ಮೈಸೂರು ರಂಗಾಯಣ ಬೆಳ್ಳಿ ಹಬ್ಬಕ್ಕೆ ಅದ್ದೂರಿ ಚಾಲನೆ
ಮೈಸೂರು, ಆಗಸ್ಟ್,12 : ಸುಮಾರು ಎರಡುವರೆ ದಶಕಗಳ ರಂಗ ಇತಿಹಾಸ ಹೊಂದಿರುವ ಮೈಸೂರು ರಂಗಾಯಣದ ಬೆಳ್ಳಿ ಹೆಜ್ಜೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೂಮಿಗೀತ ರಂಗಮಂದಿರದಲ್ಲಿ ಬುಧವಾರ ಚಾಲನೆ ನೀಡಿದರು.
ಮೈಸೂರಿನ ರಂಗಾಯಣದ ಬೆಳ್ಳಿಹಬ್ಬವು ಆಗಸ್ಟ್ 12ರ ಬುಧವಾರದಿಂದ ಆರಂಭವಾಗಿದ್ದು, 16ರ ಭಾನುವಾರದವರೆಗೆ ಐದು ದಿನಗಳ ಕಾಲ ನಡೆಯಲಿದ್ದು, ನಾಟಕ ಬೀದಿ ನಾಟಕ, ನಾಡಸಿರಿ ಜಾನಪದ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಬಿ.ವಿ.ಕಾರಂತ ಪ್ರಶಸ್ತಿಯನ್ನು ಹಿರಿಯ ರಂಗಕರ್ಮಿ ವಿ.ರಾಮಮೂರ್ತಿ ಅವರಿಗೆ ಪ್ರದಾನ ಮಾಡಲಾಗುತ್ತದೆ.[ಹಣ ಪಡೆದು ಕೈಕೊಟ್ಟ ಕಲಾವಿದ, ಕಲಾವಿದೆ ನೇಣಿಗೆ ಶರಣು]
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ರಂಗಭೂಮಿಯಿಂದಾಗಿ ನೈತಿಕ ಮೌಲ್ಯಗಳು ಸಮಾಜದಾದ್ಯಂತ ಚಿಗುರೊಡೆದಿದೆ. ಹಲವಾರು ವಿಭಿನ್ನ ಪ್ರಯೋಗಗಳನ್ನು ನಡೆಸುತ್ತಿರುವ ಇದು ಜನರ ಅವಿಭಾಜ್ಯ ಅಂಗವಾಗಿದೆ. ಇಂತಹ ಸಂಸ್ಥೆಯ ಜೊತೆಗೆ ಇದನ್ನು ನಂಬಿ ಬದುಕು ಕಟ್ಟಿಕೊಂಡಿರುವ ಕಲಾವಿದರ ಏಳಿಗೆಗಾಗಿ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಬೆಳ್ಳಿ ಹೆಜ್ಜೆ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್, ನಟ ಪ್ರಕಾಶ್ ರೈ, ರಂಗಾಯಣ ನಿರ್ದೇಶಕ ಜನ್ನಿ, ಉಪನಿರ್ದೇಶಕ ಎಸ್. ಐ ಬಾವಿಕಟ್ಟೆ, ಸಂಚಾಲಕ ಮೈಮ್ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮ ವಿವರ :
ಪ್ರತಿದಿನ ಸಂಜೆ 4 ರಿಂದ 5 ರವರೆಗೆ ಪ್ರಸ್ತುತ ವಸ್ತು ವಿಷಯಾಧಾರಿತ ಬೀದಿ ನಾಟಕಗಳು, ಸಂಜೆ 5 ರಿಂದ 6 ರವರೆಗೆ ಜಾನಪದ ಸಿರಿ ಕಾರ್ಯಕ್ರಮಗಳ ಸರಮಾಲೆ ವನರಂಗ ವೇದಿಕೆಯಲ್ಲಿ ನಡೆಯಲಿವೆ. ರಂಗಾಯಣ ಕಲಾವಿದರಿಂದ ಜ್ಞಾನಪೀಠ ಪುರಸ್ಕೃತ ಯು. ಆರ್. ಅನಂತಮೂರ್ತಿ ಅವರ ಬರಹ ಆಧಾರಿಸಿದ ನಾಟಕಗಳು ನಡೆಯಲಿದೆ.
ಯಾವ ನಾಟಕ, ಯಾವಾಗ?
* ಆಗಸ್ಟ್ 13 ಗುರುವಾರ - ಚೆಕ್ಮೇಟ್
* ಆಗಸ್ಟ್ 14 ಶುಕ್ರವಾರ - ಚಿರೆಬಂದಿವಾಡೆ
* ಆಗಸ್ಟ್ 15 ಶನಿವಾರ - ಪುಗಳೇಂದಿ ಪ್ರಹಸನ
* ಆಗಸ್ಟ್ 16 ಭಾನುವಾರ - ಸಂಸ್ಕಾರ