ಪೆಟ್ರೋಲ್ ಬಂಕ್ ಸುಡುತ್ತೇನೆಂದ ಲೇಡಿ ಎಸ್ಐ: ಸೇವೆಯಿಂದ ಬಿಡುಗಡೆ
ಮೈಸೂರು, ಮಾರ್ಚ್ 31: ತನ್ನ ಜೀಪಿಗೆ ಪೆಟ್ರೋಲ್ ಹಾಕದ ಕಾರಣದಿಂದಾಗಿ ಪೆಟ್ರೋಲ್ ಬಂಕ್ ಸುಟ್ಟುಹಾಕ್ತೀನಿ ಎಂದು ನಂಜನಗೂಡಿನ ಲೇಡಿ ಪಿಎಸ್ಐ ಧಮ್ಕಿ ಹಾಕಿದ್ದಾರೆ.
""ನನ್ನ ಜೀಪ್ ಗೆ ಡೀಸೆಲ್ ಹಾಕಲ್ಲ ಎಂದ ಮೇಲೆ ನಂಜನಗೂಡಿನಲ್ಲಿ ಹೇಗೆ ಇರ್ತೀಯ ನೋಡ್ತೀನಿ'' ಎಂದು ನಂಜನಗೂಡಿನ ಎಸ್ಐ ಯಾಸ್ಮೀನ್ ತಾಜ್ ಸಾವಲು ಹಾಕಿದ್ದಾರೆ.
ಪೆಟ್ರೋಲ್ ಬಂಕ್ ಸೀಜ್ ಮಾಡಲು ಯತ್ನಿಸಿದ್ದರಲ್ಲದೇ, ಬಂಕ್ ಲಾಕ್ ಮಾಡುವಂತೆಯೂ ಸೂಚನೆ ನೀಡಿದ್ದಾರೆ. ನಂಜನಗೂಡಿನ ಹುಲ್ಲಹಳ್ಳಿ ಸರ್ಕಲ್ನಲ್ಲಿರುವ ಪೆಟ್ರೋಲ್ ಬಂಕ್ ನಲ್ಲಿ ಎಸ್ಐ ರಂಪಾಟ ಮಾಡಿದ್ದಾರೆ.
ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಸಿಬ್ಬಂದಿ ದೂರಿದ್ದಾರೆ. ""ನನ್ನ ಸ್ಟೇಷನ್ ಗೆ ಬಂದು ಜೀಪ್ ತೆಗೆದುಕೊಂಡು ಹೋಗಿ ಡೀಸೆಲ್ ಹಾಕಬೇಕು. ಇಲ್ಲ ಅಂದರೆ ಬೇರೆಯವರಿಗೆ ಅದು ಹೇಗೆ ಡೀಸೆಲ್ ಹಾಕ್ತೀಯ ನೋಡಿಕೊಳ್ತೇನೆ'' ಎಂದರಲ್ಲದೇ, ಡೀಸೆಲ್ ಹಾಕಿಸಲು ಬಂದಿದ್ದ ಟೆಲಿಕಾಂ ಇಲಾಖೆ ವಾಹನ ಚಾಲಕನಿಗೆ ಲಾಠಿ ಏಟು ನೀಡಿದ್ದಾರೆ.
ಪೆಟ್ರೋಲ್ ಬಂಕ್ ಮಾಲೀಕನಿಗೆ ಧಮ್ಕಿ ಹಾಕಿದ್ದರ ಪರಿಣಾಮವಾಗಿ, ಸಬ್ ಇನ್ಸ್ ಪೆಕ್ಟರ್ ಯಾಸ್ಮಿನ್ ತಾಜ್ ಅವರನ್ನು ಕರ್ತವ್ಯದಿಂದ ನಂಜನಗೂಡು ಪಟ್ಟಣ ಠಾಣೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮಾಹಿತಿ ನೀಡಿದ್ದಾರೆ.
""ಈ ರೀತಿಯ ವರ್ತನೆ ಸಹಿಸಲು ಸಾಧ್ಯವಿಲ್ಲ. ಸದ್ಯಕ್ಕೆ ಠಾಣಾ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಬೇರಾವುದೇ ಠಾಣೆಗೆ ವರ್ಗಾವಣೆ ಮಾಡಿಲ್ಲ.ಇಲಾಖಾ ತನಿಖೆಗೆ ಆದೇಶ ಮಾಡಲಾಗಿದೆ. ವರದಿ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ'' ಎಂದು ಎಸ್ಪಿ ಸಿ.ಬಿ ರಿಷ್ಯಂತ್ ಹೇಳಿದ್ದಾರೆ.