ಕಣ್ಮನ ಸೆಳೆದ ಚುಂಚನಕಟ್ಟೆ ಜಲಪಾತೋತ್ಸವದ ವೈಭವ
ಮೈಸೂರು, ಆಗಸ್ಟ್.12: ಭೋರ್ಗರೆಯುವ ಜಲಪಾತಗಳನ್ನು ನೋಡುವುದೇ ಒಂದು ಸೊಬಗು. ಅದರಲ್ಲೂ ಸಂಜೆಯ ಸಮಯದಲ್ಲಿ ಬಣ್ಣ ಬಣ್ಣದ ದೀಪಗಳಿಂದ ಪ್ರತಿಫಲಿಸುವ ಜಲಪಾತದ ನೀರಿನ ವೈಯ್ಯಾರ, ಹರಿಯುವ ಚಂದ ನೋಡುವುದೆಂದರೆ ಎಲ್ಲಿಲ್ಲದ ಸಂಭ್ರಮ, ಸಂತಸ.
ಕ್ಷಣ ಮಾತ್ರದಲ್ಲಿ ಆ ಸುಂದರ ದೃಶ್ಯಗಳು ಮನಸ್ಸನ್ನು ಯಾವುದೋ ಒಂದು ಭಾವಲೋಕಕ್ಕೆ ಕೊಂಡೊಯ್ಯುತ್ತವೆ. ಬಣ್ಣ ಬಣ್ಣದ ಬೆಳಕಿನಲ್ಲಿ ಕಲ್ಲಿನ ಮೇಲೆ ಜಾರುತ್ತಾ, ನೆಗೆಯುತ್ತಾ, ಚಿಮ್ಮುತ್ತಾ ಹರಿಯುವ ನೀರಿನ ಚಂದವನ್ನು ಎಷ್ಟು ನೋಡಿದರೂ ಸಾಲದು.
ಚುಂಚನಕಟ್ಟೆ: ಧನುಷ್ಕೋಟಿ ಜಲಪಾತ ವೀಕ್ಷಣೆಗೆ ಪ್ರವಾಸಿಗರ ದಂಡು
ಎರಡು ಕಣ್ಣುಗಳಲ್ಲಿ ಮತ್ತೆ ಮತ್ತೆ ತುಂಬಿಕೊಳ್ಳಬೇಕೆಂಬ ಆಸೆ ಹುಟ್ಟಿಸುವ ಮನೋಹರ ದೃಶ್ಯಗಳವು. ಈ ಎಲ್ಲ ಸಂಭ್ರಮ, ಸಂತಸಗಳು ತಾಲೂಕಿನ ಚುಂಚನಕಟ್ಟೆಯ ಧನುಷ್ಕೋಟಿಯಲ್ಲಿ ಮನೆ ಮಾಡಿದ್ದವು. ವಿವಿಧ ಮನರಂಜನೆಯ ರಸದೌತಣದೊಂದಿಗೆ ನಡೆದ ಜಲಪಾತೋತ್ಸವ ಪ್ರವಾಸಿಗರಿಗೆ, ಸುತ್ತಮುತ್ತಲಿನಿಂದ ಆಗಮಿಸಿದ್ದ ಗ್ರಾಮಸ್ಥರಿಗೆ ಹಬ್ಬದ ಮೆರುಗು ನೀಡಿತು.
ಹಸಿರು ಸಿರಿಯ ನಡುವೆ ಕಂಗೊಳಿಸುತ್ತಿದೆ ಅಡ್ಯಾರ್ ಜಲಪಾತ
ತಂಪಾದ ವಾತಾವರಣ ಆಹ್ಲಾದಕರ ಉತ್ಸವಕ್ಕೆ ಸಾಥ್ ನೀಡಿದ್ದು, ತಾಲೂಕಿನ ಶಾಸಕ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರ ಸಾರಥ್ಯದಲ್ಲಿ ವಿಜೃಂಭಣೆಯಿಂದ ಈ ಜಲಪಾತೋತ್ಸವವನ್ನು ವ್ಯವಸ್ಥಿತವಾಗಿ ಆಯೋಜಿಸಲಾಗಿತ್ತು.
ಮುದನೀಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು
ಜಲಪಾತೋತ್ಸವದಲ್ಲಿ ಖ್ಯಾತ ಕಲಾವಿದರಾದ ಮಿಮಿಕ್ರಿ ಗೋಪಿ, ಪ್ರಹ್ಲಾದಜೋಷಿ, ಸಿಲ್ಲಿಲಲ್ಲಿ ರಂಗನಾಥ್, ಜಯ ರಾಮ್ ಹಾಗೂ ಆಕಾಶ್ ಅವರು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮ, ಗೋವಿನಹಾಡು ರೂಪಕ ಕಾರ್ಯಕ್ರಮ ನೆರೆದಿದ್ದ ಅಪಾರ ಜನರಿಗೆ ಮುದ ನೀಡಿತು.
ಜೊತೆಗೆ ಬೆಂಗಳೂರಿನ ಅರ್ಥ ಅಕಾಡೆಮಿಯವರು ಪ್ರಸ್ತುತಪಡಿಸಿದ ಶೀಕೃಷ್ಣದೇವರಾಯ ನೃತ್ಯರೂಪಕ ಕೂಡ ಜನಮನ ಸೆಳೆಯಿತು. ಜನರಂತೂ ಪ್ರತಿಯೊಂದು ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಚಪ್ಪಾಳೆ ತಟ್ಟಿ, ಶಿಳ್ಳೆ ಹಾಕುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದುದು ಕಂಡುಬಂದಿತು. ಸ್ಥಳದಲ್ಲಿ ಅದ್ದೂರಿ ಹಬ್ಬದ ವಾತಾವರಣವೇ ಕಂಡುಬಂದಿತು.
ಹರಿದುಬಂದ ಜನಸಾಗರ
ಜಲಪಾತೋತ್ಸವ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಲೇಸರ್ ಬೆಳಕಿನ ಕಿರಣಗಳ ನಡುವೆ ಜಲಪಾತ ಮತ್ತಷ್ಟು ಸುಂದರವಾಗಿ ಕಾಣುತ್ತಿತ್ತು. ಒಂದೊಂದು ಬಣ್ಣದ ಬೆಳಕಿಗೂ ಒಂದೊಂದು ರೀತಿಯಲ್ಲಿ ಜಲಪಾತ ಅನಾವರಣಗೊಂಡಿತ್ತು.
ಈ ಅಪೂರ್ವ ಜಲಪಾತೋತ್ಸವವನ್ನು ವೀಕ್ಷಿಸಲು ಎಚ್.ಡಿ.ಕೋಟೆ, ಕೆ.ಆರ್.ನಗರ, ಮೈಸೂರು ಮೊದಲಾದ ಸ್ಥಳಗಳಿಂದ ಜನ ಸಾಗರವೇ ಹರಿದುಬಂದಿತ್ತು.
ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮ
ಶಾಸಕ, ಸಚಿವ ಸಾ.ರಾ.ಮಹೇಶ್ ಅವರ ಕಾಲ ಕಾಲದ ಸಲಹೆ, ಸೂಚನೆಯೊಂದಿಗೆ ಜಲಪಾತೋತ್ಸವ ಕಾರ್ಯಕ್ರಮಗಳನ್ನು ಜಿಲ್ಲಾಧಿಕಾರಿ ಅಭಿರಾಮ್, ಜಿ. ಶಂಖರ್, ಉಪತಹಸೀಲ್ದಾರ್ ನಿಖಿಲ್ ಇತರ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಸಹಕಾರದೊಂದಿಗೆ ಅಚ್ಚುಕಟ್ಟಾಗಿ ನಡೆಯಿತು.
ಜನಮನ ಸೆಳೆಯುವಲ್ಲಿ ಯಶಸ್ವಿ
ಪ್ರವಾಸಿಗರನ್ನು ಆಕರ್ಷಿಸಲು, ಪ್ರವಾಸೋದ್ಯಮವನ್ನು ಉತ್ತೇಜಿಸಲು, ಸ್ಥಳದ ಪರಿಚಯ, ಸೌಂದರ್ಯ ಜನರಿಗೆ ತಲುಪಿಸುವ ಸದುದ್ದೇಶಗಳಿಂದ ಹಮ್ಮಿಕೊಂಡಿರುವ ಈ ಜಲಪಾತೋತ್ಸವ ಪ್ರವಾಸಿಗರ, ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು