ಬಂದೇಬಿಟ್ಟಿತು ಚುಂಚನಕಟ್ಟೆ ಜಾತ್ರೆ, ಮತ್ತೇಕೆ ತಡ ಹೋಗೋಣ ಬನ್ನಿ...
ಮೈಸೂರು, ಜನವರಿ 03: ಮೈಸೂರು ಭಾಗದಲ್ಲಿ ನಡೆಯುವ ಜಾತ್ರೆಗಳಲ್ಲಿ ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆಯಲ್ಲಿ ನಡೆಯುತ್ತಿರುವ ಜಾತ್ರೆ ಪ್ರಮುಖವಾಗಿದ್ದು, ಸುಗ್ಗಿಯ ನಂತರ ನಡೆಯುವ ದಕ್ಷಿಣ ಭಾರತದ ಮೊದಲ ಜಾತ್ರೆ ಎಂಬ ಖ್ಯಾತಿಗೆ ಕಾರಣವಾಗಿದೆ. ದಷ್ಠಪುಷ್ಠ ಎತ್ತುಗಳಿಂದ ತುಂಬಿರುವ ದನಗಳ ಜಾತ್ರೆ ಆಕರ್ಷಣೀಯವಾಗಿದೆ.
ಈ ಜಾತ್ರೆಯಲ್ಲಿ ಅನ್ನದಾತನದ್ದೇ ಕಾರುಬಾರು. ಮೈಮುರಿದು ದುಡಿದು ಬೆಳೆದ ಧಾನ್ಯವನ್ನು ಮನೆಗೆ ಸೇರಿಸಿ ನಿಟ್ಟುಸಿರು ಬಿಡುವ ಮೂಲಕ ಮನೋರಂಜನೆ ಪಡೆಯುವ ಮತ್ತು ತಮ್ಮ ಬೇಸಾಯಕ್ಕೆ ಹೆಗಲಾಗಿ ದುಡಿಯುವ ಎತ್ತುಗಳನ್ನು ಮಾರಾಟ ಮಾಡಲು ಮತ್ತು ಖರೀದಿಸಲು ಜಾತ್ರೆಯನ್ನು ನಡೆಸುತ್ತಾ ಅಲ್ಲಿ ಸಂಭ್ರಮ ಪಡುವುದು ಮಾಮೂಲಿಯಾಗಿದೆ.
ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜಾತ್ರೋತ್ಸವ ಸಂಭ್ರಮ
ಹಿಂದಿನ ಕಾಲದಲ್ಲಿ ಜಾತ್ರೆಗೆ ತನ್ನದೇ ಆದ ಸಂಭ್ರಮ, ವೈಭವ, ವಿಶೇಷತೆ ಎಲ್ಲವೂ ಇತ್ತು. ಬದಲಾದ ಕಾಲಘಟ್ಟದಲ್ಲಿ ನಾಮಕಾವಸ್ಥೆಗೆ ಎಂಬಂತೆ ಕಂಡು ಬರುತ್ತಿದೆ. ಜಾತ್ರೆಯ ಸಂಭ್ರಮ ಮೊದಲಿನಂತೆ ಕಂಡು ಬರುತ್ತಿಲ್ಲ. ಜಿಲ್ಲಾಡಳಿತವಾಗಲೀ, ತಾಲೂಕು ಆಡಳಿತವಾಗಲೀ ಜಾತ್ರೆಗೆ ಹೆಚ್ಚಿನ ಆದ್ಯತೆ ನೀಡಿದಂತೆ ಕಂಡು ಬರುತ್ತಿಲ್ಲ. ಆದರೂ ರೈತರು ಖುಷಿಯಾಗಿ ಪಾಲ್ಗೊಳ್ಳುವ ಮೂಲಕ ಜಾತ್ರೆಗೆ ಕಳೆಕಟ್ಟಿದ್ದಾರೆ.
ಚುಂಚನಕಟ್ಟೆ ಜಾತ್ರೆಗೊಂದು ಸುತ್ತು ಹೊಡೆದು ಬಂದರೆ ಹತ್ತು ಹಲವು ವೈಶಿಷ್ಟ್ಯತೆಗಳು ಇಲ್ಲಿ ಒಡಮೂಡುತ್ತದೆ. ಜತೆಗೆ ಸಮಸ್ಯೆಗಳು ಕೂಡ ಕಣ್ಣಿಗೆ ರಾಚುತ್ತಿವೆ. ಜಾತ್ರೆಯಲ್ಲಿ ಖುಷಿಯಿಂದಲೇ ಬೆರೆತು ಸಂಭ್ರಮಿಸುವ ಗ್ರಾಮೀಣರು, ವಿವಿಧ ತಳಿಯ ರಾಸುಗಳು, ಹಲವು ಬಗೆಯ ಘಮ್ಮೆನ್ನುವ ತಿಂಡಿಗಳು, ಆಟದ ಸಾಮಾನುಗಳು ಹೀಗೆ ಮಜಾ ಕೊಡುತ್ತವೆ.
ದುಬಾರಿ ಜೊತೆ ಎತ್ತು
ಇನ್ನು ವಿವಿಧ ಬಗೆಯ ದಷ್ಠಪುಷ್ಠವಾದ ಎತ್ತುಗಳು ಇಲ್ಲಿ ಕಂಡು ಬರುತ್ತಿದ್ದು, ಇವುಗಳ ಬೆಲೆ ಕೇಳಿದರೆ ಒಂದು ಕ್ಷಣ ಶಾಕ್ ಆಗುತ್ತಾರೆ. 30 ಸಾವಿರದಿಂದ ಆರಂಭಿಸಿ ಲಕ್ಷಕ್ಕೂ ಅಧಿಕ ಬೆಲೆ ಬಾಳುವ ದುಬಾರಿ ಜೊತೆ ಎತ್ತುಗಳು ಜಾತ್ರೆಯಲ್ಲಿ ಕಾಣಸಿಗುತ್ತಿವೆ. ಈ ಜಾತ್ರೆಗೆ ಸುತ್ತಮುತ್ತಲ ಹಳ್ಳಿಗಳು ಮಾತ್ರವಲ್ಲದೆ ಸುತ್ತಲಿನ ತಾಲೂಕು, ಜಿಲ್ಲೆಗಳಿಂದಲೂ ಎತ್ತುಗಳನ್ನು ತರಲಾಗುತ್ತದೆ. ಇಲ್ಲಿ ಎತ್ತುಗಳ ಖರೀದಿ ಭರಾಟೆಯೂ ಕಂಡು ಬರುತ್ತದೆ. ಈ ಬಾರಿ ಚುಂಚನಕಟ್ಟೆಯ ಜಾನುವಾರು ಜಾತ್ರೆಗೆ ಸುಮಾರು 2 ಸಾವಿರಕ್ಕೂ ಅಧಿಕ ಜೋಡಿ ಎತ್ತುಗಳು ಬಂದಿದ್ದು ಇನ್ನೆರಡು ದಿನಗಳೊಳಗೆ ಜಾತ್ರಾಮಾಳ ತುಂಬಲಿದ್ದು ರೈತರು ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಲು ತಮ್ಮ ರಾಸುಗಳಿಗೆ ಬೃಹತ್ ಶಾಮಿಯಾನ ವಿದ್ಯುತ್ ಅಲಂಕಾರಿಕ ಚಪ್ಪರಗಳನ್ನು ಹಾಕಿಸಿ ಅಲ್ಲಿ ತಾವು ಪ್ರೀತಿಯಿಂದ ಸಾಕಿದ ಎತ್ತುಗಳನ್ನು ಕಟ್ಟಿ ಎಲ್ಲರನ್ನು ಆಕರ್ಷಿಸುತ್ತಿದ್ದಾರೆ. ಇಲ್ಲಿ ಎತ್ತುಗಳೇ ಹೆಚ್ಚಾಗಿದ್ದು, ಬೀಜದ ಹೋರಿಗಳು ಮತ್ತು ಜಮೀನಿನ ಉಳುಮೆಗೆ ಒಗ್ಗುವ ಹಳ್ಳಿಕಾರ್ ತಳಿಯ ಎತ್ತುಗಳು ಕಾಣಸಿಗುತ್ತಿವೆ.
ಅದ್ದೂರಿ ಮೆರವಣಿಗೆ
ಇಲ್ಲಿಗೆ ರಾಸುಗಳನ್ನು ಕೊಳ್ಳಲು ದೂರದ ಗದಗ, ಹುಬ್ಬಳಿ, ಧಾರವಾಡ, ಗುಲ್ಬರ್ಗ, ವಿಜಾಪುರ, ದಾವಣಗೆರೆ, ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಂದ ಮತ್ತು ಆಂಧ್ರಪ್ರದೇಶ, ಮಹರಾಷ್ಟ್ರ, ತಮಿಳುನಾಡು ಸೇರಿದಂತೆ ಇನ್ನಿತರ ಕಡೆಯಿಂದ ರೈತರು ಬರುವುದು ವಿಶೇಷವಾಗಿದೆ.ರೈತರು ತಮ್ಮ ಎತ್ತುಗಳನ್ನು ಜಾತ್ರಾ ಮಾಳಕ್ಕೆ ಕರೆ ತರುವಾಗ ಔತಣಕೂಟವನ್ನ ಏರ್ಪಡಿಸಿ ವಾದ್ಯಗೋಷ್ಠಿ ಮತ್ತು ಅದ್ದೂರಿ ಮೆರವಣಿಗೆ ಮೂಲಕ ತರುವುದು ಮತ್ತೊಂದು ವಿಶೇಷವಾಗಿದೆ. ಜಾತ್ರೆಗೆ ಬಂದವರು ಇಲ್ಲಿನ ಶ್ರೀರಾಮದೇವರ ದೇವಾಲಯ, ಕಾವೇರಿ ನದಿಯ ಜಲಪಾತ ಮೊದಲಾದವುಗಳನ್ನು ನೋಡಿಕೊಂಡು ಹೋಗಬಹುದಾಗಿದೆ.
ದಕ್ಷಿಣಕಾಶಿ ನಂಜನಗೂಡಿನಲ್ಲಿ ಸಂಭ್ರಮದಿಂದ ನಡೆದ ಚಿಕ್ಕ ಜಾತ್ರೆ
ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜಿಸಿಲ್ಲ
ಇನ್ನು ಜಾತ್ರೆಯಲ್ಲಿ ಲಕ್ಷಾಂತರೂ ಬೆಲೆ ಬಾಳುವ ರಾಸುಗಳನ್ನು ತಂದಿದ್ದು ಇಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜಿಸಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ. ಜತೆಗೆ ಕೆ.ಆರ್.ನಗರದರಿಂದ ಚುಂಚನಕಟ್ಟೆಗೆ ಸಾರ್ವಜನಿಕರು ಜಾತ್ರೆಯನ್ನು ವೀಕ್ಷಿಸಲು ಜಾತ್ರಾ ವಿಶೇಷ ಬಸ್ ಸೌಲಭ್ಯ ಕಲ್ಪಿಸಿಲ್ಲ, ರಾಸುಗಳಿಗೆ ಚಿಕಿತ್ಸೆಯನ್ನು ನೀಡಲು ಪಶು ಚಿಕಿತ್ಸಾ ಕೇಂದ್ರವೂ ಇಲ್ಲ ಎಂಬ ಅಸಮಾಧಾನವೂ ಇಲ್ಲಿದೆ.
ಶ್ರೀರಾಮ ದೇವರ ತೆಪ್ಪೋತ್ಸವ
ಇನ್ನು ಜಾತ್ರೆಯ ವಿಶೇಷತೆ ಬಗ್ಗೆ ಹೇಳುವುದಾದರೆ ಜ.3ರಂದು ಕೆ.ಆರ್.ನಗರದಿಂದ ಚುಂಚನಕಟ್ಟೆಯವರೆಗೆ ಕಾಲ್ನಡಿಗೆಯಲ್ಲಿ ಶ್ರೀರಾಮ ದೇವರ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಲಿದ್ದು, ಜ.13ರಂದು ಸೀತಾಕಲ್ಯಾಣೋತ್ಸವ ಹಾಗೂ ಜ.16ರಂದು ಬ್ರಹ್ಮ ರಥೋತ್ಸವ, ಜ.18 ರಂದು ಶ್ರೀರಾಮ ದೇವರ ತೆಪ್ಪೋತ್ಸವ ನಡೆಯುವುದರೊಂದಿಗೆ ಜಾತ್ರೆಗೆ ತೆರೆಬೀಳಲಿದೆ.