ರಾತ್ರಿ ವೇಳೆ ತ್ಯಾಜ್ಯ ಸಂಗ್ರಹಕ್ಕೆ ಮೈಸೂರು ಪಾಲಿಕೆ ತಯಾರಿ: ಪ್ರತ್ಯೇಕ ತಂಡ ರಚನೆ
ಮೈಸೂರು, ಏಪ್ರಿಲ್ 10: ಸ್ವಚ್ಛನಗರಿ ಖ್ಯಾತಿ ಹೊತ್ತ ಮೈಸೂರು ನಗರವನ್ನು ಸದಾಕಾಲ ಸ್ವಚ್ಛವಾಗಿರಿಸುವ ನಿಟ್ಟಿನಲ್ಲಿ ಮೈಸೂರು ಮಹಾನಗರ ಪಾಲಿಕೆ ಹೊಸ ಯೋಜನೆಯೊಂದನ್ನು ರೂಪಿಸಿದೆ.
ಇಷ್ಟು ದಿನಗಳ ಕಾಲ ಮುಂಜಾನೆ ವೇಳೆ ಮಾತ್ರ ಸಂಗ್ರಹಿಸುತ್ತಿದ್ದ ಕಸವನ್ನು, ಇನ್ನು ಮುಂದೆ ರಾತ್ರಿ ವೇಳೆಯೂ ಸಂಗ್ರಹಿಸುವ ಮೂಲಕ ದಿನದ ಇಪ್ಪತ್ನಾಲ್ಕು ತಾಸು ಮೈಸೂರಿನಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ನಗರಪಾಲಿಕೆ ತನ್ನ ಹೆಜ್ಜೆ ಇಡಲು ನಿರ್ಧರಿಸಿದೆ. ಸ್ವಚ್ಛತೆಗಾಗಿ ಪೌರ ಕಾರ್ಮಿಕರು ಹಗಲಿರುಳು ಶ್ರಮಿಸುತ್ತಾರೆ. ಆದರೆ, ರಾತ್ರಿ ಆಗುತ್ತಿದ್ದಂತೆಯೇ ನಗರ ಗಬ್ಬೆದ್ದು ಹೋಗುತ್ತದೆ. ಕಾರಣ, ರಸ್ತೆಬದಿ ವ್ಯಾಪಾರದಿಂದ ಉತ್ಪತ್ತಿಯಾಗುವ ತ್ಯಾಜ್ಯ. ಈ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಮುಕ್ತಿ ಹಾಡಲು ಮಹಾನಗರ ಪಾಲಿಕೆ ಮುಂದಾಗಿದೆ.
ರಸ್ತೆ ಬದಿ ವ್ಯಾಪಾರದಿಂದ ಕಸ ಉತ್ಪತ್ತಿ
ಮೈಸೂರು ನಗರದ ಪ್ರಮುಖ ವ್ಯಾಪಾರಿ ಸ್ಥಳಗಳಾದ ದೇವರಾಜ ಮಾರುಕಟ್ಟೆ, ಶಿವರಾಂಪೇಟೆ, ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ, ಧನ್ವಂತ್ರಿ ರಸ್ತೆ, ಇರ್ವಿನ್ ರಸ್ತೆ, ದೊಡ್ಡಗಡಿಯಾರ ಆಸುಪಾಸು, ಗಾಂಧಿವೃತ್ತ, ಅಶೋಕ ರಸ್ತೆ ಸೇರಿದಂತೆ ಹಲವಾರು ಕಡೆಗಳಲ್ಲಿ ರಾತ್ರಿ ರಸ್ತೆ ಬದಿ ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತದೆ. ಆದರೆ, ವ್ಯಾಪಾರ ವಹಿವಾಟು ಮುಕ್ತಾಯಗೊಂಡ ನಂತರ ಉತ್ಪತ್ತಿಯಾಗುವ ತ್ಯಾಜ್ಯವನ್ನು ವರ್ತಕರು ಮನಬಂದಲ್ಲಿ ವಿಲೇವಾರಿ ಮಾಡುತ್ತಿರುವುದು ಸಾರ್ವಜನಿಕರ ಮುಜುಗರಕ್ಕೆ ಕಾರಣವಾಗಿದೆ.
ಬೀದಿ ಬದಿ ವ್ಯಾಪಾರಸ್ಥರು ಎಲ್ಲೆಂದರಲ್ಲಿ ತಾಜ್ಯ ವಿಲೇವಾರಿ ಮಾಡಲು ಪಾಲಿಕೆ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದೆ ಇರುವುದು ಕೂಡ ಒಂದು ಪ್ರಮುಖ ಕಾರಣವಾಗಿದೆ. ಈ ಸಮಸ್ಯೆಯನ್ನು ಮನಗಂಡ ಮಹಾನಗರ ಪಾಲಿಕೆಯು ರಾತ್ರಿ ರಸ್ತೆ ಬದಿ ವ್ಯಾಪಾರದಿಂದ ಉತ್ಪತ್ತಿಯಾಗುವ ತ್ಯಾಜ್ಯ ಸಂಗ್ರಹಿಸಲು ಹಾಗೂ ವಿಲೇವಾರಿ ಮಾಡಲು ಯೋಜನೆ ರೂಪಿಸಿದೆ.
ಪ್ರತ್ಯೇಕ ತಂಡ ರಚನೆ
ರಸ್ತೆ ಬದಿ ವ್ಯಾಪಾರಿಗಳಿಂದ ತ್ಯಾಜ್ಯ ಸಂಗ್ರಹಿಸಲು ವಲಯವಾರು ತಂಡಗಳನ್ನು ನಗರಪಾಲಿಕೆ ರಚಿಸಲಿದೆ. ಈ ತಂಡದವರು ನಿಗದಿಪಡಿಸಿದ ಸಮಯದಲ್ಲಿ ರಸ್ತೆ ಬದಿಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವವರ ಬಳಿ ತೆರಳಿ ತ್ಯಾಜ್ಯವನ್ನು ಸಂಗ್ರಹಿಸಿ ರಾತ್ರಿಯೇ ವಿಲೇವಾರಿ ಮಾಡುತ್ತಾರೆ. ಇದಕೋಸ್ಕರ ಪೌರಕಾರ್ಮಿಕರನ್ನು ಪ್ರತ್ಯೇಕವಾಗಿ ನಿಯೋಜನೆ ಮಾಡಲಾಗುವುದು. ಅಲ್ಲದೆ ಪ್ರತ್ಯೇಕ ಟಿಪ್ಪರ್ ಹಾಗೂ ಲಾರಿಯನ್ನು ಖರೀದಿ ಮಾಡಲು ಪಾಲಿಕೆ ಈಗಾಗಲೇ ಟೆಂಡರ್ ಕರೆದಿದೆ. ಪೌರ ಕಾರ್ಮಿಕರು ತ್ಯಾಜ್ಯ ಸಂಗ್ರಹಿಸಲು ರಾತ್ರಿ ವೇಳೆ ವರ್ತಕರ ಬಳಿ ಬರುವ ಸಂದರ್ಭ ಅವರು ಹಸಿ ಕಸ ಮತ್ತು ಒಣಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ನೀಡಬೇಕು.
ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುತ್ತಿರುವುದು
ಈ ಹಿಂದೆ ಬೀದಿ ಬದಿ ವ್ಯಾಪಾರಿಗಳು ಕಂಟೇನರ್ಗಳಲ್ಲಿ ತ್ಯಾಜ್ಯ ಸುರಿಯುತ್ತಿದ್ದರು. ಆದರೆ, ಮೈಸೂರು ನಗರ ಕಂಟೇನರ್ ಮುಕ್ತವಾಗಿರುವ ಹಿನ್ನೆಲೆಯಲ್ಲಿ ಇದೀಗ ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುತ್ತಿರುವುದು ಕಂಡು ಬಂದಿದೆ. ಈ ರೀತಿ ಮಾಡುವ ಬದಲು ಸದ್ಯದ ಮಟ್ಟಿಗೆ ನಿರ್ದಿಷ್ಟ ಪ್ರದೇಶದಲ್ಲಿ ಬೀದಿ ಬದಿ ವ್ಯಾಪಾರಿಗಳು ಒಂದು ಪ್ಲಾಸ್ಟಿಕ್ ಡ್ರಮ್ ಇಟ್ಟುಕೊಂಡು ಅದರಲ್ಲಿ ತ್ಯಾಜ್ಯ ತುಂಬಿ ಇಟ್ಟರೆ ಬೆಳಗ್ಗೆ ಪೌರ ಕಾರ್ಮಿಕರಿಗೆ ತ್ಯಾಜ್ಯ ವಿಲೇವಾರಿ ಮಾಡಲು ಅನುಕೂಲವಾಗುತ್ತದೆ ಎಂಬುದು ನಗರಪಾಲಿಕೆ ಅಧಿಕಾರಿಗಳ ಸಲಹೆಯಾಗಿದೆ.
ಸ್ವಚ್ಛತೆ ಕುರಿತು ಅರಿವು
ಈಗಾಗಲೇ ನಗರಪಾಲಿಕೆಯ ತಂಡವೊಂದು ರಾತ್ರಿ ಗಸ್ತು ತಿರುಗುತ್ತಿದ್ದು, ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ದಂಡ ವಿಧಿಸುತ್ತಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಪಾಲಿಕೆಯಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸದ ಹಿನ್ನೆಲೆಯಲ್ಲಿ ಪ್ರಸ್ತುತ ದಂಡ ವಿಧಿಸುತ್ತಿಲ್ಲ. ಆದರೆ, ಮನಬಂದಲ್ಲಿ ತ್ಯಾಜ್ಯ ವಿಲೇವಾರಿ ಮಾಡಬೇಡಿ ಎಂಬುದು ಪಾಲಿಕೆಯ ಮನವಿಯಾಗಿದೆ. ಬೀದಿ ಬದಿ ವ್ಯಾಪಾರಿಗಳಿಂದ ಇನ್ನು ಮುಂದೆ ತ್ಯಾಜ್ಯ ಸಂಗ್ರಹಿಸಲು ಪ್ರಾರಂಭಿಸಿದ ನಂತರವೂ ಸಹ ಎಲ್ಲೆಂದರಲ್ಲಿ ತ್ಯಾಜ್ಯ ವಿಲೇವಾರಿ ಮಾಡಿದರೆ ದೊಡ್ಡ ಮೊತ್ತದ ದಂಡವನ್ನು ತೆರಬೇಕಾಗುತ್ತದೆ.