ವಿಧ್ವಂಸಕ ಕೃತ್ಯ ನಡೆಸಲು ಉಗ್ರರ ಸಂಚು: ಮೈಸೂರಿನಲ್ಲಿ ಕಟ್ಟೆಚ್ಚರ
ಮೈಸೂರು, ಆಗಸ್ಟ್ 9 : ರಾಮನಗರದಲ್ಲಿ ಬಂಧನಕ್ಕೊಳಗಾದ ಬಾಂಗ್ಲಾ ಪ್ರಜೆ ಸ್ವಾತಂತ್ರ್ಯ ದಿನಾಚರಣೆಯಂದು ವಿಧ್ವಂಸಕ ಕೃತ್ಯಗಳನ್ನು ನಡೆಸುವ ಬಗ್ಗೆ ಸಂಚು ರೂಪಿಸಿದ ವಿಚಾರ ಬಾಯ್ಬಿಡುತ್ತಿದ್ದಂತೆ ರಾಜ್ಯದ ಪೊಲೀಸ್ ಅಧಿಕಾರಿಗಳು ಕಟ್ಟೆಚ್ಚರ ವಹಿಸಲು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲೂ ಕ್ರಮ ಕೈಗೊಳ್ಳಲಾಗಿದೆ.
ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್, ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಅರಮನೆ, ಬಸ್-ರೈಲ್ವೆ ನಿಲ್ದಾಣ, ಮೃಗಾಲಯ, ಚಾಮುಂಡಿಬೆಟ್ಟ ಮತ್ತಿತರ ಪ್ರವಾಸಿ ತಾಣಗಳಲ್ಲಿ ಬಂದೋಬಸ್ತ್ ಬಗ್ಗೆ ಆಯಾ ಠಾಣೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬೆಂಗಳೂರಲ್ಲಿ ಮತ್ತೊಬ್ಬ ಶಂಕಿತ ಉಗ್ರನ ಬಂಧನ
ಅನುಮಾನಾಸ್ಪದ ವ್ಯಕ್ತಿ ಕಂಡುಬಂದರೆ, ವಾರಸುದಾರರಿಲ್ಲದ ವಸ್ತುಗಳು ಕಂಡುಬಂದರೆ ಸಾರ್ವಜನಿಕರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವಂತೆಯೂ ಆಯುಕ್ತರು ಮನವಿ ಮಾಡಿದ್ದಾರೆ.
ರಾಷ್ಟ್ರೀಯ ತನಿಖಾ ದಳ(ಎನ್ಐಎ)ದ ಅಧಿಕಾರಿಗಳು ಇತ್ತೀಚೆಗೆ ರಾಮನಗರದಲ್ಲಿ ಉಗ್ರ ಮುನೀರ್ ಶೇಖ್ ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆತ ಬಾಂಗ್ಲಾದ ಜೆಎಂಬಿ ಸಂಘಟನೆಯ ನಾಯಕ ಮುನೀರ್ ನ ಬಲಗೈ ಬಂಟ ಎಂಬುದು ತಿಳಿದುಬಂದಿದೆ.
ಬಂಧಿತನಿಂದ 3 ಮೊಬೈಲ್, ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಿದ ರಶೀದಿ, ಬಾಂಬ್ ತಯಾರಿಕೆಗೆ ಬಂಗಾಳಿ ಭಾಷೆಯಲ್ಲಿ ಬರೆದಿದ್ದ ಡೈರಿ ವಶವಾಗಿವೆ. ದೇಶದ ಹಲವೆಡೆ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿರುವುದು ಕಂಡುಬಂದಿದೆ. ರಹಸ್ಯ ಸ್ಥಳದಲ್ಲಿ ಆರೋಪಿಯ ವಿಚಾರಣೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.