ಸರಳ ಹಾಗೂ ಸಾಂಪ್ರದಾಯಿಕವಾಗಿ ನಡೆದ ಚಾಮುಂಡೇಶ್ವರಿ ದೇವಿಯ ರಥೋತ್ಸವ
ಮೈಸೂರು, ಅಕ್ಟೋಬರ್ 29: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಕೊನೆ ಘಟ್ಟವಾದ ಚಾಮುಂಡೇಶ್ವರಿ ದೇವಿಯ ರಥೋತ್ಸವ ಗುರುವಾರ ಸರಳ ಮತ್ತು ಸಾಂಪ್ರದಾಯಿಕವಾಗಿ ನೆರವೇರಿತು.
ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ದೊಡ್ಡ ರಥದ ಬದಲು, ಈ ಬಾರಿ ಚಿಕ್ಕ ರಥದಲ್ಲಿ ನಾಡದೇವತೆ ತಾಯಿ ಚಾಮುಂಡೇಶ್ವರಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ರಥೋತ್ಸವ ನೆರವೇರಿಸಲಾಯಿತು. ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರಥವನ್ನು ಎಳೆಯುವ ಮೂಲಕ ರಥೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದರು.
ಅರಮನೆ ಆವರಣದಲ್ಲಿ ಮಗನೊಂದಿಗೆ ಕಾಲ ಕಳೆದ ಯದುವೀರ್ ಒಡೆಯರ್
ದಸರಾ ಮುಗಿದ ನಂತರ ಜಾತ್ರೆ ಆಯೋಜನೆ ಮಾಡುತ್ತಿದ್ದ ಅಂದಿನ ಮಹಾರಾಜರು, ರಥೋತ್ಸವದ ಮೂಲಕ ಭಕ್ತರಿಗೆ ದೇವಿಯ ದರ್ಶನಕ್ಕೆ ವ್ಯವಸ್ಥೆ ಮಾಡುತ್ತಿದ್ದರು. ಆದರೆ ಇತಿಹಾಸದಲ್ಲಿ ಇದೇ ಮೊದಲ ಬಾರಿ ರಥೋತ್ಸವದ ಅದ್ಧೂರಿತನ ಮತ್ತು ವಿಜೃಂಭಣೆಯನ್ನು ಕೊರೊನಾ ವೈರಸ್ ಕಸಿದುಕೊಂಡಿದೆ.
ಕೊರೊನಾ ವ್ಯಾಪಕವಾಗಿ ಹರಡಬಾರದೆಂಬ ದೃಷ್ಠಿಯಿಂದ ಈ ಬಾರಿ ಸಾರ್ವಜನಿಕರಿಲ್ಲದೆ ಬೆರಳಣಿಕೆಯಷ್ಟು ಜನರ ಮಧ್ಯೆ ರಥೋತ್ಸವ ನಡೆಯಿತು. ಇದರಿಂದ ದೊಡ್ಡ ರಥ ಶೆಡ್ ನಲ್ಲೇ ಉಳಿಯಬೇಕಾಯಿತು. ಚಿಕ್ಕ ತೇರಿಗೆ ಸರಳವಾಗಿ ಹೂವಿನ ಅಲಂಕಾರ ಮಾಡಲಾಗಿತ್ತು.
ಇದೇ ವೇಳೆ ಮಾತನಾಡಿದ ಯದುವೀರ್ ಅವರು, ಅರಮನೆಯ ಸಂಪ್ರದಾಯದಂತೆ ಈ ಕಷ್ಟದ ಸಮಯದಲ್ಲಿ ರಥೋತ್ಸವ ನಡೆದಿದೆ. ಜಗತ್ತಿಗೆ ಕಾಡುತ್ತಿರುವ ಕೊರೊನಾ ವೈರಸ್ ನಿವಾರಣೆ ಆಗಲಿ. ಇಡೀ ನಾಡಿನ ಜನತೆಗೆ ಶುಭವಾಗಲಿ ಎಂದು ಶುಭ ಕೋರಿದರು.
ಸಂಪ್ರದಾಯಕ್ಕೆ ಧಕ್ಕೆ ಬಾರದಂತೆ ರಥೋತ್ಸವ ನಡೆದಿದೆ. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ತೆಪ್ಪೋತ್ಸವ ಇರುವುದಿಲ್ಲ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ತಿಳಿಸಿದರು. ರಥೋತ್ಸವದಲ್ಲಿ ಶಾಸಕರುಗಳಾದ ಜಿ.ಟಿ ದೇವೇಗೌಡ, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ ಭಾಗಿಯಾಗಿದ್ದರು.