ಸ್ವಚ್ಛತೆಗಾಗಿ ಸ್ವತಃ ಪೌರ ಕಾರ್ಮಿಕರಾದ ಮೈಸೂರು ಮೇಯರ್ !
ಮೈಸೂರು, ಜೂನ್ 13 : ವಿವಿಧ ಬೇಡಿಕೆಗಳ ಈಡೇರಿಕೆಗೆ ಗುತ್ತಿಗೆ ನೌಕರರ ಒತ್ತಾಯಿಸಿ ನಡೆಸುತ್ತಿರುವ ಪೌರಕಾರ್ಮಿಕರ ಮುಷ್ಕರ ಹಿನ್ನೆಲೆ ಸಾಂಸ್ಕೃತಿಕ ನಗರಿಯಲ್ಲೂ ಕಸದ ರಾಶಿ ಹೆಚ್ಚಾಗಿದೆ. ಇದಕ್ಕೆ ಪೂರಕವೆಂಬಂತೆ ಸ್ವಚ್ಛ ನಗರಿ ಪಟ್ಟ ಪಡೆದ ಮೈಸೂರಿಗೂ ಇದರ ಕಾವು ತಟ್ಟಿದೆ.
ಮೈಸೂರಿನಲ್ಲಿ ಪೌರಕಾರ್ಮಿಕರ ಪ್ರತಿಭಟನೆ, ಎಲ್ಲಿ ನೋಡಿದರೂ ಕಸವೋ ಕಸ
ದೇವರಾಜ ಮಾರುಕಟ್ಟೆ ಬಳಿ ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ನೀರು ನಿಂತಿದ್ದು, ಕಸವೂ ಅಧಿಕವಾಗಿ ತುಂಬಿಕೊಂಡಿತ್ತು. ಖುದ್ದು ಮೇಯರ್ ಅವರೇ ಕಸ ಗುಡಿಸುವ ಮೂಲಕ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರು.
ಪೌರ ಕಾರ್ಮಿಕರರ ಮುಷ್ಕರದಿಂದ ದೇವರಾಜ ಮಾರುಕಟ್ಟೆಯಲ್ಲಿ ಕಸದ ರಾಶಿ ತುಂಬಿದೆ. ಇದು ವಾಣಿಜ್ಯ ಸ್ಥಳವಾಗಿರುವುದರಿಂದ ಕಸದ ರಾಶಿಯೇ ತುಂಬಿ ತುಳುಕುತ್ತಿದೆ. ಈ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮೇಯರ್ ಎಂ.ಜೆ. ರವಿಕುಮಾರ್, ತಾವೇ ಖುದ್ದಾಗಿ ಕಸವನ್ನು ಗೂಡ್ಸ್ ಆಟೋಗಳಿಗೆ ತುಂಬಲು ಮುಂದಾದರು. ಇದನ್ನು ಕಂಡು ಅವರ ಸ್ನೇಹಿತರು ಕೂಡ ಕೈಜೋಡಿಸಿ ಮಾರುಕಟ್ಟೆಯ ಸುತ್ತಮುತ್ತ ರಾಶಿ ರಾಶಿಯಾಗಿ ಬಿದ್ದಿರುವ ಕಸವನ್ನು ತೆರವುಗೊಳಿಸಲು ಮುಂದಾದರು.
ನಗರ ಪಾಲಿಕೆ ಆವರಣದಲ್ಲಿಯೇ ಕಸದ ರಾಶಿ ತುಂಬಿದೆ. ಪೌರಕಾರ್ಮಿಕರು ಸ್ವಚ್ಛತೆ ಸ್ಥಗಿತಗೊಳಿಸಿರುವುದರಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ಓಡಾಡುವಂತಾಗಿದೆ.