ಜೂನ್ 8 ರಿಂದ ಚಾಮುಂಡಿ ಬೆಟ್ಟ ರೀ ಓಪನ್: ಗಮನಿಸಬೇಕಾದ ಅಂಶಗಳು
ಮೈಸೂರು, ಜೂನ್ 7: ದೇಶಾದ್ಯಂತ ಜೂನ್ 8 ರಿಂದ ದೇವಸ್ಥಾನ, ಮಸೀದಿ ಮತ್ತು ಚರ್ಚ್ ಗಳು ಸೇರಿದಂತೆ ಎಲ್ಲ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಅದರಂತೆ ಕೊರೊನಾ ವೈರಸ್ ಕಾರಣಕ್ಕೆ ಕಳೆದ ಎರಡು ತಿಂಗಳಿನಿಂದ ಮುಚ್ಚಲ್ಪಟ್ಟಿದ್ದ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನ ಸೋಮವಾರ (ಜೂ.8 ) ದಿಂದ ಮತ್ತೆ ತೆರೆಯಲಿದೆ.
Recommended Video
ಈಗಾಗಲೇ ದೇವಾಲಯದ ಆವರಣದಲ್ಲಿ ಸ್ವಚ್ಛತಾ ಕಾರ್ಯ ಪೂರ್ಣಗೊಂಡಿದ್ದು, ಒಳ ಆವರಣದಲ್ಲಿನ ಸಣ್ಣಪುಟ್ಟ ರಿಪೇರಿ ಕಾರ್ಯವನ್ನು ಸಿಬ್ಬಂದಿ ನಡೆಸಿದ್ದಾರೆ.
ಮೈಸೂರು: ಉಳ್ಳವರಿಗೆ ನಂಜುಂಡೇಶ್ವರನ ದರ್ಶನ, ಇಲ್ಲದವರಿಗೆ ಭ್ರಮನಿರಸನ
ಚಾಮುಂಡಿ ಭಕ್ತರು ದೇವಾಲಯ ಪ್ರವೇಶಿಸಲು ಒಂದೇ ದ್ವಾರದಲ್ಲಿ ಅವಕಾಶ ಮಾಡಲಾಗಿದೆ. ಒಂದು ದ್ವಾರದಲ್ಲಿ ಒಳ ಪ್ರವೇಶಿಸಿ, ಮತ್ತೊಂದು ದ್ವಾರದಲ್ಲಿ ಹೊರ ಹೋಗಲು ವ್ಯವಸ್ಥೆ ಮಾಡಲಾಗಿದೆ.
ಥರ್ಮಲ್ ಟೆಸ್ಟ್ ನಡೆಸಿದ ಬಳಿಕ ಪ್ರವೇಶಾವಕಾಶ
ಭಕ್ತರ ಸರತಿ ಸಾಲಿನಲ್ಲಿ ಸಾಮಾಜಿಕ ಅಂತರ ಪಾಲಿಸಲು ಮಾರ್ಕಿಂಗ್ ಮಾಡಿದ್ದು, ಗೋಪುರ ಮುಂಭಾಗದಲ್ಲಿ ಭಕ್ತರಿಗೆ ಸ್ಯಾನಿಟೈಸರ್ ಸಿಂಪಡಣೆ ಮತ್ತು ಥರ್ಮಲ್ ಟೆಸ್ಟ್ ನಡೆಸಿದ ಬಳಿಕ ಮಾಸ್ಕ್ ಹಾಕಿದ್ದವರಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗುತ್ತದೆ.
ಚಾಮುಂಡಿಯ ದರ್ಶನ ಇರುತ್ತೆ, ಆದರೆ ಪ್ರಸಾದ ಹಾಗೂ ವಿವಿಧ ಸೇವೆಗಳು ಇರುವುದಿಲ್ಲ. ಮಹಿಷ ಪ್ರತಿಮೆ ಮುಂಭಾಗದಿಂದಲೇ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಬೆಟ್ಟಕ್ಕೆ ಬರುವ ವಾಹನಗಳಿಗೆ ಹೊಸ ನಿಲ್ದಾಣದಲ್ಲಿ ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದೆ.
ಬೆಳಿಗ್ಗೆ ಪೂಜೆಯಾದ ಮಂಗಳಾರತಿಯನ್ನೇ ಪಡೆಯಬೇಕು
ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಮಾತನಾಡಿ, ""ಭಕ್ತರು ದೇವರ ಬಳಿ ಬರುವುದೇ ಬೇಡಿಕೊಳ್ಳಲು. ನಾಳೆಯಿಂದ ಬರುವ ಪ್ರತಿಯೊಬ್ಬ ಭಕ್ತಾಧಿಗೂ ಮಂಗಳಾರತಿ ಇರುವುದಿಲ್ಲ. ಬೆಳಿಗ್ಗೆ ಪೂಜೆಯಾದ ಮಂಗಳಾರತಿಯನ್ನೇ ಪಡೆಯಬೇಕು'' ಎಂದು ಹೇಳಿದ್ದಾರೆ. ಎಂದಿನಂತೆ ಪ್ರಾತಃ ಕಾಲ ಪೂಜೆ ಮುಂಜಾನೆ 5.30 ರಿಂದ 7.30 ರ ವರೆಗೆ ನಡೆಯಲಿದೆ. ಅದೇ ರೀತಿ ಸಂಜೆ 6 ರಿಂದ 7.30 ರ ವರೆಗೆ ನಡೆಯಲಿದೆ. ಲಾಕ್ಡೌನ್ ಸಮಯದಲ್ಲಿ ಹೇಗೆ ನಡೆಯುತ್ತಿತ್ತೋ ಹಾಗೆ ನಡೆಯುತ್ತದೆ ಎಂದರು.
ಜೂನ್ 8ಕ್ಕೆ ತೆರೆಯಲು ಸಜ್ಜಾಗುತ್ತಿದೆ ಮೈಸೂರು ಮೃಗಾಲಯ
ಭಕ್ತರಿಗೆ ಹಣ್ಣು-ಕಾಯಿ ತರಲು ಅವಕಾಶ ಕೊಟ್ಟಿಲ್ಲ
ಸರ್ಕಾರವು ಭಕ್ತರಿಗೆ ಹಣ್ಣು-ಕಾಯಿ ತರಲು ಅವಕಾಶ ಕೊಟ್ಟಿಲ್ಲ, ಇದು ಇಟ್ಟರೆ ಹೊಡೆದು ಹೋಗುವ ಹಾಗೂ ಏರಿದರೆ ಮೇಲೆ ಬಂದು ಬಿಡುವ ಕಾಲ. ಹೀಗಾಗಿ ಭಕ್ತರು ಸೂಕ್ಷ್ಮವಾಗಿ ಕಟ್ಟುನಿಟ್ಟು ಪಾಲಿಸಬೇಕು ಎಂದು ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ತಿಳಿಸಿದರು.
ಅದೇ ರೀತಿ ನಾಳೆ ಸೋಮವಾರದಿಂದ ಗಣಪತಿ ಸಚ್ಚಿದಾನಂದ ಆಶ್ರಮ ಕೂಡಾ ತೆರೆಯಲಿದ್ದು, ಆದರೆ ವೆಂಕಟೇಶ್ವರ ದೇವಾಲಯಕ್ಕೆ ಮಾತ್ರ ಪ್ರವೇಶವಿದೆ ಎಂದು ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಸ್ಪಷ್ಟನೆ ನೀಡಿದರು.
ಶುಕವನವನ್ನು ಪರಿಸ್ಥಿತಿ ನೋಡಿಕೊಂಡು ತೆರೆಯಲಾಗುವುದು
ಮುಂದೆ ಹಂತಹಂತವಾಗಿ ಆಶ್ರಮದ ಎಲ್ಲಾ ಸ್ಥಳಗಳಿಗೂ ಅವಕಾಶ ಮಾಡಲಾಗುತ್ತದೆ, ಅಲ್ಲಿಯವರೆಗೆ ಭಕ್ತಾಧಿಗಳು ಸಾವಧಾನದಿಂದ ವರ್ತನೆ ಮಾಡಬೇಕು. ದೇವಾಲಯದಲ್ಲಿ ದೇವರ ದರ್ಶನಕ್ಕೆ ಮಾತ್ರ ವ್ಯವಸ್ಥೆ ಇರುತ್ತದೆ ಹೊರತು ಯಾವುದೇ ಕಾಣಿಕೆ ನೀಡುವ ಹಾಗಿಲ್ಲ ಎಂದು ತಿಳಿಸಿದರು.
ರಾಜ್ಯವೂ ಸೇರಿದಂತೆ ಅಂತರಾಜ್ಯದ ಭಕ್ತರಿಗೆ ಲೈವ್ ನಲ್ಲಿ ದರ್ಶನ ಕೊಡುತ್ತೇವೆ. ಆಶ್ರಮದ ಶುಕವನದಲ್ಲಿರುವ ಹಕ್ಕಿಗಳು ಹಿಂದೆಂದಿಗಿಂತಲೂ ಚೆನ್ನಾಗಿವೆ. ಶುಕವನವನ್ನು ಕೂಡಾ ಮುಂದೆ ಪರಿಸ್ಥಿತಿ ನೋಡಿಕೊಂಡು ತೆರೆಯಲಾಗುವುದು, ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಪಾಲಿಸಬೇಕು ಎಂದು ಸಚ್ಚಿದಾನಂದ ಸ್ವಾಮೀಜಿ ಮಾಹಿತಿ ನೀಡಿದರು.