ರಾಮದಾಸ್ಗೆ ಮತ್ತೆ ಸಂಕಷ್ಟ; ಏನಿದು ಪ್ರೇಮಕುಮಾರಿ ಪ್ರಕರಣ?
ಬೆಂಗಳೂರು, ಅಕ್ಟೋಬರ್ 22 : ಪ್ರೇಮಕುಮಾರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಪ್ರಕರಣ ಮಾಜಿ ಸಚಿವ ಎಸ್. ಎ. ರಾಮದಾಸ್ ಕೊರಳಿಗೆ ಮತ್ತೆ ಸುತ್ತಿಕೊಂಡಿದೆ. ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಅವರಿಗೆ ಸಮನ್ಸ್ ನೀಡಿದೆ.
ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಎ. ರಾಮದಾಸ್ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕ್ರಿಮಿನಲ್ ಪ್ರಕರಣ ದಾಖಲು ಮಾಡಿಕೊಂಡಿದೆ. ನವೆಂಬರ್ 11ಕ್ಕೆ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚನೆ ನೀಡಿದೆ.
ಪ್ರೇಮಕುಮಾರಿ ರಂಪರಾಮಾಯಣಕ್ಕೆ ಹೈರಾಣಾಗಿರುವ ರಾಮದಾಸ್
2014ರ ಫೆಬ್ರವರಿ 14ರಂದು ಪ್ರೇಮಕುಮಾರಿ ಎಂಬುವವರು ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಪ್ರಕರಣದ ಬಗ್ಗೆ ಸಿಐಡಿ ತನಿಖೆಯೂ ನಡೆದಿತ್ತು. ಪೊಲೀಸರು ನ್ಯಾಯಾಲಯಕ್ಕೆ 'ಬಿ' ರಿಪೋರ್ಟ್ ಸಲ್ಲಿಸಿದ್ದರು. ಈಗ ಪುನಃ ಪ್ರಕರಣದ ವಿಚಾರಣೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯಲಿದೆ.
ರಾಮದಾಸ್ ಬೆನ್ನು ಬಿಡದ ಪ್ರೇಮಕುಮಾರಿ, ಕಚೇರಿ ಮುಂದೆ ಪ್ರತಿಭಟನೆ
"ಪ್ರೇಮಕುಮಾರಿ ನನ್ನನ್ನು ಬೆದರಿಸಿ ಹಣ ಕೀಳಲು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಇದಕ್ಕೆ ನಾನು ಮಣಿಯದೇ ಹೋದಾಗ ಆಕೆ, ಆಕೆಯ ಸಂಬಂಧಿಕರು ನನ್ನ ಹೆಸರು ದುರ್ಬಳಕೆ ಮಾಡಿಕೊಂಡು ಅಪಪ್ರಚಾರ ನಡೆಸಿದ್ದಾರೆ" ಎಂದು ರಾಮದಾಸ್ ಪ್ರತಿದೂರನ್ನು ಸಲ್ಲಿಸಿದ್ದಾರೆ.
ಮಾ. ಸಚಿವ ರಾಮದಾಸ್ ಮೇಲೆ ಆರೋಪ ಮಾಡಿದ್ದ ಪ್ರೇಮಕುಮಾರಿ ಚುನಾವಣೆಗೆ
ಪ್ರೇಮಕುಮಾರಿ ನೀಡಿದ ದೂರು ಏನು?
ನನ್ನನ್ನು ಮದುವೆಯಾಗುತ್ತೇನೆ, ಪತ್ನಿಯ ಸ್ಥಾನ ನೀಡುತ್ತೇನೆ ಎಂದು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಆದರೆ, ಮದುವೆಯಾಗದೆ ವಂಚನೆ ಮಾಡಿದ್ದಾರೆ. ಶ್ರೀಕಾಂತದಾಸ್ ಎಂಬುವವರಿಂದ ನನಗೆ ಜೀವ ಬೆದರಿಕೆ ಹಾಕಿಸಿದ್ದಾರೆ ಎಂದು ಪ್ರೇಮಕುಮಾರಿ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ 2014ರ ಫೆಬ್ರವರಿಯಲ್ಲಿ ದೂರು ನೀಡಿದ್ದರು.
'ಬಿ' ರಿಪೋರ್ಟ್ ಸಲ್ಲಿಕೆ
ಈ ಪ್ರಕರಣ ಬೆಳಕಿಗೆ ಬಂದಾಗ ರಾಮದಾಸ್ ಸಚಿವರಾಗಿದ್ದರು. ಆದ್ದರಿಂದ, ಸರ್ಕಾರ ಪ್ರಕರಣದ ಬಗ್ಗೆ ಸಿಐಡಿ ತನಿಖೆಗೆ ಆದೇಶ ನೀಡಿತ್ತು. ತನಿಖೆ ನಡೆಸಿದ್ದ ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ 'ಬಿ' ರಿಪೋರ್ಟ್ ಸಲ್ಲಿಸಿದ್ದರು. 'ಬಿ' ರಿಪೋರ್ಟ್ ರದ್ದುಗೊಳಿಸುವಂತೆ ಕೋರಿ ಪ್ರೇಮಕುಮಾರಿ ಪ್ರತಿಭಟನಾ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಾಲಯ ವಿಚಾರಣೆಗೆ ಮಾನ್ಯ ಮಾಡಿದೆ.
ವಿಚಾರಣೆಗೆ ಅರ್ಹವಾದ ಪ್ರಕರಣ
ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ ಅರ್ಜಿಯ ವಿಚಾರಣೆಗೆ ಒಪ್ಪಿಗೆ ನೀಡಿದ್ದಾರೆ. ಅರ್ಜಿದಾರರ ಹೇಳಿಕೆ ಗಮನಿಸಿದಾಗ ಇದು ವಿಚಾರಣೆಗೆ ಅರ್ಹವಾದ ಪ್ರಕರಣ. ಆರೋಪಿ ಪ್ರಭಾವಿ ಎಂಬುದು ಕಂಡುಬರುತ್ತದೆ ಎಂದು ಹೇಳಿದ್ದಾರೆ. ನವೆಂಬರ್ 11ರಂದು ವಿಚಾರಣೆಗೆ ಹಾಜರಾಗುವಂತೆ ರಾಮದಾಸ್ಗೆ ಸಮನ್ಸ್ ನೀಡಿದ್ದಾರೆ.
ಸೂಕ್ತವಾಗಿ ತನಿಖೆ ನಡೆಸಿಲ್ಲ
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ ಎಂದು ಹೇಳಿದೆ. ಭಾರತೀಯ ದಂಡ ಸಂಹಿತೆ 1862 ಕಲಂ 417 (ವಂಚನೆ) ಮತ್ತು 506ರ (ಬೆದರಿಕೆ) ಅನುಸಾರ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದೆ.