ಮೈಸೂರು-ಮಲಬಾರ್ ರೈಲು ಮಾರ್ಗಕ್ಕೆ ಕೇಂದ್ರ ಹಸಿರು ನಿಶಾನೆ
ಮೈಸೂರು, ಡಿಸೆಂಬರ್ 04: ಮೈಸೂರು- ಮಲಬಾರ್ ಹೊಸ ರೈಲು ಮಾರ್ಗಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದ್ದು, 22 ಕಿಲೋ ಮೀಟರ್ ಸುರಂಗ ಮಾರ್ಗವನ್ನೊಳಗೊಂಡ ರೈಲು ಮಾರ್ಗದ ನಕ್ಷೆಯನ್ನು ಕರ್ನಾಟಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದು ಮಲಬಾರ್- ಮೈಸೂರು ರೋಡ್ ರೈಲ್ವೆ ಅಭಿವೃದ್ಧಿ ಸಮಿತಿಯ ಕೇರಳ ರಾಜ್ಯ ಸಮಿತಿಯ ಸಂಯೋಜಕ ಉಮೇಶ್ ಪೊಚ್ಚಪ್ಪನ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮಹತ್ವದ ಯೋಜನೆಗೆ ಅಂದಾಜು 11 ಸಾವಿರ ಕೋಟಿ ರೂ ವೆಚ್ಚ ತಗುಲಿದ್ದು, ಇದು ಕಾರ್ಯರೂಪಕ್ಕೆ ಬಂದದ್ದೇ ಆದರೆ ಕೇರಳ ಮತ್ತು ಕರ್ನಾಟಕ ರಾಜ್ಯದ ನಡುವೆ ಹೊಸ ರೈಲ್ವೆ ಮಾರ್ಗ ಅಭಿವೃದ್ಧಿಯಾಗಿ ಎರಡು ರಾಜ್ಯಗಳ ರೈತರಿಗೆ, ಉದ್ಯೋಗಸ್ಥರಿಗೆ, ಪ್ರವಾಸಿಗರಿಗೆ ಸಾಮಾನ್ಯ ಜನರಿಗೆ, ಕೂಲಿ ಕಾರ್ಮಿಕರಿಗೆ ಬಹಳಷ್ಟು ಅನುಕೂಲ ಅಗಲಿದೆ. ಜತೆಗೆ ಪ್ರವಾಸೋದ್ಯಮಕ್ಕೆ ಹೆಚ್ಚು ಉತ್ತೇಜನ ಸಿಗುವುದರೊಂದಿಗೆ ಕಡಿಮೆ ಖರ್ಚಿನಲ್ಲಿ, ಕಡಿಮೆ ಅವಧಿಯಲ್ಲಿ ಎರಡು ರಾಜ್ಯಗಳ ನಡುವೆ ಜನರು ಸಂಪರ್ಕ ಹೊಂದಲು ಸಹಕಾರಿಯಾಗಲಿದೆ ಎಂದರು.
ಮಂಗಳೂರು-ಶ್ರವಣಬೆಳಗೊಳ-ಬೆಂಗಳೂರು ರೈಲು ಮತ್ತೆ ಆರಂಭ
ಸಮಿತಿಯ ಕರ್ನಾಟಕ ರಾಜ್ಯ ಸಂಯೋಜಕ ಶಂಕರ್ ಕೆ. ಮುತ್ತು ಮಾತನಾಡಿ, ಈ ಮಹತ್ವದ ಯೋಜನೆಯಿಂದ ಕಾಡು ಮತ್ತು ಪ್ರಾಣಿಗಳು ಸೇರಿದಂತೆ ರಾಜ್ಯದ ಜೀವನಾಡಿ ಕಬಿನಿ ಜಲಾಶಯದ ಹಿನ್ನೀರು ಪ್ರದೇಶಕ್ಕೆ ಯಾವುದೇ ತೊಂದರೆಯಾಗದಂತೆ ಯೋಜಿಸಿ ಹೆಲಿಕ್ಯಾಪ್ಟರ್ ಸರ್ವೇ ಕೂಡ ಮಾಡಿಸಲಾಗಿದೆ. ಮೈಸೂರು- ಕೇರಳದ ತಲಚೇರಿವರೆಗಿನ ನೂತನ ರೈಲು ಮಾರ್ಗ ಎಚ್.ಡಿ.ಕೋಟೆ ಮಾರ್ಗವಾಗಿ ಸಂಚರಿಸಿ ತಾಲೂಕಿನ ಅಂತರಸಂತೆ ಬಳಿಯಿಂದ ಗಡಿಭಾಗದ ಬಾವಲಿ ಗ್ರಾಮದವರೆಗೆ 22 ಕಿ.ಲೋ.ಮೀಟರ್ ಸುರಂಗ ಮಾರ್ಗದಲ್ಲಿ ಚಲಿಸಲಿದೆ ಎಂದು ವಿವರಿಸಿದರು.
ಎರಡು ರಾಜ್ಯಗಳ ಸಂಪರ್ಕದ ಕೊಂಡಿಯಾಗಲಿರುವ ನೂತನ ಮೈಸೂರು- ಮಲಬಾರ್ ರೈಲು ಮಾರ್ಗ ಯಶಸ್ವಿ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಮುಂದಾಗಿ ಪ್ರತಿಯೊಬ್ಬರು ಇದಕ್ಕೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಎಂ.ಎಂ.ಆರ್.ಸಿ. ಸಮಿತಿಯ ಎಚ್.ಡಿ.ಕೋಟೆ ತಾಲೂಕು ಅಧ್ಯಕ್ಷ ದೇವದತ್ತ, ಶಿವರಾಮ್, ಅಂತರ ರಾಜ್ಯ ಸಂಯೋಜಕ ಬ್ಲೇಸ್ಸಿ, ಬೂದನೂರು ವೆಂಕಟೇಶ್, ಹಿರೇಹಳ್ಳಿ ಪ್ರಕಾಶ್, ಹಂಚೀಪುರ ಸುರೇಶ್ ಇದ್ದರು.