ನೌಕರ ಕೊಡೆ ಹಿಡಿದ ಫೋಟೊ: ಸ್ಪಷ್ಟನೆ ಕೊಟ್ಟ ಮಹಿಳಾಧಿಕಾರಿ
ಮೈಸೂರು, ಅಕ್ಟೋಬರ್ 22: ಡ್ರೋನ್ ಸರ್ವೇ ವೇಳೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯೊಬ್ಬರಿಗೆ ಕೆಳ ದರ್ಜೆಯ ನೌಕರರೊಬ್ಬರು ಕೊಡೆ ಹಿಡಿದು ನಿಂತಿದ್ದ ಚಿತ್ರವೊಂದು ಈಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದಕ್ಕೆ ಸಾಕಷ್ಟು ಟೀಕೆಗಳೂ ವ್ಯಕ್ತವಾಗಿದ್ದವು. ಅದಕ್ಕೆ ಮಹಿಳಾ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ಗುಂಗ್ರಲ್ ಛತ್ರದ ಬಳಿ ಗ್ರಾ.ಪಂ ಮಹಿಳಾ ಕಾರ್ಯದರ್ಶಿಯೊಬ್ಬರು ಡ್ರೋನ್ ಸರ್ವೇಯಲ್ಲಿ ಪಾಲ್ಗೊಂಡಿದ್ದರು. ಆಗ ಈ ಚಿತ್ರವನ್ನು ತೆಗೆದು ವೈರಲ್ ಮಾಡಲಾಗಿತ್ತು. ತಮ್ಮ ಕೆಳ ದರ್ಜೆಯ ವ್ಯಕ್ತಿಗಳನ್ನು ಅಧಿಕಾರಿಗಳು ನೋಡುವ ರೀತಿ ಇದು ಎಂದು ಹಲವು ಟೀಕೆಗಳೂ ಫೋಟೊಗೆ ವ್ಯಕ್ತಗೊಂಡಿದ್ದವು.
ಮೈಸೂರು: ಡ್ರೋನ್ ಸರ್ವೇ ವೇಳೆ ಗ್ರಾ.ಪಂ ಕಾರ್ಯದರ್ಶಿಗೆ ಛತ್ರಿ ಹಿಡಿದಿರುವ ನೌಕರ
"ನಾವು ಗ್ರಾಮೀಣ ಪ್ರದೇಶದಲ್ಲಿ ಸ್ವಾಮಿತ್ವ ಕಾರ್ಡ್ ನೀಡುವ ಡ್ರೋನ್ ಏರಿಯಲ್ ಸಮೀಕ್ಷೆಯನ್ನು ಮಾಡುತ್ತಿದ್ದೇವೆ. ಈ ಡ್ರೋನ್ಗಳನ್ನು ನೆರಳಿನಲ್ಲಿ ಯಾವಾಗಲೂ ಬಳಸಬೇಕಾಗುತ್ತದೆ. ಆ ಕಾರಣದಿಂದಾಗಿ ಕೊಡೆಗಳನ್ನು ಬಳಸಲಾಗಿದೆʼ ಎಂದು ಸರ್ವೇ ಕಾರ್ಯದಲ್ಲಿದ್ದ ಕೃಷ್ಣಕುಮಾರ್ ಸಿ.ಆರ್. ಅವರೂ ಸ್ಪಷ್ಟಪಡಿಸಿದ್ದರು. ಇದೀಗ ಚಿತ್ರಕ್ಕೆ ಸಂಬಂಧಿಸಿದಂತೆ ಮಹಿಳಾ ಅಧಿಕಾರಿಯೇ ಸ್ಪಷ್ಟನೆ ನೀಡಿದ್ದಾರೆ.
'ಭೂಮಿ ಸರ್ವೇ ಕಾರ್ಯ ನಡೆಯುತ್ತಿರುವಾಗ ಉಪಕರಣಗಳಿಗೆ ಬಿಸಿಲು ಬೀಳಬಾರದು ಎಂದು ಕೊಡೆ ತರಿಸಿದ್ದೆವು. ಕೊಡೆ ಹಿಡಿದ ಜಾಗದಲ್ಲಿ ನಾನು ಬಂದು ನಿಂತಿದ್ದೆ. ಇದು ಉದ್ದೇಶಪೂರ್ವಕ ಅಲ್ಲ. ಆಕಸ್ಮಿಕವಾಗಿ ಕೊಡೆಯ ಕೆಳಗೆ ನಿಂತಿದ್ದಾಗ ಯಾರೋ ಈ ಫೋಟೊ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಈ ಘಟನೆಗೂ ನನಗೂ ಯಾವುದೇ ಸಂಬಂಧ ಇಲ್ಲ. ಈ ರೀತಿ ವೈರಲ್ ಮಾಡಿರುವುದು ನನಗೆ ಮತ್ತು ಕುಟುಂಬದವರಿಗೆ ಮಾನಸಿಕವಾಗಿ ನೋವಾಗಿದೆ. ನಾನು ಸಹ ರೈತನ ಮಗಳು. ನಾನೂ ಜಮೀನಿನಲ್ಲಿ ಕೆಲಸ ಮಾಡುತ್ತೇನೆ' ಎಂದು ತಿಳಿಸಿದ್ದಾರೆ.