ಪತ್ನಿಗೆ ವಂಚಿಸಿ ಮತ್ತೊಂದು ಮದುವೆ; ಕಾನ್ಸ್ಟೇಬಲ್ ವಿರುದ್ಧ ದೂರು
ಮೈಸೂರು, ಮಾರ್ಚ್ 6: ಮೈಸೂರು ನಗರದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬ ಪತ್ನಿಗೆ ವಂಚಿಸಿ ಮತ್ತೊಂದು ಹುಡುಗಿಯನ್ನು ಮದುವೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.
ಮಹಿಳಾ ಠಾಣೆಯಲ್ಲಿ ದಾಖಲಾಗಿರುವ ದೂರಿನ ಪ್ರಕಾರ ಲಷ್ಕರ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿರುವ ಸಮೀವುಲ್ಲಾ, 2017 ರಲ್ಲಿ ಎಚ್.ಡಿ ಕೋಟೆಯ ಪ್ರಾಥಮಿಕ ಶಾಲೆಯ ಕನ್ನಡ ಶಿಕ್ಷಕಿಯನ್ನು ಮದುವೆಯಾಗಿದ್ದ. ಮದುವೆ ಸಮಯದಲ್ಲಿ ವರದಕ್ಷಿಣೆಯಾಗಿ ಬೈಕ್ ಹಾಗೂ ಚಿನ್ನಾಭರಣ ಪಡೆದುಕೊಂಡಿದ್ದ.
ಕೆಜಿಎಫ್ನಲ್ಲಿ ಮಹದೇವಪುರ ಸಬ್ ಇನ್ಸ್ಪೆಕ್ಟರ್ಗೆ ಚಾಕು ಇರಿತ
ಆರು ತಿಂಗಳು ಪತ್ನಿಯೊಂದಿಗೆ ಅನ್ಯೋನ್ಯವಾಗಿ ಸಂಸಾರ ನಡೆಸಿದ್ದ ಸಮೀವುಲ್ಲಾ, ದಿನ ಕಳೆದಂತೆ ಕ್ಷುಲ್ಲಕ ಕಾರಣಗಳಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ವರ್ಷದ ನಂತರ ಗಂಡ ಸಮೀವುಲ್ಲಾ ಹಾಗೂ ಮನೆಯವರು ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಮಹಿಳೆಗೆ ನಿರಂತರ ಕಿರುಕುಳ ನೀಡುತ್ತಿದ್ದರು ಮತ್ತು ಆಕೆಯ ಬಳಿಯಿದ್ದ ಚಿನ್ನಾಭರಣ ಕಸಿದುಕೊಂಡಿದ್ದರು ಎನ್ನಲಾಗಿದೆ.
ಇತ್ತೀಚಿಗೆ ಪತ್ನಿಯನ್ನು ತವರು ಮನೆಗೆ ಕಳುಹಿಸಿದ ಸಮೀವುಲ್ಲಾ, ಇನ್ನೊಂದು ಹುಡುಗಿ ಜೊತೆ ಮದುವೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ವಂಚನೆಗೊಳಗಾದ ಮಹಿಳೆಯು ಪತಿ ಸಮೀವುಲ್ಲಾ ಹಾಗೂ ಆತನ ಕುಟುಂಬಸ್ಥರ ವಿರುದ್ಧ ದೂರು ನೀಡಿದ್ದಾಳೆ. ಈ ನಡುವೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಆಗಿ ಮೂರು ದಿನ ಕಳೆದರೂ, ಆರೋಪಿ ಸಮೀವುಲ್ಲಾನ ವಿರುದ್ಧ ಪೊಲೀಸ್ ಇಲಾಖೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸಮೀವುಲ್ಲಾನ ಪತ್ನಿ ಆರೋಪಿಸಿದ್ದಾರೆ.