ಜನಸಂದಣಿ ಪ್ರದೇಶವೇ ಇವರ ಟಾರ್ಗೆಟ್; ಗೊತ್ತೇ ಆಗದೇ ಕತ್ತಿಗೆ ಕೈ ಹಾಕುತ್ತಾರೆ ಖದೀಮರು
ಮೈಸೂರು, ಆಗಸ್ಟ್ 2: ಮೈಸೂರಿನಲ್ಲಿ ಸರಗಳ್ಳರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಜನಸಂದಣಿ ಹೆಚ್ಚಿರುವ ಬಸ್ ನಿಲ್ದಾಣಗಳೇ ಸರಗಳ್ಳರ ಟಾರ್ಗೆಟ್ ಆಗಿದೆ. ಕಳೆದ ವಾರವೊಂದರಲ್ಲೇ ಮೂರು ಸರಗಳ್ಳತನ ನಡೆದಿದೆ. ಈ ಸಂಬಂಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.
ಸಾಮಾನ್ಯವಾಗಿ ನಗರ ಹಾಗೂ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಮಫ್ತಿಯಲ್ಲಿ ಹಾಗೂ ಖಾಕಿ ಪೊಲೀಸರು ಗಸ್ತಿನಲ್ಲಿರುತ್ತಾರೆ. ಗ್ರಾಮಾಂತರ ಬಸ್ ನಿಲ್ದಾಣ ಪೊಲೀಸ್ ಲಷ್ಕರ್ ಠಾಣಾ ವ್ಯಾಪ್ತಿಗೆ ಬಂದರೆ, ನಗರ ಬಸ್ ನಿಲ್ದಾಣ ದೇವರಾಜ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ. ಒಟ್ಟಾರೆ ನಾಲ್ಕೈದು ಪೊಲೀಸರು ಇಲ್ಲಿ ಗಸ್ತಿನಲ್ಲಿರುತ್ತಾರೆ. ಹೀಗಿದ್ದರೂ ಕಳ್ಳರು ತಮ್ಮ ಕೈಚಳಕ ತೋರುತ್ತಿದ್ದಾರೆ. ಮೊಬೈಲ್ ಕಳವಂತೂ ಮಾಮೂಲಿಯಾಗಿದೆ. ಆದರೆ ಈಗೀಗ ಸರಗಳ್ಳರ ಪ್ರಕರಣ ಹೆಚ್ಚಾಗಿದೆ.
ಅಮೇಥಿಯಲ್ಲಿ ಕಳ್ಳರನ್ನು ತಡೆಯಲು ಯತ್ನಿಸಿದ ನಿವೃತ್ತ ಯೋಧ ಹತ್ಯೆ
ಜುಲೈ 23ರಂದು ಬಸ್ ಹತ್ತುವ ವೇಳೆ ಮಹಿಳೆಯೊಬ್ಬಳು ಕತ್ತಿಗೆ ಕೈಹಾಕಿ ಸರ ಕಸಿದು ಪರಾರಿಯಾಗಲು ಯತ್ನಿಸಿದ್ದಾಳೆ. ಆದರೆ ಜನರೇ ಆಕೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈಕೆಯಿಂದ ದೇವರಾಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಒಟ್ಟು ನಾಲ್ಕು ಪ್ರಕರಣಗಳಿಗೆ ಸಂಬಂಧಪಟ್ಟಂತೆ, 2, 37,000 ರೂ ಬೆಲೆ ಬಾಳುವ 79 ಗ್ರಾಂನ 4 ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದಾದ ಬಳಿಕ ಅದೇ ದಿನ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಬಸ್ ಹತ್ತುವ ವೇಳೆ ನೂಕು ನುಗ್ಗಲಿನಲ್ಲಿ ಖದೀಮರು 20 ಗ್ರಾಂ ತೂಕದ ಚಿನ್ನವನ್ನು ಎಗರಿಸಿದ್ದಾರೆ. ನಂತರ, ನಗರ ಬಸ್ ನಿಲ್ದಾಣದಲ್ಲಿ ಮಹದೇವ ಎಂಬುವರ ಮನೆಗೆ ಹೋಗಲು ಬಸ್ ಹತ್ತುವಾಗ, ನೂಕು ನುಗ್ಗಲಿನಲ್ಲಿ ಅವರ ಕತ್ತಿನಲ್ಲಿದ್ದ 12 ಗ್ರಾಂ ತೂಕದ ಸರವನ್ನು ಕಳ್ಳರು ಎಗರಿಸಿದ್ದಾರೆ.
ಜನಸಂದಣಿ ಹೆಚ್ಚಿರುವ ಸಮಯವನ್ನೇ ಬಳಸಿಕೊಂಡು ಸರಗಳ್ಳರು ಹೊಂಚುಹಾಕುತ್ತಿದ್ದಾರೆ. ಮಹಿಳೆಯರೂ ಈ ಕೃತ್ಯದಲ್ಲಿ ತೊಡಗಿಕೊಂಡಿದ್ದಾರೆ. ಬಸ್ ಹತ್ತುವ ವೇಳೆ ನೂಕು ನುಗ್ಗಲಿನಲ್ಲಿ ಅವರು ತಮ್ಮ ಕೈಚಳಕ ತೋರುತ್ತಾರೆ.
ಚಾಮುಂಡಿ ದರ್ಶನಕ್ಕೆ ಬಂದಿದ್ದ ವೃದ್ಧೆ ಸರ ಎಗರಿಸಿದ ಕಳ್ಳರು
ಹಾಗಾಗೇ ನಿಲ್ದಾಣಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಸ್ಥಳದಲ್ಲಿರುವ ಪೊಲೀಸರು ಅಥವಾ ಕೆಎಸ್ಆರ್ ಟಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿ. ಬಸ್ಸಿನಲ್ಲಿ ಸೀಟು ಸಿಗದಿದ್ದ ವೇಳೆ ಜನಸಂದಣಿಯಲ್ಲಿ ಇರುವ ವೇಳೆ ನಿಗಾವಹಿಸಿ ಎಂದು ಎಚ್ಚರಿಕೆ ನೀಡಿದ್ದಾರೆ ಪೊಲೀಸ್ ಅಧಿಕಾರಿಗಳು.
ಪೊಲೀಸರೆಂದು ನಂಬಿಸಿ ಚಿನ್ನ ದೋಚಿ ಪರಾರಿಯಾದ ಕಳ್ಳರು
ಈ ಕಳ್ಳರು ರಾಜ್ಯ ಮಾತ್ರವಲ್ಲದೆ ಬೇರೆ ರಾಜ್ಯಗಳಲ್ಲಿ ಬಸ್ ಹಾಗೂ ಬಸ್ ನಿಲ್ದಾಣಗಳಲ್ಲಿ, ಜನಸಂದಣಿ ಇರುವ ಪ್ರದೇಶಗಳಲ್ಲಿ ಕೈಚಳಕ ತೋರಿಸಿ ಚಿನ್ನದ ಸರಗಳನ್ನು ಎಗರಿಸುತ್ತಿರುವುದು ತಿಳಿದುಬಂದಿದೆ. ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದು ಇನ್ನಷ್ಟು ಪ್ರಕರಣ ಬೆಳಕಿಗೆ ಬರುವ ಸಾಧ್ಯತೆಯಿದೆ.