"ಮೂಡ"ಕ್ಕೆ ಸುಳ್ಳು ಮಾಹಿತಿ ನೀಡಿ ಸರ್ಕಾರಿ ನೌಕರ ಪಡೆದಿರುವ ಸೈಟುಗಳೆಷ್ಟು ಗೊತ್ತೆ?
ಮೈಸೂರು, ಡಿಸೆಂಬರ್ 14: ಸರ್ಕಾರದಿಂದ ನಿವೇಶನವೊಂದನ್ನು ಪಡೆದು ಮನೆಯೊಂದನ್ನು ಕಟ್ಟಿಕೊಳ್ಳಬೇಕೆಂಬುದು ನಗರದ ಪ್ರತಿಯೊಬ್ಬ ವಸತಿ ರಹಿತನ ಕನಸು. ನಗರಗಳಲ್ಲಿ ನಿವೇಶನಗಳಿಗಿರುವ ಚಿನ್ನದ ಬೆಲೆ ಜನ ಸಾಮಾನ್ಯರು ಕಾಲಿಡಲೂ ಹೆದರುವಂತೆ ಮಾಡಿವೆ. ಹಾಗಾಗಿ ವಸತಿರಹಿತರು ಬಿಡಿಎ, ಮೂಡ ಹೌಸಿಂಗ್ ಬೋರ್ಡ್ ಮೊರೆ ಹೋಗುವುದು ಸಹಜ.
ಆದರೆ ಈ ಸರ್ಕಾರಿ ಸಂಸ್ಥೆಗೆ ಮೈಸೂರಿನ ವ್ಯಕ್ತಿಯೊಬ್ಬರು ಸುಳ್ಳು ಮಾಹಿತಿ ನೀಡಿ ಒಂದಕ್ಕೂ ಹೆಚ್ಚಿನ ನಿವೇಶನ ಪಡೆದುಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ.
ದಾವಣಗೆರೆ; ಪೆಟ್ರೋಲ್ ಬಂಕ್ ಆಮಿಷ ಒಡ್ಡಿ ದೋಚಿದ್ದು ಲಕ್ಷಲಕ್ಷ
ಸರ್ಕಾರಿ ಸಂಸ್ಥೆಗಳ ನಿವೇಶನಗಳ ದಾಖಲೆಯಲ್ಲಿ ಯಾವುದೇ ದೋಷ ಇರುವುದಿಲ್ಲ ಮತ್ತು ದರಗಳೂ ಕೈಗೆಟಕುವಂತೆ ಇರುತ್ತದೆ ಎಂಬ ಒಂದೇ ಕಾರಣಕ್ಕೆ ಜನರು ಈ ಸಂಸ್ಥೆಗಳಿಗೆ ಆದ್ಯತೆ ನೀಡುತ್ತಾರೆ. ಆದರೆ ಇದಕ್ಕೂ ಅರ್ಜಿ ಸಲ್ಲಿಸಿ ವರ್ಷಗಟ್ಟಲೆ ಕಾಯಬೇಕಿದೆ. 1000 ನಿವೇಶನಗಳ ಹಂಚಿಕೆಗೆ ಅರ್ಜಿ ಆಹ್ವಾನಿಸಿದರೆ, ಒಂದು ಲಕ್ಷ ಅರ್ಜಿಗಳು ಸಲ್ಲಿಕೆಯಾಗುತ್ತವೆ. ಹಾಗಾಗಿ ಮೂರು ಬಾರಿ ಅರ್ಜಿ ಸಲ್ಲಿಸಿದವರಿಗೆ, ಇತರ ಕೆಲವೊಂದು ಪ್ರವರ್ಗದವರಿಗೆ ನಿಯಮಾನುಸಾರ ಆದ್ಯತೆ ನೀಡಿ ಲಾಟರಿ ಮೂಲಕ ನಿವೇಶನ ಹಂಚಿಕೆ ಮಾಡಲಾಗುತ್ತದೆ. ಅದೃಷ್ಟವಂತರಿಗೆ ಮಾತ್ರ ಬೇಗನೆ ನಿವೇಶನ ಸಿಗುತ್ತದೆ. ಒಂದು ಬಾರಿ ನಿವೇಶನ ಪಡೆದವರು ಇನ್ನೊಂದು ನಿವೇಶನ ಪಡೆಯುವಂತಿಲ್ಲ ಎಂಬುದೂ ನಿಯಮ.
ಆದರೆ ಮೈಸೂರಿನಲ್ಲಿ ಕೇಂದ್ರ ಸರ್ಕಾರಿ ನೌಕರರೊಬ್ಬರು ಮೂಡಕ್ಕೆ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಸುಳ್ಳು ಮಾಹಿತಿ ನೀಡಿ ಮೂರು ಬಾರಿ ನಿವೇಶನ ಪಡೆದಿದ್ದಾರೆ.
ಈ ವಿಷಯವನ್ನು ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಬಹಿರಂಗಪಡಿಸಿದ್ದು, ಸುಳ್ಳು ಮಾಹಿತಿ ನೀಡಿ ವಂಚಿಸಿ ನಿವೇಶನ ಪಡೆದಿರುವ ರಾಮಕೃಷ್ಣ ಎಂಬುವವರು ಅದನ್ನು ಬೇರೆಯವರಿಗೆ ಮಾರಾಟ ಮಾಡಿ ಕೈ ತೊಳೆದುಕೊಂಡಿದ್ದಾರೆ. ಈ ವಿಷಯ ಮೂಡ ಗಮನಕ್ಕೆ ಬರುತ್ತಿದ್ದಂತೆ ಮೂಡ ವಿಶೇಷ ತಹಶೀಲ್ದಾರ್ ನೋಟೀಸ್ ನೀಡಿದ್ದು, ನಿವೇಶನ ಮಂಜೂರಾತಿಯನ್ನು ಏಕೆ ರದ್ದುಪಡಿಸಬಾರದೆಂದು ಒಂದು ವಾರದಲ್ಲಿ ಉತ್ತರಿಸಬೇಕೆಂದು ಸೂಚಿಸಿದ್ದಾರೆ.
ಬೆಂಗಳೂರಲ್ಲಿ ಎಎಸ್ಐ ಮೇಲೆ ಕಾರು ಹರಿಸಿ ಕೊಲೆಗೆ ಯತ್ನ
ನೋಟೀಸ್ ನಲ್ಲಿ ಪ್ರಾಧಿಕಾರಕ್ಕೆ ವಾಸ್ತವಾಂಶ ಮರೆಮಾಚಿ ತಪ್ಪು ಮಾಹಿತಿ ನೀಡಿ ಪಡೆದುಕೊಂಡಿರುವ ನಿವೇಶನಗಳ ಮಂಜೂರಾತಿಯನ್ನು ಏಕೆ ರದ್ದುಪಡಿಸಬಾರದು ಎಂಬ ಕುರಿತು ಖುದ್ದು ಹಾಜರಾಗಿ 7 ದಿನಗಳ ಒಳಗಾಗಿ ಸಮಾಜಾಯಿಷಿಕೆ ನೀಡಲು ರಾಮಕೃಷ್ಣ ಅವರಿಗೆ ಸೂಚಿಸಲಾಗಿದೆ. ತಪ್ಪಿದಲ್ಲಿ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಲಾಗಿದೆ.
ಇಂತಹವರ ವಿರುದ್ಧ ಕಠಿಣ ಕ್ರಮಕ್ಕೆ ನಿವೇಶನರಹಿತರು ಒತ್ತಾಯಿಸಿದ್ದಾರೆ.