ಲಾಕ್ ಡೌನ್ ನಲ್ಲಿ ಅಧಿಕಾರ ದುರ್ಬಳಕೆ; ಮೈಸೂರು ಪಾಲಿಕೆಯ ಐವರು ನೌಕರರಿಗೆ ನೋಟೀಸ್
ಮೈಸೂರು, ಜೂನ್ 05: ಲಾಕ್ ಡೌನ್ ಸಂದರ್ಭದಲ್ಲಿ ಅಧಿಕಾರ ದುರ್ಬಳಕೆ ಮತ್ತು ಜನರಿಗೆ ವಂಚನೆ ಎಸಗಿದ ಆರೋಪದಲ್ಲಿ ಮೈಸೂರು ನಗರಪಾಲಿಕೆಯ ಐವರು ನೌಕರರಿಗೆ ನೋಟೀಸ್ ನೀಡಲಾಗಿದೆ.
ನಗರಪಾಲಿಕೆಯ ಕಂದಾಯ ವಿಭಾಗದ ಎನ್. ಮಂಜುನಾಥ್, ಆಶ್ರಯ ವಿಭಾಗದ ಮಂಜುನಾಥ್, ವಲಯ ಕಚೇರಿ 8ರ ಕಂದಾಯ ಪರಿಶೀಲಕರಾದ ಲೋಕೇಶ್, ಸಿದ್ದರಾಜು ಹಾಗೂ ನೌಕರ ಸಿ. ರಾಜುಗೆ ನಗರ ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಶೋಕಾಸ್ ನೋಟೀಸ್ ಜಾರಿ ಮಾಡಿದ್ದಾರೆ.
ಸಾಮಾಜಿಕ ಅಂತರವಿಲ್ಲದ ಹಬ್ಬ ಆಚರಣೆ: ಗ್ರಾಮಲೆಕ್ಕಿಗ ಅಮಾನತು
ಏಪ್ರಿಲ್ 14 ರಂದು ಲಾಕ್ ಡೌನ್ ಸಂದರ್ಭ ಹಿನಕಲ್ ಬಡಾವಣೆಯ 25ಕ್ಕೂ ಹೆಚ್ಚು ಮಂದಿಗೆ ಆಹಾರ ಕಿಟ್ ವಿತರಣೆ ಮಾಡಬೇಕಿತ್ತು. ಸ್ಥಳಕ್ಕೆ ಆಗಮಿಸಿ ಬಡವರನ್ನು ಒಂದೆಡೆ ಸೇರುವಂತೆ ನಗರ ಪಾಲಿಕೆ ನೌಕರರು ಜನರಿಗೆ ಸೂಚಿಸಿದ್ದರು. ಆದರೆ ಜನರನ್ನು ಕರೆಸಿ ಆಹಾರ ಕಿಟ್ ನೀಡದೇ ನಾಪತ್ತೆಯಾಗಿದ್ದರು. ಬಳಿಕ ಸಾಮಾಜಿಕ ಕಾರ್ಯ ಕರ್ತ ಗಂಗರಾಜು ಮತ್ತು ಸ್ನೇಹಿತರು ಆಹಾರ ಕಿಟ್ ಹಂಚಿದ್ದರು. ಈ ಐವರು ನಗರಪಾಲಿಕೆ ನೌಕರರ ವಿರುದ್ಧ ಕೋವಿಡ್ 19 ವಿಶೇಷಾಧಿಕಾರಿ ಹರ್ಷ ಗುಪ್ತಾಗೆ ಗಂಗರಾಜು ದೂರು ನೀಡಿದ್ದರು.
ಗಂಗರಾಜು ಅವರ ದೂರಿನನ್ವಯ ಕ್ರಮ ತೆಗೆದುಕೊಳ್ಳಲು ನಗರಪಾಲಿಕೆ ಆಯುಕ್ತರಿಗೆ ಹರ್ಷಗುಪ್ತಾ ಸೂಚನೆ ನೀಡಿದ್ದರು. ಹೀಗಾಗಿ ಈ ಐವರಿಗೂ ಆಯುಕ್ತ ಗುರುದತ್ ಹೆಗ್ಸೆ ನೋಟೀಸ್ ನೀಡಿದ್ದಾರೆ.