ಸೈಕಲ್ಲೇ ಇವರಿಗೆ ಸಂಗಾತಿ; ವಿಶ್ವಶಾಂತಿಗೆ ಚಕ್ರವರ್ತಿ ಸವಾರಿ
ಮೈಸೂರು, ನವೆಂಬರ್ 25: ಮದುವೆ, ಮಕ್ಕಳು ಎಲ್ಲವನ್ನು ಬದಿಗೊತ್ತಿ ಜಗತ್ತಿಗೆ ಶಾಂತಿ ಸಾರುವ ಸಲುವಾಗಿ ಊರಿನಿಂದ ಊರಿಗೆ ಸೈಕಲ್ನಲ್ಲಿ ಅಲೆಯುತ್ತಾ ತಾನು ಹೋದ ಕಡೆ ಜನತೆಗೆ ಶಾಂತಿ ಮಂತ್ರ ಪಠಿಸುತ್ತಾ ಜೀವನ ಸಾಗಿಸುತ್ತಿರುವ ವ್ಯಕ್ತಿಯೊಬ್ಬರು ನಮ್ಮ ನಿಮ್ಮ ನಡುವೆ ಇದ್ದಾರೆ ಎನ್ನುವುದೇ ಅಚ್ಚರಿಯ ಸಂಗತಿ.
ಅವರೇ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಮೆಟ್ಟುಪಾಳ್ಯಂನ ಚಕ್ರವರ್ತಿ. ಸುಮಾರು 53 ವರ್ಷದ ಇವರು ವಿಶ್ವ ಶಾಂತಿಗಾಗಿ ಸೈಕಲ್ ಏರಿ ಬಹಳ ವರ್ಷಗಳೇ ಆಗಿವೆ. ಊರಿಂದ ಊರಿಗೆ ಸಾಗುವ ಅವರಿಗೆ ಮನೆ, ಸಂಸಾರ ಯಾವುದೂ ಇಲ್ಲ. ಎಲ್ಲಿ ಇರುತ್ತಾರೋ ಅದೇ ಊರು, ಅದೇ ಮನೆ. ಸೈಕಲ್ ಇವರ ಸಂಗಾತಿ. ಜೊತೆಗೆ ಒಂದಷ್ಟು ಬಟ್ಟೆಗಳು, ವಿಶ್ವಶಾಂತಿ ಸಾರುವ ಸಂದೇಶಗಳ ಕರಪತ್ರಗಳು ಅಷ್ಟೆ. ಬಹಳಷ್ಟು ರಾಜ್ಯ ಊರುಗಳನ್ನು ಸುತ್ತಿರುವ ಚಕ್ರವರ್ತಿ ಇದೀಗ ಮೈಸೂರಿನಲ್ಲಿ ಸುತ್ತಾಡುತ್ತಿದ್ದಾರೆ. ತನ್ನ ಸೈಕಲ್ ಮೂಲಕ ಸಾಗುತ್ತಾ ಸಿಕ್ಕ ಊರುಗಳಲ್ಲಿ ಶಾಂತಿ ಮಂತ್ರ ಪಠಿಸುತ್ತಾ ವಿಶಿಷ್ಟವಾಗಿ ಸಮಾಜ ಸೇವೆ ಮಾಡುತ್ತಿದ್ದಾರೆ.
ಬಿಜೆಪಿ ಗೆದ್ದ ಖುಷಿಗೆ 1,100 ಕಿ.ಮೀ. ಸೈಕಲ್ ತುಳಿದ ಅಭಿಮಾನಿ
ಈಗಾಗಲೇ ದಕ್ಷಿಣ ಭಾರತದ ರಾಜ್ಯಗಳನ್ನು ಸುತ್ತಿ ಶಾಂತಿ ಸಾರಿರುವ ಇವರು ತಮ್ಮ ಸೈಕಲ್ ಜಾಥಾ ಹಾದುಹೋಗುವ ಮಾರ್ಗದ ನಗರ, ಪಟ್ಟಣ ಮತ್ತು ಗ್ರಾಮದಲ್ಲಿ ಶಾಂತಿಯ ಮಹತ್ವ ತಿಳಿಸುತ್ತಿದ್ದಾರೆ. ಮೈಸೂರಿಗೂ ಆಗಮಿಸಿರುವ ಇವರು ಮೈಸೂರಿನ ಪ್ರಮುಖ ರಸ್ತೆ ಮತ್ತು ಬೀದಿಗಳಲ್ಲಿ ಸಂಚರಿಸುತ್ತಿದ್ದಾರೆ.
ಸೆಕ್ಯುರಿಟಿ ಕೆಲಸ ಮಾಡುವ ಚಕ್ರವರ್ತಿ: ಈ ಹಿಂದೆ ಇವರು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಅವರು ತಮ್ಮ ಕೆಲಸದಿಂದ ಬಿಡುವು ಮಾಡಿಕೊಂಡು ಆಗಾಗ್ಗೆ ರಾಜ್ಯಾದ್ಯಂತ ಹಾಗೂ ದಕ್ಷಿಣ ಭಾರತದ ರಾಜ್ಯಗಳಲ್ಲಿ ಸೈಕಲ್ ಸವಾರಿ ಮಾಡುತ್ತಾರೆ. ಶಾಂತಿಯ ಸಂಕೇತವಾದ ಬಿಳಿ ವಸ್ತ್ರವನ್ನು ಧ್ವಜವನ್ನಾಗಿ ಮಾಡಿಕೊಂಡು ಸೈಕಲ್ನ ಹ್ಯಾಂಡಲ್ಗೆ ಕಟ್ಟಿಕೊಂಡು ಶಾಂತಿ ಸಂದೇಶ ಸಾರುವ ಬೋರ್ಡನ್ನು ಮುಂದೆ ಹಾಗೂ ಹಿಂದೆ ನೇತು ಹಾಕಿಕೊಂಡಿದ್ದಾರೆ. ಅಗತ್ಯಕ್ಕೆ ಬೇಕಾದ ವಸ್ತುಗಳನ್ನು ಚೀಲದಲ್ಲಿ ಹಿಂದೆ ಕಟ್ಟಿಕೊಂಡು ಮುಂದೆ ಕುಡಿಯಲು ನೀರಿಟ್ಟುಕೊಂಡು ಸಂಚಾರ ನಡೆಸುತ್ತಾರೆ.
ಮೈಸೂರಿನಲ್ಲಿ ಟ್ರಿಣ್ –ಟ್ರಿಣ್ ಯೋಜನೆಗೆ ಎರಡು ವರ್ಷದ ಸಂಭ್ರಮ
"ಸ್ವಾರ್ಥದಿಂದ ಮುಕ್ತಿ ಬೇಕು": ಇಂತಹದೊಂದು ಆಲೋಚನೆ ಅವರಿಗೇಕೆ ಬಂತು ಎಂಬುದನ್ನು ನೋಡುವುದಾದರೆ, ಚಿಕ್ಕಂದಿನಿಂದಲೂ ಜಗಳ, ಕದನ, ಕೋಪ-ತಾಪಗಳನ್ನೇ ನೋಡುತ್ತಾ ಬೆಳೆದು ಜೀವನದಲ್ಲಿ ಜಿಗುಪ್ಸೆ ಕಂಡಿದ್ದರು. ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಹಿಂಸೆ, ಸ್ವಾರ್ಥಗಳಿಗೆ ಮುಕ್ತಿ ನೀಡದಿದ್ದರೆ ಮಾನವ ಕುಲಕ್ಕೆ ಉಳಿವಿಲ್ಲವೆಂದು ಶಾಂತಿಯ ಮಹತ್ವ ತಿಳಿಸಬೇಕೆಂಬ ಕಾರಣಕ್ಕೆ ಸೈಕಲ್ ಸವಾರಿಯನ್ನು 2012 ರಿಂದ ಆರಂಭಿಸಿದ್ದಾರೆ.
ವರ್ಷಕ್ಕೆ ಒಂದು ಬಾರಿ ಈ ರೀತಿ ಸಂಚಾರ ನಡೆಸುತ್ತಿದ್ದು, ಕಾವೇರಿ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದಾಗ ಡಾ.ರಾಜ್ ಕುಮಾರ್ ಅವರಿಗೆ ಎಂ.ಜಿ. ರಾಮಚಂದ್ರನ್ (ಎಂಜಿಆರ್) ಅವರು ಮುತ್ತು ನೀಡುತ್ತಿರುವ ಫೋಟೊ ಹೊತ್ತು ಎರಡು ರಾಜ್ಯಗಳಲ್ಲಿ ಸೈಕಲ್ ಸವಾರಿ ನಡೆಸಿ ಶಾಂತಿ ಮಂತ್ರ ಜಪಿಸಿದ್ದರು. ಅಲ್ಲದೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಂಚರಿಸಿ ಶಾಂತಿ ಅರಿವು ಮೂಡಿಸಿದ್ದಾರೆ.
ಈ ಕುರಿತಂತೆ ಚಕ್ರವರ್ತಿ ಅವರು ಹೇಳುವುದು ಹೀಗೆ... "ಮನುಷ್ಯನಾಗಿ ಹುಟ್ಟಿದ ಮೇಲೆ ಇರುವಷ್ಟು ದಿನ ಸಂತೋಷವಾಗಿ ಬದುಕಿ ಬೇರೆಯವರಿಗೆ ಒಳ್ಳೆಯದನ್ನು ಮಾಡಬೇಕು. ಇಲ್ಲ ಸುಮ್ಮನಿರಬೇಕು. ಕೆಟ್ಟದ್ದನ್ನು ಮಾಡಬಾರದು. ಜಾತಿ, ಮತ, ಧರ್ಮಭೇದವಿಲ್ಲದೆ ನಾವೆಲ್ಲರೂ ಒಂದೇ ಎಂದು ಬದುಕಬೇಕು. ಎಲ್ಲರೂ ಶಾಂತವಾಗಿ ಬದುಕು ನಡೆಸಬೇಕು ಎಂಬ ಆಶಯದಿಂದ ಈ ಪಯಣವನ್ನು ಕೈಗೊಳ್ಳುತ್ತೇನೆ. ಫುಟ್ ಪಾತ್ ನಲ್ಲಿಯೇ ಮಲಗುತ್ತೇನೆ. ಸಾರ್ವಜನಿಕರು ನೀಡುವ ಸಹಾಯದಿಂದಲೇ ನನ್ನ ಹೊಟ್ಟೆ ತುಂಬುತ್ತದೆ.
ಸ್ವಾರ್ಥದಲ್ಲಿಯೇ ಬದುಕು ಸಾಗಿಸುವ ಜನರ ನಡುವೆ ಇಂತಹವರು ಇರುತ್ತಾರೆ ಎನ್ನುವುದೇ ಹೆಮ್ಮೆಯ ವಿಷಯವಾಗಿದೆ. ಅವರ ಬಯಕೆಗಳು, ಆಶಯಗಳು ಈಡೇರಲಿ ಎಂದು ಹಾರೈಸೋಣ.