ಪೂರ್ಣಚಂದ್ರ ತೇಜಸ್ವಿ ಹುಟ್ಟುಹಬ್ಬ: ಮೈಸೂರಿನಲ್ಲಿ ಸಂಭ್ರಮವೋ ಸಂಭ್ರಮ
ಮೈಸೂರು, ಸೆಪ್ಟೆಂಬರ್. 7: ಸರಳವಾಗಿ ಪರಿಸರ ಜ್ಞಾನವನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯಿಸಿ ಸಾಹಿತ್ಯ ಪ್ರೇಮಿಗಳ ಹೃದಯದಲ್ಲಿ ನೆಲೆಸಿರುವ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ 80ನೇ ವರ್ಷ ಹುಟ್ಟುಹಬ್ಬದ ಅಂಗವಾಗಿ ತೇಜಸ್ವಿ-80' ಎಂಬ ವಿಶೇಷ ಕಾರ್ಯಕ್ರಮಗಳನ್ನು ನಾಳೆ ಸೆ.8 ಮತ್ತು 9ರಂದು ನಗರದಲ್ಲಿ ಏರ್ಪಡಿಸಲಾಗಿದೆ.
ನಗರದ ಕಲಾಮಂದಿರದ ಕಿರುರಂಗಮಂದಿರದ ಆವರಣದಲ್ಲಿ ತೇಜಸ್ವಿ ಕೃತಿಯಾಧರಿತ ನಾಟಕ ಹಾಗೂ ಸಿನಿಮಾಗಳ ಪ್ರದರ್ಶನ, ಸುಚಿತ್ರ ಆರ್ಟ್ ಗ್ಯಾಲರಿಯಲ್ಲಿ ಅವರು ಸೆರೆ ಹಿಡಿದ ಪಕ್ಷಿಗಳ ಚಿತ್ರಗಳ ಪ್ರದರ್ಶನ, ಸಾಹಿತ್ಯ ಕೃತಿಗಳ ಬಗ್ಗೆ ಕಾರ್ಯಕ್ರಮಗಳು ನಡೆಯಲಿವೆ.
'ತೇಜಸ್ವಿ ವಿಸ್ಮಯ' ಆನ್ ಲೈನ್ ರಸಪ್ರಶ್ನೆಯಲ್ಲಿ ಗೆದ್ದವರು ಗೊತ್ತಾಯ್ತಾ?
ಅಭಿರುಚಿ ಪ್ರಕಾಶನ, ಮಾನವ ಮಂಟಪ, ನಿರಂತರ, ರಾಜ್ಯ ರೈತಸಂಘ, ನಗರದ ತೇಜಸ್ವಿ ಗೆಳೆಯರ ಬಳಗ, ಓದುಗರು, ಸಾಹಿತ್ಯ ಪ್ರೇಮಿಗಳು ಸೇರಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.
ಸೆ.8ರಂದು ಬೆಳಗ್ಗೆ 10.30ಕ್ಕೆ, ಸುಚಿತ್ರ ಆರ್ಟ್ ಗ್ಯಾಲರಿಯಲ್ಲಿ ತೇಜಸ್ವಿ ಅವರು ಸೆರೆ ಹಿಡಿದ ಚಿತ್ರ ಪ್ರದರ್ಶನವನ್ನು ಪರಿಸರವಾದಿ ನಾಗೇಶ್ ಹೆಗಡೆ ಉದ್ಘಾಟಿಸುವರು. ಕಿರು ರಂಗಮಂದಿರದಲ್ಲಿ ತೇಜಸ್ವಿ ಅವರ ಕುರಿತು ಕೃಪಾಕರ-ಸೇನಾನಿ ಅವರು ನಿರ್ಮಿಸಿದ ಮಾಯಾ ಲೋಕ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ.
ತೇಜಸ್ವಿ ಮಾಯಾಲೋಕದಿ ಅವಿರತವಾಗಿ ಕೇಳಿಕಥೆಯ
ಮಧ್ಯಾಹ್ನ 12.30ಕ್ಕೆ ನಮ್ಮ ನಡುವಿನ ತೇಜಸ್ವಿ' ಎಂಬ ವಿಷಯದ ಕುರಿತು ಪತ್ರಕರ್ತ ಜಿ.ಎನ್. ಮೋಹನ್ ಹಾಗೂ ವ್ಯಂಗ್ಯಚಿತ್ರ ಕಲಾವಿದ ಗುಜ್ಜಾರಪ್ಪ ಅವರು ವಿವರವಾಗಿ ತಿಳಿಸುವರು. ಮಧ್ಯಾಹ್ನ 2ಕ್ಕೆ ಸತ್ಯಮೂರ್ತಿ ಆನಂದೂರು, ಪ್ರಸಾದ್ ರಕ್ಷಿದಿ ಅವರು ಪೂರ್ಣಚಂದ್ರ ತೇಜಸ್ವಿ ಅವರ ಒಡನಾಟದ ಕುರಿತು ಮಾತನಾಡುವರು.
ನಂತರ ತೇಜಸ್ವಿ ಅವರ ಬಗ್ಗೆ ಜಿ.ಎನ್.ಮೋಹನ್ ಅವರು ನಿರ್ಮಿಸಿರುವ ಸಾಕ್ಷ್ಯ ಚಿತ್ರ ಪ್ರದರ್ಶನ ಮಾಡಲಾಗುವುದು.
ಸಂಜೆ 5ರಿಂದ ವಾರ್ತಾ ಮತ್ತು ಪ್ರಚಾರ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಕುಬಿ ಮತ್ತು ಇಯಾಲ, ಅಬಚೂರಿನ ಪೋಸ್ಟ್ ಆಫೀಸು ಚಲನಚಿತ್ರ ಪ್ರದರ್ಶನ ಹಾಗೂ ಎಂಕ್ಟನ ಪುಂಗಿ ನಾಟಕವನ್ನು ರಂಗ ವಿಸ್ಮಯ ತಂಡ ಪ್ರದರ್ಶನ ಮಾಡಲಿದೆ.
ಕೆಪಿ ಪೂರ್ಣಚಂದ್ರ ತೇಜಸ್ವಿ ಸ್ಮಾರಕ ಲೋಕಾರ್ಪಣೆ
ಸೆ.9ರಂದು ಬೆಳಗ್ಗೆ 8 ಗಂಟೆಗೆ ಡಿ.ಎಚ್.ತನುಜ, ಎ.ಶಿವಪ್ರಕಾಶ್ ಅವರ ನೇತೃತ್ವದಲ್ಲಿ ಕುಕ್ಕರಹಳ್ಳಿ ಕೆರೆ ಬಳಿ ಪಕ್ಷಿ ವೀಕ್ಷಣೆ ಹಾಗೂ ವಿವರಣೆ ನೀಡುವ ಕಾರ್ಯಕ್ರಮ ನಡೆಯಲಿದೆ. ಸೆ.9ಕ್ಕೆ ನಡೆಯುವ ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಪ್ರದೀಪ್ ಕೆಂಜಿಗೆ ನೆರವೇರಿಸುವರು.
ತೇಜಸ್ವಿ ಹೊಸ ವಿಚಾರಗಳು ಬಗ್ಗೆ ಡಿ.ಎಸ್.ನಾಗಭೂಷಣ, ತೇಜಸ್ವಿ ಕಣ್ಣಿನಲ್ಲಿ ಪಕ್ಷಿಗಳು ಬಗ್ಗೆ ಎ.ಶಿವಪ್ರಕಾಶ್ ಹಾಗೂ ತೇಜಸ್ವಿ ಕೃತಿಗಳ ಮರು ಓದು ಕುರಿತು ಡಾ.ಕೆ.ಸಿ.ಶಿವಾರೆಡ್ಡಿಯವರು ಮಾತನಾಡುವರು. ನಂತರ ತೇಜಸ್ವಿ ಕುರಿತು ಸಾಕ್ಷ್ಯ ಚಿತ್ರ ಪ್ರದರ್ಶನ ನಡೆಯಲಿದೆ.