ಮೈಸೂರು ಮೃಗಾಲಯದ ಬ್ರಾಂಡ್ ಅಂಬಾಸಿಡರ್ ಆಗಿ ನಟ ದರ್ಶನ್ ಆಯ್ಕೆ
ಮೈಸೂರು, ಮೇ 30 : ಪ್ರಾಣಿಗಳೆಂದರೆ ಅತಿ ಹೆಚ್ಚು ಇಷ್ಟಪಡುವ ಕಲಾವಿದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೊದಲಿಗರು. ಅದನ್ನು ಮತ್ತೊಮ್ಮೆ ಈ ನಟ ಸಾಬೀತು ಮಾಡಿದ್ದಾರೆ. ಹೌದು, ಕಾಡು ಹಾಗೂ ವನ್ಯಜೀವಿಗಳ ಬಗ್ಗೆ ಅಪಾರ ಪ್ರೀತಿ ಹೊಂದಿರುವ ದರ್ಶನ್ ಅರಣ್ಯ ಇಲಾಖೆ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.
ಇನ್ನು ಮುಂದೆ ವನ್ಯಜೀವಿ ಹಾಗೂ ಅರಣ್ಯ ಸಂರಕ್ಷಣೆ ಸಂದೇಶ ಸಾರುವ ಸಾರಥಿಯಾಗಿ ದರ್ಶನ್ ಕಾರ್ಯನಿರ್ವಹಿಸಲಿದ್ದಾರೆ. ಈಗಾಗಲೇ ತಮ್ಮದೇ ಆದ ಫಾರಂನಲ್ಲಿ ಅನೇಕ ಪ್ರಾಣಿಗಳನ್ನು ದರ್ಶನ್ ಸಾಕಿರುವುದು ನಮಗೆಲ್ಲ ತಿಳಿದೆ.
ಗೂಡ್ಸ್ ರೈಲಿನಲ್ಲಿ ಮೈಸೂರು ಮೃಗಾಲಯಕ್ಕೆ ಬಂದ ಅಪರೂಪದ ಅತಿಥಿಗಳು!
ಇದರ ಜೊತೆಗೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಹುಲಿ, ಆನೆ ಸೇರಿದಂತೆ ನಾನಾ ಪ್ರಾಣಿಗಳನ್ನು ದತ್ತು ಪಡೆದು ಆ ಪ್ರಾಣಿಗಳ ಪಾಲನೆಗೆ ಸಹಕರಿಸಿದ್ದಾರೆ ದರ್ಶನ್. ಅಷ್ಟೇ ಅಲ್ಲ, ಅವರ ಕುಟುಂಬದ ಸದಸ್ಯರೂ ಹಲವು ಬಾರಿ ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ.
ಜೊತೆಗೆ ಅರಣ್ಯ ಇಲಾಖೆಯೊಂದಿಗೆ ವಿಶೇಷ ಒಡನಾಟ ಹೊಂದಿರುವ ದರ್ಶನ್ ಇಲಾಖೆಯ ಕಾರ್ಯಕ್ರಮಗಳಿಗೆ ಸಹಕರಿಸುತ್ತಿದ್ದಾರೆ.
ಇದನ್ನು ಗಮನಿಸಿದ ಅರಣ್ಯ ಇಲಾಖೆ ಗುಜರಾತ್ನಲ್ಲಿ ಅಮಿತಾಬ್ ಬಚ್ಚನ್ ಅವರನ್ನು ರಾಯಭಾರಿಯಾಗಿ ನೇಮಕ ಮಾಡಿರುವಂತೆ, ಕರ್ನಾಟಕದಲ್ಲಿ ದರ್ಶನ್ ಅವರನ್ನು ನೇಮಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ದರ್ಶನ್ ಅವರಿಗೆ ರಾಯಭಾರಿಯಾಗಿ ನೇಮಕಗೊಂಡಿರುವ ಪತ್ರ ನೀಡಿದ್ದಾರೆ.
ದರ್ಶನ್ ಇನ್ನು ಮುಂದೆ ವಿಶ್ವಭೂಮಿ ದಿನಾಚರಣೆ, ಪರಿಸರ ದಿನಾಚರಣೆ, ವನಮಹೋತ್ಸವ ಹಾಗೂ ಇನ್ನಿತರ ಅರಣ್ಯ ಇಲಾಖೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.
ಪ್ರಾಣಿ, ಪಕ್ಷಿಗಳು ಹಾಗೂ ಅರಣ್ಯದ ಮೇಲೆ ಅಪಾರ ಕಾಳಜಿ ಹೊಂದಿರುವ ನಟ ದರ್ಶನ್ ಮಹತ್ತರ ಕೆಲಸವೊಂದಕ್ಕೆ ಓಕೆ ಅಂದಿದ್ದಾರೆ. ಈಗಾಗಲೇ ಕಾಡ್ಗಿಚ್ಚು ಹಾಗೂ ಅರಣ್ಯ ಸಂರಕ್ಷಣೆ ಕುರಿತ 90 ನಿಮಿಷಗಳ ಸಾಕ್ಷ್ಯಚಿತ್ರದಲ್ಲಿ ನಟಿಸಿದ್ದಾರೆ.
ಅರಣ್ಯ ಇಲಾಖೆಯು ಜೂ. 5ರಂದು ಪರಿಸರ ದಿನಾಚರಣೆ ಅಂಗವಾಗಿ ರಾಜ್ಯಾದ್ಯಂದ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಾವಿರಾರು ಗಿಡಗಳನ್ನು ನೆಡುವ ಈ ಕಾರ್ಯಕ್ರಮಕ್ಕಾಗಿಯೆ ನಿರ್ಮಿಸುತ್ತಿರುವ 'ಪ್ಲಾಂಟ್ ಎ ಟ್ರಿ' ಎಂಬ ಸಾಕ್ಷ್ಯ ಚಿತ್ರದಲ್ಲಿಯೂ ದರ್ಶನ್ ನಟಿಸಲಿದ್ದಾರೆ.
ಇಲಾಖೆಯ ನಿರ್ಮಿಸುತ್ತಿರುವ ಈ ಸಾಕ್ಷ್ಯಚಿತ್ರಗಳಿಗೆ ದರ್ಶನ್ ಹಣ ಪಡೆದಿಲ್ಲ.
ಈ ಚಿತ್ರದ ಚಿತ್ರೀಕರಣ ಮಲೆ ಮಹದೇಶ್ವರ ಬೆಟ್ಟ, ಬಂಡಿಪುರ, ನಾಗರಹೊಳೆ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ನಡೆಯಲಿದೆ. ಇನ್ನು ತ್ರೀಕರಣಕ್ಕೆ ಪ್ರಯಾಣ ಕೈಗೊಳ್ಳುವ ಸಂದರ್ಭದಲ್ಲಿ ರಸ್ತೆಯುದ್ದಕ್ಕೂ ಸಿಗುವ ಗ್ರಾಮಗಳು ಸೇರಿದಂತೆ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಅರಣ್ಯ ಉಳಿಸಿ ಎಂಬ ಜನಜಾಗೃತಿ ಮೂಡಿಸುವರು.
ಈ ಎಲ್ಲ ಕಾರ್ಯಗಳಿಗೆ ದರ್ಶನ್ ಸ್ವಯಂ ಪ್ರೇರಣೆಯಿಂದಲೇ ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.