ರಾಜೀವ್ ಗಾಂಧಿ ಬಗ್ಗೆ ಮೋದಿ ಹಾಗೆ ಹೇಳಬಾರದಿತ್ತು: ಶ್ರೀನಿವಾಸ್ ಪ್ರಸಾದ್ ವಿರೋಧ
ಮೈಸೂರು, ಮೇ 8: ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ, ದಿವಂಗತ ರಾಜೀವ್ ಗಾಂಧಿ ಅವರ ಕುರಿತು ಆ ರೀತಿಯ ಹೇಳಿಕೆ ನೀಡಬಾರದಿತ್ತು ಎಂದು ಮಾಜಿ ಸಚಿವ, ಚಾಮರಾಜನಗರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ್ ಪ್ರಸಾದ್ ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರ ಹೇಳಿಕೆಗೆ ನನ್ನ ವಿರೋಧ ಇದೆ ಎಂದರು.
ಕುತೂಹಲ ಮೂಡಿಸಿದ ವಿಶ್ವನಾಥ್- ಶ್ರೀನಿವಾಸ್ ಪ್ರಸಾದ್ ಭೇಟಿ
ಉತ್ತರ ಪ್ರದೇಶದ ಲಕ್ನೋದಲ್ಲಿ ಇತ್ತೀಚೆಗೆ ಚುನಾವಣಾ ಪ್ರಚಾರ ನಡೆಸುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು, 'ನಿಮ್ಮ ತಂದೆ (ಮಾಜಿ ಪ್ರಧಾನಿ ರಾಜೀವ್ ಗಾಂಧಿ) ಮಿಸ್ಟರ್ ಕ್ಲೀನ್ ಎಂದು ನಿಮ್ಮ ಕುಟುಂಬಕ್ಕೆ ಆಪ್ತರಾಗಿರುವವರು ಹೇಳುತ್ತಾರೆ. ಆದರೆ, ನಿಮ್ಮ ತಂದೆಯ ಬದುಕು ಭ್ರಷ್ಟಾಚಾರಿ ನಂಬರ್ 1 ಹಣೆಪಟ್ಟಿಯೊಂದಿಗೆ ಅಂತ್ಯವಾಯಿತು' ಎಂದು ರಾಹುಲ್ ಗಾಂಧಿ ಅವರನ್ನು ಟೀಕಿಸಿದ್ದರು
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ರಾಜೀವ್ ಗಾಂಧಿ 1980ರಲ್ಲಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ನಡೆದ ಬೋಫೋರ್ಸ್ ಹಗರಣದ ಕುರಿತು ಪ್ರಸ್ತಾಪಿಸಿದ್ದ ನರೇಂದ್ರ ಮೋದಿ ಅವರು, 'ಸ್ವೀಡಿಶ್ ಮೂಲದ ಬೋಫೋರ್ಸ್ ಕಂಪೆನಿಯಿಂದ ದೊಡ್ಡ ಮೊತ್ತದ ಹಣವನ್ನು ಕಿಕ್ ಬ್ಯಾಕ್ ರೂಪದಲ್ಲಿ ಪಡೆಯಲಾಗಿತ್ತು' ಎಂದು ಆರೋಪಿಸಿದ್ದರು.
ಪ್ರಧಾನಿಗೆ ಗೌರವ ಕೊಡದ ಸಿದ್ದರಾಮಯ್ಯ ಒಬ್ಬ ಅನಾಗರಿಕ: ಶ್ರೀನಿವಾಸ ಪ್ರಸಾದ್
ಮೋದಿ ಅವರ ಹೇಳಿಕೆ ರಾಷ್ಟ್ರಾದ್ಯಂತ ವ್ಯಾಪಕ ಚರ್ಚೆಗೆ ಒಳಗಾಗಿತ್ತು. ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗಲೇ ಹುತಾತ್ಮರಾದವರು. ಅವರು ದೇಶದ ಅಭಿವೃದ್ಧಿಗಾಗಿ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಬಗ್ಗೆ ಪ್ರಧಾನಿ ಹುದ್ದೆಯಲ್ಲಿರುವ ವ್ಯಕ್ತಿ ಕೀಳಾಗಿ ಮಾತನಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ಸಿಗರು ವಾಗ್ದಾಳಿ ನಡೆಸಿದ್ದರು.
ರಾಜೀವ್ ಗಾಂಧಿ ಬಗ್ಗೆ ಹೇಳಬಾರದಿತ್ತು
ರಾಜೀವ್ ಗಾಂಧಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿದವರಲ್ಲ. ಭ್ರಷ್ಟಾಚಾರ ಆರೋಪ ಬಂದರೆ ರಾಜಕೀಯ ತ್ಯಜಿಸುವುದಾಗಿ ಹೇಳಿದ್ದರು. ಅವರನ್ನು ದೆಹಲಿ ಹೈಕೋರ್ಟ್ ಆರೋಪಮುಕ್ತರನ್ನಾಗಿ ಮಾಡಿತ್ತು. ರಾಜೀವ್ ಗಾಂಧಿ ಅವರ ಬಗ್ಗೆ ಮೋದಿ ಅವರು ಮಾತನಾಡಿರುವುದು ಸರಿಯಲ್ಲ. ಆ ಮಾತು ಮೋದಿ ಅವರಿಂದ ಬರಬಾರದಿತ್ತು.
ದೇಶಕ್ಕೋಸ್ಕರ ಪ್ರಾಣ ನೀಡಿದ್ದಾರೆ
ರಾಜೀವ್ ಗಾಂಧಿ ಅವರ ಕುರಿತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಒಳ್ಳೆಯ ಮಾತು ಆಡಿದ್ದಾರೆ. ಮೋದಿ ಅವರ ಮಾತು ಕೇಳಿ ನನಗೂ ಬೇಸರವಾಯಿತು. ರಾಜೀವ್ ಗಾಂಧಿ ದೇಶಕ್ಕೋಸ್ಕರ ಪ್ರಾಣ ನೀಡಿದ್ದಾರೆ. ಅಂತಹವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿರುವುದು ಸರಿಯಲ್ಲ ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದರು.
ಚಾಮರಾಜನಗರ ಕ್ಷೇತ್ರದಲ್ಲಿ ಈ ಇಬ್ಬರೂ ನಂ .1, ಆದರೆ ಗೆಲ್ಲುವವರು?
ನಾನು-ವಿಶ್ವನಾಥ್ ಸ್ನೇಹಿತರು
ನಾನು ಎಚ್ ವಿಶ್ವನಾಥ್ ಸ್ನೇಹಿತರು. ನಿನ್ನೆ ವಿಶ್ವನಾಥ್ ನನ್ನನ್ನು ಭೇಟಿ ಮಾಡಿ ಮಾತನಾಡಿದರು. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮಾತನಾಡಿರಲಿಲ್ಲ. ರಾಜಕೀಯದಲ್ಲಿ ಬೇರೆ ಬೇರೆ ಇದ್ದರೂ ನಮ್ಮ ವಿಶ್ವಾಸಕ್ಕೆ ಧಕ್ಕೆ ಆಗಿಲ್ಲ. ವಿಶ್ವನಾಥ್ ಅವರು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರಾಗಿರುವುದರಿಂದ ಅವರನ್ನು ಈ ಹಿಂದೆ ಭೇಟಿ ಮಾಡಿರಲಿಲ್ಲ ಎಂದು ತಮ್ಮ ಹಾಗೂ ವಿಶ್ವನಾಥ್ ಅವರ ಭೇಟಿ ಕುರಿತು ಸ್ಪಷ್ಟನೆ ನೀಡಿದರು.
ದೋಸ್ತಿ ಕಥೆ ಗೊತ್ತಿದೆ
ಮುಂದಿನ ಬೆಳವಣಿಗೆ, ಊಹಾಪೋಹಗಳ ಬಗ್ಗೆ ಮಾತನಾಡಬಾರದು. ಕೆಲವು ಕಡೆ ಅಸಮಾಧಾನ ಇದ್ದರೂ ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ. ಮೈಸೂರಿನಲ್ಲಿ ದೋಸ್ತಿ ಕಥೆ ಏನಾಯ್ತು ಎಂಬುದು ನಮಗೆ ಗೊತ್ತಿದೆ. ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅದು ನಮಗೆ ಸಂಬಂಧವಿಲ್ಲ, ಆ ವಿಚಾರದ ಬಗ್ಗೆ ಮಾತೂ ಆಡಿಲ್ಲ. ಅವರು ಸಿಎಂ ಆಗಿದ್ದಾಗ ಏನೇನು ಮಾತನಾಡಿದ್ದರು ಎಂಬುದು ತಿಳಿದಿದೆ ಎಂದರು.