ಮೈಸೂರಿನಲ್ಲಿ ಇನ್ನು ಜೀವಂತವಿದೆ ಬಾಲ್ಯ ವಿವಾಹ: ಪ್ರಕರಣ ದಾಖಲು
ಮೈಸೂರು, ಏಪ್ರಿಲ್ 22: ನಂಜನಗೂಡು ತಾಲ್ಲೂಕಿನ ಹಲ್ಲರೆ ಗ್ರಾಮದ ಹೊರವಲಯದ ದೇವಾಲಯವೊಂದರಲ್ಲಿ ಬಾಲ್ಯವಿವಾಹ ನಡೆದಿರುವ ಕುರಿತು ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕವಿತಾ ಅವರು ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಬಾಲ್ಯ ವಿವಾಹಕ್ಕೊಳಗಾಗಿದ್ದ ಬಾಲಕಿಯನ್ನು ರಕ್ಷಿಸಿ ಪಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದ ಮಲ್ಲೇಶ ನಾಯಕ ಎಂಬುವವರ ಪುತ್ರ ರವಿಕುಮಾರ್ (24) ಎಂಬಾತನಿಗೆ 17 ವರ್ಷ ವಯಸ್ಸಿನ ಯುವತಿಯ ಜೊತೆ ಏ.19 ರಂದು ಹಲ್ಲರೆ ಗ್ರಾಮದ ಎತ್ತಮ್ಮನ ದೇವಸ್ಥಾನದಲ್ಲಿ ಅರ್ಚಕರ ಸಮ್ಮುಖದಲ್ಲಿ ಬಾಲ್ಯವಿವಾಹ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ .
ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕವಿತಾ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಲ್ಯವಿವಾಹಕ್ಕೊಳಗಾಗಿದ್ದ ಯುವತಿಯನ್ನು ರಕ್ಷಿಸಿ ರವಿಕುಮಾರ್ ಹಾಗೂ ದೇವಸ್ಥಾನದ ಅರ್ಚಕ ಸೇರಿ ಇತರರ ಪತ್ತೆಗೆ ಮುಂದಾಗಿದ್ದಾರೆ.