ಡೋಂಗಿ ಜಾತ್ಯಾತೀತವಾದಿಗಳಿಂದ ದೇಶಕ್ಕೆ ಅಪಾಯ : ಅನಂತ್ ಕುಮಾರ್
ಮೈಸೂಸು, ನವೆಂಬರ್ 27 : ಮೈಸೂರಿನಲ್ಲಿ ನಿನ್ನೆ (ನವೆಂಬರ್ 26) ಕ್ಕೆ ಮುಕ್ತಾಯಗೊಂಡ 83ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಮಾರೋಪ ಸಮಾರಂಭ ರಾಜಕೀಯ ಮತ್ತು ಸಾಹಿತ್ಯದ ಹಗ್ಗಜಗ್ಗಾಟಕ್ಕೆ ಸಾಕ್ಷಿಯಾಯಿತು.
ಚಿತ್ರಗಳು : ಮೈಸೂರಲ್ಲಿ 83ನೇ ಸಾಹಿತ್ಯ ಸಮ್ಮೇಳನ ಸಂಭ್ರಮ
ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಕೇಂದ್ರ ಸಂಸದೀಯ ವ್ಯವಹಾರ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ಅವರು ಚಂಪಾ ಅವರ ಉದ್ಘಾಟನಾ ಭಾಷಣಕ್ಕೆ ವಿರೋಧ ವ್ಯಕ್ತಪಡಿಸಿವುದರ ಜೊತೆಗೆ, ಡೋಂಗಿ ಜಾತ್ಯಾತೀತತೆ, ಕಸಾಪ ಪಕ್ಷದ ಮುಖವಾಣಿ ರೀತಿ ವರ್ತಿಸುತ್ತಿರುವದರ ಬಗ್ಗೆ, ಪೂಜೆ ಸಲ್ಲಿಸದೆ ಕನ್ನಡ ತಾಯಿಗೆ ಮಾಡಿದ ಅವಮಾನ, ಸಮ್ಮೇಳನದ ಆಯೋಜಕರ ಹೊಣೆಗೇಡಿತನಗಳ ಬಗ್ಗೆ ತೀರ್ವ ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡದ ಸಂಕಟಗಳಿಗೆಲ್ಲ ಕುಲಕಂಟಕರೇ ಕಾರಣ : ಚಂಪಾ
ಅದರ ಜೊತೆಗೆ ಪ್ರಾದೇಶಿಕ ಭಾಷೆಯ ಬಗ್ಗೆ ಕೇಂದ್ರದ ನಿಲುವು, ಕನ್ನಡ ಪ್ರಸಾರ ಹೆಚ್ಚಾಗಲು ಹೊರಳಿಕೊಳ್ಳಬೇಕಾದ ದಾರಿ ಮುಂತಾದ ವಿಷಯಗಳ ಬಗ್ಗೆ ಮಾತನಾಡಿದರು.
ತಮ್ಮ ಉದ್ಘಾಟನಾ ಭಾಷಣದಲ್ಲಿ ಜಾತ್ಯಾತೀತ ಪಕ್ಷಕ್ಕೆ ಮತ ನೀಡಿ ಎಂದಿದ್ದ ಚಂಪಾ ಅವರ ಮಾತಿಗೆ ವಿರೋಧ ವ್ಯಕ್ತಪಡಿಸಿದ ಅವರು, ಡೋಂಗಿ ಜಾತ್ಯಾತೀತವಾದಿಗಳಿಂದ ದೇಶಕ್ಕೆ ಬೆದರಿಕೆ. ಇವರು ಅಫ್ಜಲ್ ಗುರುವಿನ ಗಲ್ಲು ಶಿಕ್ಷೆಯನ್ನು ವಿರೋಧಿಸುತ್ತಾರೆ. ಕಾಶ್ಮೀರದ ಪ್ರತ್ಯೇಕತಾವಾದಿ ಗಳಿಗೆ ಬೆಂಬಲ ನೀಡುತ್ತಾರೆ' ಎಂದು ನೇರವಾಗಿ ಟೀಕಿಸಿದರು.
ಸಾಹಿತ್ಯ ಸಮ್ಮೇಳನಗಳ ಇತಿಹಾಸ, ಅದರ ಪಾವಿತ್ರ್ಯತೆ ಬಗ್ಗೆ ಮಾತನಾಡಿ "ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯು ಮತ ಯಾರಿಗೆ ಹಾಕಬೇಕು ಎಂದು ಕರೆ ನೀಡುವ ವೇದಿಕೆ ಆಗಬಾರದಿತ್ತು. ಅದನ್ನು ಬೇರೆ ವೇದಿಕೆಯಲ್ಲಿ ಪ್ರಸ್ತಾಪಿಸಬೇಕಿತ್ತ. ಇಲ್ಲಿ ಇಂತಹವರಿಗೆ ಮತ ಹಾಕಿ ಎಂದಿದ್ದು ಸರಿಯಲ್ಲ, ಡೋಂಗಿ ಜಾತ್ಯಾತೀತ ವಾದಕ್ಕೆ ರಾಜಕಾರಣಕ್ಕೆ ಈ ವೇದಿಕೆಯ ದುರುಪಯೋಗ ಆಗಬಾರದು' ಎನ್ನುವ ಮೂಲಕ ವೇದಿಕೆಯಲ್ಲಿ ಜಾತ್ಯಾತೀತತೆ ಬಗ್ಗೆ ಮಾತನಾಡಿದ ಚಂಪಾ ಹಾಗೂ ಬರಗೂರರನ್ನೂ ಪರೋಕ್ಷವಾಗಿ ಡೋಂಗಿ ಜಾತ್ಯಾತೀತವಾದಿಗಳ ಪಟ್ಟಿಗೆ ಸೇರಿಸಿದರು.
ಪತ್ರಕರ್ತ ನಿಷ್ಠಾವಂತನಾಗಿದ್ದರೆ ಮೊದಲು ತನ್ನ ಆಸ್ತಿ ಘೋಷಿಸಲಿ : ಪಬ್ಲಿಕ್ ವಾಹಿನಿ ಮುಖ್ಯಸ್ಥ ರಂಗನಾಥ್
ಕಾಂಗ್ರೆಸ್ ಪ್ರಯೋಜಿತ ಸಮ್ಮೇಳನವಿದು ಎನ್ನುವುದನ್ನು ಸೂಚ್ಯವಾಗಿ ಭಾಷಣದಲ್ಲಿ ಹೇಳಿದ ಅನಂತ್ ಕುಮಾರ್ ' ಕಸಾಪ ಯಾವುದೇ ಪಕ್ಷದ ಸ್ವತ್ತಲ್ಲ. ಇದು ಆರೂವರೆ ಕೋಟಿ ಕನ್ನಡಿಗರ ಆಸ್ತಿ' ಎಂದರು.
ಸಮ್ಮೇಳನದ ಆಯೋಜಕರ ನಿರ್ಲಕ್ಷ್ಯತೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು 'ಕಸಾಪ ಸ್ಥಾಪನೆಗೆ ಕಾರಣರಾದ ರಾಜಮನೆತನದವರನ್ನು ಆಹ್ವಾನಿಸಬೇಕಿತ್ತು. ಯದುವೀರರಿಂದ ಮೆರವಣಿಗೆಗೆ ಚಾಲನೆ ನೀಡಿಸಬೇಕಿತ್ತು' ಎಂದರು.
ತಾಯಿ ಭುವನೇಶ್ವರಿಗೆ ಪೂಜೆ ಮಾಡಲು ನಿರಾಕರಿಸಿದ ಚಂಪಾ ಅವರ ನಡೆಯನ್ನು ವಿರೋಧಿಸಿದ ಅನಂರ್ ಕುಮಾರ್ ಅವರು "ಭುವನೇಶ್ವರಿ ಧಾರ್ಮಿಕ ಪರಿವೇಷದ ದೇವತೆಯಲ್ಲ. ಆಕೆ ಕನ್ನಡಿಗರ ಅಧಿದೇವತೆ. ಆಕೆಗೆ ಪೂಜೆ ಸಲ್ಲಿಸದೆ ಮೆರವಣಿಗೆ ನಡೆಸಿದ್ದು ಸರಿಯಲ್ಲ' ಎಂದರು. ಪ್ರಗತಿಶೀಲತೆ ಹೆಸರಲ್ಲಿ ಸಂಪ್ರದಾಯ ಮುರಿದಿದ್ದು ಅವರ ಮಾತಿನ ಕೋಪಕ್ಕೆ ಕಾರಣವಾಗಿತ್ತು.
ಕೇವಲ ಟೀಕೆಗಳಿಗಷ್ಟೆ ತಮ್ಮ ಭಾಷಣವನ್ನು ಮುಡಿಪಾಗಿಡದೆ ತಮ್ಮ ಸರ್ಕಾರದ ಬಗ್ಗೆಯೂ ಮಾತನಾಡಿದ ಅನಂತ್ ಕುಮಾರ್ ಅವರು, ಕಲಿಕಾ ಮಾಧ್ಯಮ ಮಾತೃಭಾಷೆ ಆಗಬೇಕು ಎಂಬುದು ಮೋದಿ ಅವರ ನಿಲುವು, ಇದರ ಸಾಕಾರಕ್ಕೆ ಎಲ್ಲ ಪಕ್ಷಗಳು ಬೆಂಬಲ ನೀಡಬೇಕು. ಅನ್ಯರಾಜ್ಯದವರನ್ನೂ ಒಪ್ಪಿಸಬೇಕು' ಎಂದರು.
ಕನ್ನಡ ಉಳಿಸಲು ಹೊಸ ದಾರಿಗಳನ್ನು ಅನ್ವೇಷಿಸಬೇಕಿದೆ ಹಾಗೂ ಕಾಲಕ್ಕೆ ತಕ್ಕಂತೆ ಬದಲಾಗಬೇಕಿದೆ ಎಂದು ಪ್ರತಿಪಾದಿಸಿದ ಅನಂತ್ ಕುಮಾರ್ 'ಕನ್ನಡದ ಉಳಿಯಬೇಕಾದರೆ ಕನ್ನಡದ ಎಲ್ಲಾ ಸಾಹಿತ್ಯ ಡಿಜಿಟೈಸ್ ಆಗಿ, ಆ್ಯಪ್ ರೂಪಿಸಬೇಕು' ಎಂದು ಸಲಹೆ ನೀಡಿದರು.
ಕಂಗ್ಲಿಷ್ ಬಳಕೆಯ ಬಗ್ಗೆ ಅಸಮಧಾನ ಹೊರಹಾಕಿದ ಅವರು ಮಾಧ್ಯಮಗಳವರ ಬೇಜವವಾಬ್ದಾರಿಯುತ ಭಾಷೆಯ ಬಳಕೆ ಬಗ್ಗೆ ಬೇಸರ ವ್ಯಕ್ತಪಡಿಸಿದರು. 'ಕನ್ನಡ ಟಿವಿ ಗಳಲ್ಲಿ ಆ್ಯಂಕರ್ ಬಳಸುವ ಕಂಗ್ಲಿಷ್ ಸರಿಯಲ್ಲ. ಇದು ಕರ್ಕಶ. ಭಾಷೆಯ ಅಳಿವಿಗೆ ಇದು ಪೂರಕ. ಇದು ನಿಲ್ಲಬೇಕು. ಕಂಗ್ಲಿಷ್ ನಿಂದ ಭಾಷೆ ಹಾಗೂ ಸಂಸ್ಕೃತಿ ನಾಶವಾಗುತ್ತದೆ' ಎಂದರು.