ಆಷಾಢ ಶುಕ್ರವಾರ ಚಾಮುಂಡೇಶ್ವರಿ ದರ್ಶನಕ್ಕೆ ಮಾರ್ಗಸೂಚಿ
ಮೈಸೂರು, ಜೂನ್ 30: ಆಷಾಢ ಮಾಸದ ಆಷಾಢ ಶುಕ್ರವಾರ ಹಾಗೂ ತಾಯಿ ವರ್ಧಂತಿಯ ದಿನ ಮೈಸೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ಸಾವಿರಾರು ಭಕ್ತಾಧಿಗಳು ಆಗಮಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಪೂರ್ವ ಸಿದ್ಧತೆಯ ಕಾರ್ಯಗಳ ಬಗ್ಗೆ ಶಾಸಕರಾದ ಎಸ್. ಎ. ರಾಮದಾಸ್ ಪ್ರಗತಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಶಾಸಕ ರಾಮದಾಸ್, "ಜುಲೈ ತಿಂಗಳಾದ್ಯಂತ ಅಂದರೆ ದಿನಾಂಕ 1 ರಿಂದ ಜುಲೈ 28 ರ ತನಕ ಆಷಾಢ ಮಾಸದಲ್ಲಿ ಬರುವ ಶುಕ್ರವಾರ ಮತ್ತು ತಾಯಿ ವರ್ಧಂತಿಯ ದಿನಗಳಲ್ಲಿ ಸಾವಿರಾರು ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೈಗೊಳ್ಳಬೇಕಾದ ಕಾರ್ಯಗಳ ವೀಕ್ಷಣೆ ಮತ್ತು ಪ್ರಗತಿ ಪರಿಶೀಲನೆ ನಡೆಸಲಾಯಿತು" ಎಂದರು.
Ashadha Amavasya 2022 : ಆಷಾಢ ಅಮವಾಸ್ಯೆ ಹೀಗೆ ಮಾಡುವುದರಿಂದ ಜೀವನದಲ್ಲಿ ಸಮೃದ್ಧಿ ಪ್ರಾಪ್ತಿ
"ಭೇಟಿಯ ಸಂದರ್ಭದಲ್ಲಿ ಪೊಲೀಸರು, ಸಂಚಾರಿ ಪೊಲೀಸರು, ನಗರ ಪಾಲಿಕೆ, ಯುಜಿಡಿ, ವಾಣಿವಿಲಾಸ ನೀರು ಸರಬರಾಜು, ಅಭಿವೃದ್ಧಿ ಪ್ರಾಧಿಕಾರ, ಆರೋಗ್ಯ ಇಲಾಖೆ ಹೀಗೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು" ಎಂದು ತಿಳಿಸಿದರು.
"ಎಲ್ಲಾ ಕಡೆ ಸಿಸಿಟಿವಿ ಅಳವಡಿಕೆ ಹಾಗೂ ಬರುವ ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗದೆ ನೇರವಾಗಿ ದರ್ಶನ ಮಾಡಲು ಅನುಕೂಲಕರವಾಗುವಂತೆ ಹಾಗೂ ಎಲ್ಇಡಿ ಪರದೆ ಮೂಲಕ ದರ್ಶನಕ್ಕೆ ಅವಕಾಶ ಕಲ್ಪಿಸಿ ಕೊಡುವುದು ಸೇರಿದಂತೆ, ವಿವಿಧ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು" ಎಂದು ಹೇಳಿದರು.
"ಮೂರು ವಿಧವಾದ ಸರತಿ ಸಾಲುಗಳನ್ನು ಮಾಡಲಾಗಿದ್ದು ಉಚಿತವಾಗಿ ದರ್ಶನ ಪಡೆಯಲು, ರೂಪಾಯಿ 50ರ ಟಿಕೆಟ್ ಮೂಲಕ ದರ್ಶನ ಪಡೆಯಲು, ಹಾಗೂ 300 ಟಿಕೆಟ್ನಲ್ಲಿ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ"ಎಂದು ಎಸ್. ಎ. ರಾಮದಾಸ್ ವಿವರಿಸಿದರು.
"ಕ್ಯೂನಲ್ಲಿ ನಿಂತು ಬರುವ ಭಕ್ತಾದಿಗಳಿಗೆ ಶೌಚಾಲಯ ವ್ಯವಸ್ಥೆಯನ್ನು ಸರತಿ ಸಾಲಿನ ಸ್ಥಳದಲ್ಲಿಯೇ ಇ-ಟಾಯಲೆಟ್ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ದೇವರ ದರ್ಶನ ಪಡೆದ ಭಕ್ತಾದಿಗಳಿಗೆ ಪ್ರತಿಯೊಬ್ಬರಿಗೂ ಕುಂಕುಮ ಹಾಗೂ ಪ್ರಸಾದ ನೀಡಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ" ಎಂದು ರಾಮದಾಸ್ ಹೇಳಿದರು.
ಎರಡು ರೀತಿಯ ಪ್ರಸಾದ; ದರ್ಶನ ಪಡೆದು ಹೊರ ಬರುವ ಭಕ್ತಾದಿಗಳಿಗೆ ಎರಡು ರೀತಿಯ ಪ್ರಸಾದ ವಿತರಣೆ ಮಾಡಲು ದೇವಾಲಯದ ಆಡಳಿತ ಮಂಡಳಿ ನಿರ್ಧರಿಸಿದೆ. ಒಂದು ದೊನ್ನೆಯ ಮೂಲಕ ಪ್ರಸಾದ, ಮತ್ತೊಂದು ಕುಳಿತು ಬಾಳೆ ಎಲೆಯಲ್ಲಿ ಒಂದೇ ಸಮಯದಲ್ಲಿ 1,000 ಜನಕ್ಕೆ ಊಟ ಪ್ರಸಾದ ನೀಡುವಂತಹ ಕಾರ್ಯಕ್ಕೆ ದೇವಾಲಯ ಸಜ್ಜಾಗಿದೆ. ಪ್ರಸಾದ ಸೇವಿಸಿ ನಂತರ ಬಾಳೆ ಎಲೆ, ನೀರು ಲೋಟ, ಇತರೆ ತ್ಯಾಜ್ಯಗಳನ್ನು ನಗರಪಾಲಿಕೆ ಆರೋಗ್ಯ ಅಧಿಕಾರಿಗಳು ಟ್ರ್ಯಾಕ್ಟರ್ ಮೂಲಕ ವಿಲೇವಾರಿ ಮಾಡಲಿದ್ದಾರೆ.
ಭಕ್ತಾದಿಗಳಿಗೆ ತಮ್ಮ ಖಾಸಗಿ ವಾಹನಗಳ ಮೂಲಕ ಚಾಮುಂಡಿಬೆಟ್ಟಕ್ಕೆ ತೆರಳಲು ಅವಕಾಶ ಇಲ್ಲದ ಕಾರಣ ಉಚಿತವಾಗಿ ಬಸ್ ವ್ಯವಸ್ಥೆಯನ್ನು ತಿ. ನರಸೀಪುರ ರಸ್ತೆ ಹಾಗೂ ಎಂ. ಜಿ. ರಸ್ತೆಯ ಜಂಕ್ಷನ್ನಲ್ಲಿ ಇರುವ ಮೈದಾನ ಲಲಿತ ಮಹಲ್ ಹೊಟೇಲಿನ ಪಕ್ಕದಲ್ಲಿರುವ ಮೈದಾನದಲ್ಲಿ ಕಲ್ಪಿಸಲಾಗಿರುತ್ತದೆ. ಭಕ್ತಾದಿಗಳಿಗೆ ಹಾಗೂ ಎರಡು ಡೋಸ್ ಲಸಿಕೆ ಕಡ್ಡಾಯವಾಗಿದ್ದು ಇಲ್ಲದಿದ್ದಲ್ಲಿ ಕೋವಿಡ್ ಪರೀಕ್ಷೆಯ 72 ಗಂಟೆ ಒಳಗಿನ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯವಾಗಿರುತ್ತದೆ.
Recommended Video