ಮೈಸೂರು: ಡಿಸಿ ರೋಹಿಣಿ ಆರೋಪಕ್ಕೆ ಪಕ್ಕಾ ಲೆಕ್ಕ ಕೊಟ್ಟ ಶಿಲ್ಪಾನಾಗ್
ಮೈಸೂರು, ಜೂನ್ 5: ರಾಜ್ಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿರುವ ಮೈಸೂರು IAS ಅಧಿಕಾರಿಗಳ ತಿಕ್ಕಾಟ ಮುಂದುವರೆದಿದ್ದು, ಇಬ್ಬರು ಮಹಿಳಾ ಅಧಿಕಾರಿಗಳ ಜಗಳ ಬಿಡಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯೇ ಬಂದು ಹೋದರೂ ಜಗಳ ಮಾತ್ರ ನಿಂತಿಲ್ಲ.
Recommended Video
ಮೈಸೂರು ಡಿಸಿ vs ಸಿಸಿ ನಡುವಿನ ಕಿತ್ತಾಟ ಇದೀಗ 2ನೇ ದಿನಕ್ಕೆ ಕಾಲಿಟ್ಟಿದೆ. ಸಿಎಸ್ಆರ್ ಫಂಡ್ ವಿಚಾರಕ್ಕೆ ಸಂಬಂಧಿಸಿದಂತೆ ರೋಹಿಣಿ ಸಿಂಧೂರಿ ಲೆಕ್ಕ ಕೇಳಿದ್ದಕ್ಕೆ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಲೆಕ್ಕಕೊಟ್ಟು ತಿರುಗೇಟು ನೀಡಿದ್ದಾರೆ. ಏಟಿಗೆ ಎದುರೇಟು ಎಂಬಂತೆ ಡಿಸಿ ಸ್ಟೈಲ್ನಂತೆ ದಾಖಲಾತಿಗಳ ಮೂಲಕವೇ ಶಿಲ್ಪಾನಾಗ್ ತಮ್ಮ ಮೇಲಧಿಕಾರಿಗೆ ಟಾಂಗ್ ನೀಡಿದ್ದಾರೆ.
ಮೈಸೂರು: ಪಾಲಿಕೆ ಆಯುಕ್ತರ ರಾಜೀನಾಮೆ ಹಿಂದಿದ್ಯಾ ಭೂ ಕಬಳಿಕೆದಾರರ ಸಂಚು
ಜಿಲ್ಲಾಧಿಕಾರಿ ವಿರುದ್ಧ ಮಾತಿನ ಸಮರ
ದೇಣಿಗೆ ರೂಪದಲ್ಲಿ ಪಾಲಿಕೆಗೆ ಬಂದಿರುವ ವಸ್ತುಗಳ ಹಾಗೂ ವೈದ್ಯಕೀಯ ಸಾಮಗ್ರಿಗಳ ಸಮಗ್ರ ಮಾಹಿತಿ ನೀಡಿರುವ ಪಾಲಿಕೆ ಆಯುಕ್ತೆ, ದಾನಿಗಳ ಹೆಸರು ಮತ್ತು ಪಡೆದಿರುವ ಎಲ್ಲ ವೈದ್ಯಕೀಯ ಸಾಮಗ್ರಿಗಳ ಬಗ್ಗೆ ಇಂಚಿಂಚು ಮಾಹಿತಿ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಕೂಡ ಉದ್ದೇಶಪೂರ್ವಕ ಕಿರುಕುಳ, ಅನವಶ್ಯಕ ನೋಟಿಸ್ ನೀಡಿದ್ದರ ಬಗ್ಗೆ ಪುನರುಚ್ಚರಿಸಿರುವ ಪಾಲಿಕೆ ಆಯುಕ್ತೆ, ಜಿಲ್ಲಾಧಿಕಾರಿ ವಿರುದ್ಧ ಮಾತಿನ ಸಮರ ಮುಂದುವರಿಸಿದ್ದಾರೆ. ಇದೇ ವಿಷಯದ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದ ರೋಹಿಣಿ ಸಿಂಧೂರಿ, ಶಿಲ್ಪಾನಾಗ್ ಅವರಿಗೆ ಯಾವುದೇ ಕಿರುಕಳ ನೀಡಿಲ್ಲ ಎಂದಿದ್ದರು.
ಎಲ್ಲಾ ಸಭೆಗಳಿಗೂ ಹಾಜರಾಗಲು ಸಾಧ್ಯವಿಲ್ಲ
ಅಲ್ಲದೇ, ಕೋವಿಡ್ ಸಭೆಗಳಿಗೆ ನಿರಂತರವಾಗಿ ಹಾಜರಾಗುತ್ತಿದ್ದ ಬಗ್ಗೆಯೂ ಸ್ಪಷ್ಟನೆ ನೀಡಿರುವ ಅವರು, ಒತ್ತಡದ ಕೆಲಸದಿಂದ ಆಯುಕ್ತರೇ ಖುದ್ದಾಗಿ ಎಲ್ಲಾ ಸಭೆಗಳಿಗೂ ಹಾಜರಾಗಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕೆಲವೊಮ್ಮೆ ಪಾಲಿಕೆ ಅಧಿಕಾರಿಗಳು, ನೋಡಲ್ ಅಧಿಕಾರಿಗಳು ಸಭೆಗಳಲ್ಲಿ ಭಾಗಿಯಾಗಿದ್ದಾರೆ. ಕೋವಿಡ್ ಮಿತ್ರ ಸ್ಥಾಪನೆ, ಟೆಲಿ ಮೆಡಿಸನ್ ಸೆಂಟರ್ ಸ್ಥಾಪನೆ, ಪಾಸಿಟಿವ್ ಇರುವ ಮನೆಗಳಿಗೆ ತೆರಳಿ ಮನೆ ಮನೆ ಸಮೀಕ್ಷೆ ನಡೆಸುವುದು ಈ ಎಲ್ಲಾ ಕಾರ್ಯಗಳು ಪಾಲಿಕೆ ವತಿಯಿಂದ ನಿರಂತರವಾಗಿ ನಡೆಯುತ್ತಿದೆ.
ಎಲ್ಲಾ ಕೆಲಸವನ್ನು ಜವಾಬ್ದಾರಿಯಿಂದ ಮಾಡಿದ್ದೇನೆ
ಪಾಲಿಕೆ ಆಯುಕ್ತರಿಗೂ ತಮ್ಮದೆ ಆದ ಕಾರ್ಯವ್ಯಾಪ್ತಿ ಇದೆ. ಕೊರೊನಾ ಸಂಬಂಧಿಸಿದಂತೆ ನಮ್ಮ ಸಿಬ್ಬಂದಿ ನಿಯೋಜನೆ ಮಾಡುವ ಕೆಲಸ ನನ್ನದು. ನಾನು ಎಲ್ಲಾ ಕೆಲಸವನ್ನು ಜವಾಬ್ದಾರಿಯಿಂದ ಮಾಡಿದ್ದೇನೆ. ಪಾಲಿಕೆ ವ್ಯಾಪ್ತಿಯಲ್ಲಿ ಕೆಲವು ಸಭೆ ಮಾಡುವ ಅವಶ್ಯಕತೆ ಇದ್ದು, ಅದನ್ನು ಮಾಡಿದ್ದೇನೆ ಎಂದು ಜಿಲ್ಲಾಧಿಕಾರಿಗಳು ತಮ್ಮ ಬಗ್ಗೆ ಮಾಡಿದ್ದ ಪ್ರತಿ ಆರೋಪಕ್ಕೆ ಮಾಧ್ಯಮ ಪ್ರಕಟಣೆ ಮೂಲಕ ಶಿಲ್ಪಾನಾಗ್ ತಿರುಗೇಟು ನೀಡಿದ್ದಾರೆ.
ಮೈಸೂರು ಜಿಲ್ಲಾಡಳಿತದ ವಿರುದ್ಧ ಬಹಿರಂಗ ಯುದ್ಧ
ಇನ್ನು ಜಿಲ್ಲಾಡಳಿತ vs ಮೈಸೂರು ಮಹಾನಗರ ಪಾಲಿಕೆ ನಡುವಿನ ಯುದ್ಧ ಈಗಾಗಲೇ ಬೀದಿಗೆ ಬಂದಿದ್ದು, ಕೋವಿಡ್ ನಿಯಂತ್ರಿಸುವಲ್ಲಿ ಪಾಲಿಕೆಯು ವಿಫಲವಾಗಿದೆ ಎಂಬ ಡಿಸಿ ರೋಹಿಣಿ ಸಿಂಧೂರಿ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ಪಾಲಿಕೆ ವತಿಯಿಂದ ತಿರುಗೇಟು ನೀಡಲಾಗಿದೆ. ಡಿಸಿ ಮಾಡಿದ ಆರೋಪಕ್ಕೆ ತಕ್ಕ ಉತ್ತರ ನೀಡಿರುವ ಪಾಲಿಕೆ, ಈ ಸಂಬಂಧ 127 ಪುಟಗಳ ಸಮಗ್ರ ವರದಿ ಸಿದ್ಧಪಡಿಸಿದ್ದು, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ವರದಿ ಸಲ್ಲಿಕೆ ಮಾಡಲಾಗಿದೆ.
ಇದರಲ್ಲಿ ಕೊರೊನಾ ಸೋಂಕಿಗೆ ಕಡಿವಾಣ ಹಾಕುವ ಸಲುವಾಗಿ ಪಾಲಿಕೆ ವಾರ್ಡ್ ಮಟ್ಟದಲ್ಲಿ ಕೈಗೊಂಡಿರುವ ಕ್ರಮಗಳು, ಟಾಸ್ಕ್ ಪೋರ್ಸ್ ರಚನೆ, ಸಹಾಯವಾಣಿ ರಚನೆ, ಸಂಘ-ಸಂಸ್ಥೆಗಳಿಂದ ಪಡೆದಿರುವ ಸಾಮಗ್ರಿಗಳು ಸೇರಿದಂತೆ ವಿವಿಧ ಕ್ರಮಗಳ ಬಗ್ಗೆ ಸಂಪೂರ್ಣ ವರದಿ ಸಲ್ಲಿಸಲಾಗಿದೆ. ಆ ಮೂಲಕ ಜಿಲ್ಲಾಡಳಿತದ ವಿರುದ್ಧ ಬಹಿರಂಗ ಯುದ್ಧಕ್ಕೆ ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ.