ಕನ್ನಡದ ಸಂಕಟಗಳಿಗೆಲ್ಲ ಕುಲಕಂಟಕರೇ ಕಾರಣ : ಚಂಪಾ
ಮೈಸೂರು, ನವೆಂಬರ್ 24 : "ಕನ್ನಡದ ಸಂಕಟಗಳಿಗೆಲ್ಲ ನಮ್ಮ ಕುಲಕಂಟಕರೇ ಕಾರಣ. 'ಕುಲ ಪುರೋಹಿತ'ರನ್ನು ಸಮ್ಮೇಳನಾಧ್ಯಕ್ಷರಾಗಿ ಕಂಡವರು ಮೈಸೂರು ಜನ... ಈಗ 'ಕುಲ ಕಂಟಕ'ರನ್ನು, 'ಮನೆ ಮುರುಕ'ರನ್ನು ನಮ್ಮ ಮನೆಯ ಎದುರಿನಲ್ಲಿಯೇ ಎದುರಿಸಬೇಕಾಗಿದೆ!"
ಕನ್ನಡಕ್ಕೆ ಒದಗಿರುವ ಸಂಕಟದ ಬಗ್ಗೆ ಹೀಗೆಂದು ವಿಷಾದ ವ್ಯಕ್ತಪಡಿಸಿದವರು 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿರುವ 78 ವರ್ಷ ವಯಸ್ಸಿನ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಊರ್ಫ್ ಚಂಪಾ.
ಚಿತ್ರಗಳು : ಮೈಸೂರಲ್ಲಿ 83ನೇ ಸಾಹಿತ್ಯ ಸಮ್ಮೇಳನ ಸಂಭ್ರಮ
ಇಂದು ನಮ್ಮ ಮನೆಯಲ್ಲಿ ಮಾತ್ರ ಕರೆಂಟು ಹೋಗಿಲ್ಲ, ಇಡೀ ಊರೇ ಕತ್ತಲೆಯಲ್ಲಿ ಮುಳುಗಿದೆ ಎಂದು ಮಾರ್ಮಿಕವಾಗಿ ಇತರ ಭಾಷೆಗಳಿಗೂ ಎದುರಾಗಿರುವ 'ಇಂಗ್ಲಿಷ್' ಎಂಬ ಸಂಕಟದ ಬಗ್ಗೆ ಚಾಟಿ ಬೀಸಿದರು. ಕರ್ನಾಟಕವೇ ಈ ನಿಟ್ಟಿನಲ್ಲಿ ಇಡೀ ದೇಶಕ್ಕೆ ಒಂದು ದಾರಿ ತೋರಿಸಬೇಕು ಎಂದು ಸ್ಫೂರ್ತಿಯುತವಾಗಿ ಭಾಷಣ ಮಾಡಿದರು.
ಮಾತೃಭಾಷೆ ಮಗುವಿನ ಹಕ್ಕು ಎಂಬ ಸರಳ ಸತ್ಯಕ್ಕೂ ಕುರುಡಾಗುವ ನ್ಯಾಯಾಂಗ ವರಿಷ್ಠರು 'ಮಗುವಿಗೆ ಯಾವ ಮಾಧ್ಯಮ ಬೇಕು ಎಂದು ನಿರ್ಣಯಿಸುವುದು ಪೋಷಕರಿಗೆ/ತಂದೆ ತಾಯಿಯರ ಹಕ್ಕು' ಎಂದು ಹೇಳುತ್ತಾರೆ ಎಂದು ಅವರು ಕನ್ನಡಕ್ಕೆ ಮನೆಯಲ್ಲಿಯೇ ಒದಗಿರುವ ಸಂಕಷ್ಟಕ್ಕೆ ಕನ್ನಡಿ ಹಿಡಿದರು.
ಭುವನೇಶ್ವರಿ ದೇಗುಲಕ್ಕೆ ಹೋಗದ, ಮೈಸೂರು ಪೇಟ ನಿರಾಕರಿಸಿದ ಚಂಪಾ
ಮಾತಿನಲ್ಲಿ ಹಾಸ್ಯದ ಜೊತೆಗೆ ವ್ಯಂಗ್ಯ, ವಿಡಂಬನೆಯ ಚಾಟಿ ಬೀಸುವಲ್ಲಿ ನಿಸ್ಸೀಮರಾಗಿರುವ ಚಂಪಾ ಅವರು, ಕನ್ನಡ ಚಳವಳಿ, ಪ್ರಸ್ತುತ ಕರ್ನಾಟಕದಲ್ಲಿನ ರಾಜಕೀಯ ಸನ್ನಿವೇಶ, ಮುಂಬರುವ ಚುನಾವಣೆ, ಯಾವ ಪಕ್ಷಕ್ಕೆ ಕನ್ನಡಿಗರು ಬೆಂಬಲ ನೀಡಬೇಕು ಎಂದು ಮಾತುಗಳನ್ನು ಆಡುತ್ತಲೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿದರು.
ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿ, ಬಿಜೆಪಿ ಪ್ರಧಾನಿಯಲ್ಲ, ಗುಜರಾತ್ ಗೆ ಮಾತ್ರ ಪ್ರಧಾನಿಯಲ್ಲ. ಕರ್ನಾಟಕಕ್ಕೆ ಪ್ರಾದೇಶಿಕ ಪಕ್ಷದ ಅಗತ್ಯವಿದೆ, ಸೆಕ್ಯುಲರ್ ನೆಲೆಗಟ್ಟಿನ ಪ್ರಾದೇಶಿಕ ಪಕ್ಷದ ಅವಶ್ಯಕತೆಯಿದೆ. ಯಾವ ರಾಷ್ಟ್ರೀಯ ಪಕ್ಷಕ್ಕೆ ಪ್ರಾದೇಶಿಕ ಸಮಸ್ಯೆಗಳ ಬಗ್ಗೆ ಬದ್ದತೆಯಿದ್ದು,ಪ್ರಣಾಳಿಕೆಯಲ್ಲಿ ಘೋಷಣೆ ಮಾಡುತ್ತದೆಯೋ ಅಂತಹ ಪಕ್ಷ ಬೇಕಿದೆ ಎಂದು ಕಿವಿಮಾತು ಹೇಳಿದರು.
ಚಂಪಾ ಅವರ ಭಾಷಣದ ಮುಖ್ಯಾಂಶಗಳು
ಅಭಿವ್ಯಕ್ತಿ ಸ್ವಾತಂತ್ರ್ಯ ಕಾಡಿಬೇಡಿ ಗಳಿಸುವಂಥದ್ದಲ್ಲ
ಅಭಿವ್ಯಕ್ತಿ ಸ್ವಾತಂತ್ರ್ಯವೆಂದರೆ ಅದನ್ನು ಅವರು ಅನುಗ್ರಹಿಸಬೇಕು, ಇವರು ದಯಪಾಲಿಸಬೇಕು ಎಂದು ಅವರಿವರನ್ನು ಕಾಡಿಬೇಡಿ ಗಳಿಸಿಕೊಳ್ಳುವಂಥದ್ದಲ್ಲ. ಅದು ನಮ್ಮ ಹಕ್ಕು. ಅನೇಕ ಪ್ರತಿರೋಧಗಳನ್ನು ಎದುರಿಸಿಯೂ ನಾವು ಮತ್ತೆ ಮತ್ತೆ ಈ ಹಕ್ಕನ್ನು ಪ್ರತಿಷ್ಠಾಪಿಸಲು ಹೋರಾಡಬೇಕು.
ಕನ್ನಡ ಭೋರ್ಗರೆವ ನಿನಾದವಾಗಬೇಕು, ಪಾಂಚಜನ್ಯವಾಗಬೇಕು
ಕನ್ನಡ, ಕನ್ನಡ ಎಂಬುದು ಬರೀ ಭಜನೆಯಲ್ಲ. ಅದು ಮತ್ತೊಮ್ಮೆ ಕಹಳೆಯಾಗಬೇಕು. ಭೋರ್ಗರೆವ ನಿನಾದವಾಗಬೇಕು, ಪಾಂಚಜನ್ಯವಾಗಬೇಕು. ಕನ್ನಡ ಚಳವಳಿ ಎಂಬ ಪದಪುಂಜಗಳಿಗೆ ಎಷ್ಟು ಹೊಂದಿಕೊಂಡಿದ್ದೇವೆಂದರೆ, ಕನ್ನಡ ಮತ್ತು ಚಳವಳಿ ಅವಳಿ-ಜವಳಿಯೇನೋ ಎನ್ನುವಷ್ಟರಮಟ್ಟಿಗೆ.
ಹಿಂದಿ, ಕೋಮುವಾದಿಗಳೇ ನಮ್ಮ ನಿಜವಾದ ಶತ್ರುಗಳು
ತಮಿಳರ ವಿರುದ್ಧ ಹೋರಾಡುವುದೇ ಕನ್ನಡ ಚಳವಳಿ ಎಂಬ ಮಿಥ್ಯೆ ಅಳಿದು ಹೋಗಿ, ನಮ್ಮ ನಿಜವಾದ ಶತ್ರುಗಳಾದ ಹಿಂದಿ ವಲಯ ವ್ಯಾಪಾರಿ ವರ್ಗ, ಜಾಗತೀಕರಣದ ಸೋಗಿನಲ್ಲಿ ಬರುತ್ತಿರುವ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಕೋಮುವಾದಿ ಶಕ್ತಿಗಳ ವಿರುದ್ಧ ನಮ್ಮ ದೃಷ್ಟಿಯನ್ನೀಗ ಕೇಂದ್ರೀಕರಿಸಬೇಕಾಗಿದೆ.
ಸೆಕ್ಯೂಲರ್ ಪಕ್ಷಗಳ ಪರವಾಗಿ ಮತ ಚಲಾಯಿಸಬೇಕಿದೆ
ಮತ್ತೊಂದು ಚುನಾವಣೆ ಎದೆಯ ಮೇಲೆ ಬಂದಿರುವ ಹೊತ್ತಿನಲ್ಲಿ, ನಮ್ಮ ಪ್ರಜಾಸತ್ತೆ, ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ಶಕ್ತಿಗಳನ್ನು ಬೆಂಬಲಿಸುವ ಮೂಲಕ ಸೆಕ್ಯೂಲರ್ ಪಕ್ಷಗಳ ಪರವಾಗಿ ಮತ ಚಲಾಯಿಸಬೇಕಿದೆ. ರಾಜ್ಯದ ಹಿತಾಸಕ್ತಿಯ ಸಂರಕ್ಷಣೆಯ ಹಿನ್ನೆಲೆಯಲ್ಲಿ ನಮ್ಮ ಆಯ್ಕೆ ಸ್ಪಷ್ಟವಾಗಿರಬೇಕು.
ಇಪ್ಪತ್ತೆಂಟು ಎಂಪಿಗಳು ಬಾಯಿ ಬಡಿದುಕೊಂಡರೂ
ಜಯಲಲಿತಾ, ಚಂದ್ರಬಾಬು, ಮಮತಾ ಒಂದೇ ಹೇಳಿಕೆಯಿಂದ ಕೇಂದ್ರವನ್ನು ನಡುಗಿಸುತ್ತಾರೆ. ಕರ್ನಾಟಕದ ಇಪ್ಪತ್ತೆಂಟು ಎಂಪಿಗಳು ನಿಯೋಗ ಒಯ್ದು ಏಕಕಂಠದಿಂದ ಬಾಯಿಬಾಯಿ ಬಡಿದುಕೊಂಡರೂ ಆಗದ ಕೆಲಸವನ್ನು ಈ ರಾಜ್ಯಗಳು ಒಂಟಿದನಿಯಿಂದ ಸಾಧಿಸಬಲ್ಲವು.
ಬಂಡಾಯ ಸಂಘಟನೆ ಈಗ ಅಸ್ತಿತ್ವದಲ್ಲಿ ಇಲ್ಲ
10-15 ವರ್ಷಗಳ ಹಿಂದೆ ತುಂಬ ಕ್ರಿಯಾಶೀಲವಾಗಿದ್ದ ಬಂಡಾಯ ಸಂಘಟನೆ ಈಗ ಅಸ್ತಿತ್ವದಲ್ಲಿ ಇಲ್ಲ. ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ಜೊತೆ ಕೇಸರೀಕರಣ (ಕೋಮುವಾದ) ಸೇರಿಕೊಂಡು ಪರಿಸ್ಥಿತಿ ಉಲ್ಬಣಗೊಂಡಿದೆ. ಬಂಡಾಯ ಸಂಘಟನೆ ಮರುಹುಟ್ಟು ಪಡೆಯುವುದು ಈಗ ಅನಿವಾರ್ಯವಾಗಿದೆ.
ಬದುಕು ವ್ಯಕ್ತಿತ್ವ ಅಕ್ಷರ ರೂಪಿಸಿರುವ ಚಳವಳಿ
ನನ್ನನ್ನು ಮತ್ತೆಮತ್ತೆ ಕಾಡುತ್ತಿರುವ ಚಳವಳಿ, ಕಳೆದ ಶತಮಾನದ ಎಂಬತ್ತರ ದಶಕದ ಗೋಕಾಕ ಚಳವಳಿ. ಚಳವಳಿ ಅಂದರೆ ಅದೊಂದು ನದಿ. ನಾಡಿನ ಅನೇಕ ಚಳವಳಿಗಳು ನನ್ನ ಮಾತನ್ನು, ಅಕ್ಷರಗಳನ್ನೂ, ವ್ಯಕ್ತಿತ್ವವನ್ನೂ, ಬದುಕನ್ನೂ ರೂಪಿಸಿವೆ.