ಎಂಟಿಬಿ, ವಿಶ್ವನಾಥ್ ಪರ ಬ್ಯಾಟ್ ಬೀಸಿದ ಕಾಂಗ್ರೆಸ್ ಮುಖಂಡ
ಮೈಸೂರು, ಫೆಬ್ರವರಿ 10: ಉಪ ಚುನಾವಣೆಯಲ್ಲಿ ಸೋತಿರುವ ಮಾಜಿ ಸಚಿವರಾದ ಎಂಟಿಬಿ ನಾಗರಾಜ್ ಮತ್ತು ಎಚ್.ವಿಶ್ವನಾಥ್ ಪರವಾಗಿ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಚೆಲುವರಾಯಸ್ವಾಮಿ ಬ್ಯಾಟ್ ಬೀಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಎಚ್.ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್ ಕಾರಣ. ಹೀಗಾಗಿ ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್ ಅವರಿಗೆ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಲೇಬೇಕು ಎಂದು ಮಾಜಿ ಶಾಸಕ ಚೆಲುವರಾಯಸ್ವಾಮಿ ಹೇಳಿದ್ದಾರೆ.
"ನಾವು ಯಾವಾಗಲೂ ಜೊತೆಯಾಗೇ ಇರಲು ಆಗುತ್ತಾ" ಸಿಡಿಮಿಡಿಯಾದ ವಿಶ್ವನಾಥ್
ನಿನ್ನೆ ರಾತ್ರಿ ಮೈಸೂರಿನಲ್ಲಿ ಸ್ನೇಹಿತರ ಮನೆಗೆ ಮಾಜಿ ಶಾಸಕ ಚಲುವರಾಯಸ್ವಾಮಿ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದರು. ಸ್ನೇಹಿತರ ಮನೆಗೆ ಆಗಮಿಸಿದ ಚೆಲುವರಾಯಸ್ವಾಮಿ ಅವರನ್ನು ಎಂ.ಎಲ್.ಸಿ ಸಂದೇಶ್ ನಾಗರಾಜ್ ಭೇಟಿ ಮಾಡಿದರು. ಚೆಲುವರಾಯಸ್ವಾಮಿಗೆ ಮಂಡ್ಯದ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದ್ದರು.
ಈ ವೇಳೆ ಮಾತನಾಡಿದ ಚೆಲುವರಾಯಸ್ವಾಮಿ, ಸ್ನೇಹಿತ ನಿರ್ಮಿಸಿದ್ದ ಕಟ್ಟಡ ಉದ್ಘಾಟನೆಗೆ ಅಂದು ಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇಂದು ಮೈಸೂರಿನಲ್ಲೇ ಇದ್ದಿದ್ದರಿಂದ ಅವರ ಮನೆಗೆ ಭೇಟಿ ನೀಡಿದ್ದೇನೆ. ನಾನು ಸಕ್ರಿಯ ರಾಜಕೀಯದಿಂದ ದೂರ ಉಳಿದಿಲ್ಲ. ನಾನು ವಾರದಲ್ಲಿ 4 ದಿನ ಕ್ಷೇತ್ರದ ಜನರ ಜೊತೆಯಲ್ಲೇ ಇರುತ್ತೇನೆ. ನಾನು ಮಾಧ್ಯಮದ ಮುಂದೆ ಬಂದಿಲ್ಲ ಅಷ್ಟೇ. ಮಾಧ್ಯಮದ ಮುಂದೆ ಬರಲು ಸೂಕ್ತ ಕಾರಣ ಬೇಕು ಹಾಗಾಗಿ ಬಂದಿಲ್ಲ ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸ್ಪೀಡ್ ಆಗಿ ನಡೀತಿದೆ. 17 ಮಂದಿ ಶಾಸಕರನ್ನು ರಾಜೀನಾಮೆ ಕೊಡಿಸಿ ಮತ್ತೆ ಸರ್ಕಾರ ರಚನೆ ಮಾಡಿದ್ದಾರೆ. ಸಾಕಷ್ಟು ಓಡಾಟದ ನಂತರ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. ಇಷ್ಟು ದಿನಗಳ ಕಾಲ ಬಿಜೆಪಿಯಿಂದ ಸೂಕ್ತ ರೀತಿಯಲ್ಲಿ ಸರ್ಕಾರ ಆಡಳಿತ ನಡೆಸಿಲ್ಲ ಎಂದು ಹೇಳಿದರು.
ನಾವು ಅನರ್ಹರೆನ್ನಲು ಸಿದ್ದರಾಮಯ್ಯ ಯಾರು?; ಸೋಮಶೇಖರ್ ತಿರುಗೇಟು
ಮುಂದಿನ ದಿನಗಳಲ್ಲಿ ಅವರು ಹೇಗೆ ಕೆಲಸ ಮಾಡುತ್ತಾರೆ ಅಂತ ನೋಡಬೇಕು. ಹೊಸ ಶಾಸಕರಿಗೆ ಈಗ ತೃಪ್ತಿಯಾಗಿದೆಯಾ ಅಂತ ಗೊತ್ತಿಲ್ಲ. ಅಧಿಕಾರ ಸಿಕ್ಕ ನಂತರ ಹೇಗೆ ಕಾರ್ಯನಿರ್ವಹಿಸುತ್ತಾರೆ ಅಂತ ನೋಡಬೇಕಿದೆ. ಅವರಿಗೂ ಸ್ವಲ್ಪ ದಿನ ಕಾಲಾವಕಾಶ ಕೊಟ್ಟು ಅವರ ಕಾರ್ಯ ವೈಖರಿ ನೋಡೊಣ ಎಂದು ತಿಳಿಸಿದರು.