ಬಲವಂತವಾಗಿ ಗಣಪತಿ ಚಂದಾ ವಸೂಲಿ ಮಾಡಿದರೆ 3 ವರುಷ ಜೈಲು
ಮೈಸೂರು, ಸೆಪ್ಟೆಂಬರ್ 10: ಗೌರಿ, ಗಣೇಶ ಹಬ್ಬದ ವೇಳೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವವರು ಆಯಾ ಬಡಾವಣೆ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಅನುಮತಿ ಪಡೆಯುವುದು ಕಡ್ಡಾಯ ಎಂದು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬಮಣ್ಯೇಶ್ವರರಾವ್ ತಿಳಿಸಿದ್ದಾರೆ.
ಗಣಪತಿ ಪ್ರತಿಷ್ಠಾಪನೆ ಮಾಡುವವರು ಪೇಪರ್ ಮೌಲ್ಡ್, ಪ್ಲಾಸ್ಟರ್ ಆಫ್ ಪ್ಯಾರೀಸ್ ನಿಂದ ತಯಾರಿಸಿದ ಗಣಪತಿಯನ್ನು ಕೂರಿಸಬಾರದು . ನಗರಪಾಲಿಕೆ ಸೂಚನೆ ಮೇರೆಗೆ ಸೀಸ ಮುಕ್ತ ಬಣ್ಣವಿರುವ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು. ಬಲವಂತವಾಗಿ ಚಂದಾ ವಸೂಲಿ ಮಾಡುವುದನ್ನು ನಿಷೇಧಿಸಲಾಗಿದೆ.
ಗಣೇಶನ ಮೂರ್ತಿಯನ್ನು ನೀರಲ್ಲಿ ಮುಳುಗಿಸೋದು ಯಾಕೆ ಗೊತ್ತಾ?
ಬಲವಂತವಾಗಿ ಚಂದಾ ವಸೂಲಿ ಮಾಡಿದರೆ ಮೂರು ವರ್ಷಗಳ ಸಜೆ, ದಂಡ ವಿಧಿಸಬಹುದಾಗಿರುತ್ತದೆ. ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವವರು ಪ್ರತಿಷ್ಠಾಪನೆ ಸ್ಥಳ, ವಿಸರ್ಜಿಸುವ ಸ್ಥಳ, ಮತ್ತು ಮೆರವಣಿಗೆ ಮಾರ್ಗ ಹಾಗೂ ಇತರೆ ವಿಷಯಗಳ ಬಗ್ಗೆ ಪೂರ್ಣ ಮಾಹಿತಿಯೊಂದಿಗೆ ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಅರ್ಜಿ ನೀಡಿ, ಪೂರ್ವಾನುಮತಿ ಪಡೆಯಬೇಕು.
ಸಾರ್ವಜನಿಕರು ಹಾಗೂ ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ಪ್ರತಿಷ್ಠಾಪನೆ ಸ್ಥಳವನ್ನು ಆಯ್ಕೆ ಮಾಡಬೇಕು. ರಸ್ತೆಯಲ್ಲಿ ಶಾಮಿಯಾನ ಹಾಕಬಾರದು. ಸಾರ್ವಜನಿಕ ಸ್ಥಳವಾಗಿದ್ದಲ್ಲಿ ನಗರಪಾಲಿಕೆಯಿಂದ ಪಡೆದಿರುವ ಅನುಮತಿ ಪತ್ರವನ್ನು ಲಗತ್ತಿಸಬೇಕು.
ವಿದ್ಯುತ್ ಅಳವಡಿಸುವ ಬಗ್ಗೆ ಸೆಸ್ಕ್ ನಿಂದ ಅನುಮತಿ ಪಡೆದಿರಬೇಕು. ಧ್ವನಿವರ್ಧಕ ಅಳವಡಿಸುವವರು ಬೆಳಗ್ಗೆ 6ರಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಡಿಮೆ ಧ್ವನಿಯಲ್ಲಿ ಉಪಯೋಗಿಸಬೇಕು ಎಂದು ತಿಳಿಸಿದ್ದಾರೆ.
ವಿಘ್ನನಾಶಕ ಗಣೇಶನ ಆರಾಧನೆಗೂ ಮುನ್ನ ತಿಳಿದಿರಲಿ ಈ ಸಂಗತಿ
ಮನರಂಜನಾ ಕಾರ್ಯಕ್ರಮಗಳನ್ನು ರಾತ್ರಿ 10 ಗಂಟೆ ಒಳಗೆ ಮುಗಿಸಬೇಕು. ಯಾವುದೇ ಲಾಟರಿ, ಪ್ರವೇಶ ಶುಲ್ಕ ಅಥವಾ ಇನ್ನಿತರೆ ಬಹುಮಾನದ ಯೋಜನೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ.
ವ್ಯವಸ್ಥಾಪಕರು ಗಣಪತಿ ಪ್ರತಿಷ್ಠಾಪನೆ ಸ್ಥಳದಲ್ಲಿ ರಕ್ಷಣೆಗಾಗಿ ತಮ್ಮ ಸಂಘದ ಜನರನ್ನು ನೇಮಿಸಿ ಸೂಕ್ತ ಉಸ್ತುವಾರಿಯನ್ನು ನೋಡಿ ಕೊಳ್ಳುವುದಲ್ಲದೇ ವಿಸರ್ಜನಾ ಸ್ಥಳದಲ್ಲಿ ಮುಂಜಾಗ್ರತಾ ಕ್ರಮವಾಗಿ ನುರಿತ ಈಜುಗಾರರು ಇರುವಂತೆ ವ್ಯವಸ್ಥೆ ಮಾಡಿ ಅಹಿತಕರ ಘಟನೆಗೆ ಅವಕಾಶವಾಗದಂತೆ ನೋಡಿಕೊಳ್ಳಬೇಕು.
ಜೊತೆಗೆ ಹತ್ತಿರದ ಪೊಲೀಸ್ ಠಾಣೆ ಯೊಂದಿಗೆ ಸಂಪರ್ಕವನ್ನು ಇಟ್ಟುಕೊಳ್ಳಬೇಕು. ಗಣಪತಿ ವಿಸರ್ಜನೆಯನ್ನು ಬಾವಿ, ಕೆರೆ, ನದಿಯಲ್ಲಿ ಮಾಡದೆ ಬಕೆಟ್ ನಲ್ಲಿ ವಿಸರ್ಜಿಸಬೇಕು ಅಥವಾ ಮೈಸೂರು ಮಹಾನಗರ ಪಾಲಿಕೆಯವರು ಗಣಪತಿ ವಿಸರ್ಜನೆಗಾಗಿ ನಿಗದಿಪಡಿಸಿರುವ ಸ್ಥಳಗಳ ಬಗ್ಗೆ ಪತಿಕಾ ಪ್ರಕಟಣೆಯಲ್ಲಿ ಪ್ರಕಟಿಸುವ ಮಾಹಿತಿ ಮುಂಚಿತವಾಗಿ ಪಡೆದುಕೊಂಡು ಗಣಪತಿ ವಿಸರ್ಜಿಸಿ, ಪರಿಸರ ಮಾಲಿನ್ಯ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.