿಗಿದಿದೆ. ಮಧ್ಯಮ ನಗರಗಳ ಸಾಲಿನಲ್ಲಿ ಇಂದೋರ್ ದೇಶದಲ್ಲಿಯೇ ಸ್ವಚ್ಛ ನಗರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಇನ್ನು 10 ಲಕ್ಷ ಜನಸಂಖ್ಯೆ ಮೇಲ್ಟಟ್ಟ ನಗರ ಸಾಲಿನಲ್ಲಿ ಮೊದಲ ಸ್ಥಾನವನ್ನು ಅಹಮದಬಾದ್ ಪಡೆದಿದೆ. ಇದರ ಬಳಿಕ ಅರಮನೆ ನಗರ ಮೈಸೂರು ಸ್ವಚ್ಛ ನಗರ ಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸಿದೆ.
ಸ್ವಚ್ಛ ಸರ್ವೇಕ್ಷಣ್ 2019: ಮೈಸೂರಿಗೆ ಸಿಗಲಿದೆಯಾ ಪ್ರಥಮ ಸ್ಥಾನ?
2018ರ ಜನವರಿಯಿಂದ ಡಿಸೆಂಬರ್ವರೆಗಿನ ಅವಧಿಯಲ್ಲಿ ನಗರದಲ್ಲಿ ಸ್ವಚ್ಛತೆಗೆ ತೆಗೆದುಕೊಂಡಿರುವ ಕ್ರಮಗಳನ್ನು ಪರಿಶೀಲಿಸಿ ರಾಂಕಿಂಗ್ ನಿರ್ಧರಿಸಲಾಗಿದೆ. ಸಮೀಕ್ಷಾ ತಂಡವು ನಗರದಲ್ಲಿ 2019ರ ಜನವರಿಯಲ್ಲಿ ಸ್ವಚ್ಛತಾ ಸಮೀಕ್ಷೆ ಕೈಗೊಂಡಿತ್ತು. ಸಮೀಕ್ಷಾ ತಂಡ ನೀಡಿದ ಅಂಕಗಳ ಆಧಾರದಲ್ಲಿ ರಾಂಕಿಂಗ್ ಪಟ್ಟಿ ಪ್ರಕಟಿಸಲಾಗಿದೆ. ಮುಂದೆ ಓದಿ...
ದೇಶದ 10 ನಗರಗಳು ಆಯ್ಕೆಯಾಗಿದ್ದವು
ರಾಷ್ಟ್ರ ಮಟ್ಟದ ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ಅಂತಿಮ ಹಂತದಲ್ಲಿ ದೇಶದ 10 ನಗರಗಳು ಆಯ್ಕೆಯಾಗಿತ್ತು. ಈ ಬಾರಿಯಾದರೂ ಮತ್ತೆ ಮೊದಲನೇ ಸ್ಥಾನವನ್ನು ಪಡೆಯಬಹುದೆಂದು ಮೈಸೂರಿಗರು ನಿರೀಕ್ಷಿಸಿದ್ದರು. ಆದರೆ ಇದು ಹುಸಿಯಾಗಿದೆ.
3 ಸ್ಥಾನಕ್ಕೆ ತೃಪ್ತಿಪಟ್ಟ ಮೈಸೂರು
ಸ್ವಚ್ಛ ಸರ್ವೇಕ್ಷಣ್ ತಂಡದ ವತಿಯಿಂದ 5000 ಅಂಕಗಳಿಗೆ ಮೈಸೂರು 4379 ಅಂಕಗಳನ್ನು ಪಡೆದು 3 ಸ್ಥಾನಕ್ಕೆ ತೃಪ್ತಿಪಟ್ಟಿದೆ. ಸ್ವಚ್ಛತಾ ಮಟ್ಟದಲ್ಲಿ 1195 ( 1250), ಪ್ರಮಾಣೀಕರಣದಲ್ಲಿ 1000 (1250), ನೇರ ವೀಕ್ಷಣೆಯಲ್ಲಿ 1211( 1250), ಸಿಟಿಜನ್ ಫೀಡ್ ಬ್ಯಾಕ್ ನಲ್ಲಿ 972(1250), ತಂಡದ ಸೂಚಕ ಅಂಕ 1716(1783) ಅಂಕ ಪಡೆದಿದೆ.
ಸ್ವಚ್ಛನಗರ ಪಟ್ಟ:ಸಾಂಸ್ಕೃತಿಕ ನಗರಿ ಮೈಸೂರಿಗೆ 3 ನೇ ಸ್ಥಾನ
ನಾಗರೀಕರು ಹಿಂದೆ ಸರಿದರಾ?
ಈ ಬಾರಿ ಮೊದಲ ಸ್ಥಾನದಲ್ಲಿ ಹಿಂದೆ ಕುಸಿಯಲು ಎಲ್ಲೋ ನಮ್ಮ ಮೈಸೂರು ನಾಗರೀಕರು ಅಂಕಗಳನ್ನು ನೀಡಲು ಹಿಂದೆ ಸರಿದಿದ್ದೆ ಕಾರಣ ಎಂಬುದನ್ನು ತೆಗೆದುಹಾಕುವಂತಿಲ್ಲ. ಕಾರಣ ಇಂದೋರ್ ಹಾಗೂ ಅಹಮದಾಬಾದ್ ಎರಡೂ ಪ್ರದೇಶದಲ್ಲಿ ಸಾರ್ವಜನಿಕರ ಫೀಡ್ ಬ್ಯಾಕ್ ಅಂಕ ಹೆಚ್ಚಿದೆ. ಇದು ಪ್ರಮುಖ ಕಾರಣವಾಗಿದೆ. ಈ ಬಾರಿ ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ 4,237 ಊರುಗಳು ಭಾಗಿಯಾಗಿದ್ದವು.
ಅಗ್ರಸ್ಥಾನ ಮರಳಿ ಪಡೆಯಲೇಬೇಕು
ಕಳೆದ ಬಾರಿ ಕೈತಪ್ಪಿದ್ದ ಅಗ್ರಸ್ಥಾನವನ್ನು ಮರಳಿ ಪಡೆಯಲೇಬೇಕು ಎಂದು ಪಣತೊಟ್ಟು ಕೆಲಸ ಮಾಡಿದ್ದೆವು. ಅದಕ್ಕೆ ಫಲ ಲಭಿಸಿದೆ. ಈ ಸಾಧನೆಗೆ ಶ್ರಮಿಸಿದ ಎಲ್ಲರಿಗೂ ಶ್ರೇಯ ಸಲ್ಲಬೇಕು ಎನ್ನುತ್ತಾರೆ ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು. ಸ್ವಚ್ಛ ಸರ್ವೇಕ್ಷಣಕ್ಕೆ ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್, ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್, ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನ ರಿಫಾ ತಸ್ಕಿನ್ ಅವರನ್ನು ಸ್ವಚ್ಛತಾ ರಾಯಭಾರಿಯನ್ನಾಗಿ ಪಾಲಿಕೆ ನೇಮಕ ಮಾಡಿಕೊಂಡಿತ್ತು