ಕೇಂದ್ರ ಬಜೆಟ್: ಮೈಸೂರಿಗರ ಪಾಲಿಗೆ ನಿರಾಶಾದಾಯಕ
ಮೈಸೂರು, ಜುಲೈ 5: 2ನೇ ಬಾರಿಗೆ ಬಹುಮತ ಪಡೆದು ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂದು ಬಜೆಟ್ ಮಂಡಿಸಿದ್ದು, ಮೈಸೂರಿಗರಿಗೆ ಈ ಬಜೆಟ್ ನಿರಾಶಾದಾಯಕವೆಂದೇ ಹೇಳಬಹುದು.
ಮೈಸೂರು-ಕೊಡಗಿನ ಪ್ರವಾಸೋದ್ಯಮಕ್ಕೆ ಪೂರಕವಾಗುವ ಯೋಜನೆ, ಕೈಗಾರಿಕೆಗಳ ಬೆಳವಣಿಗೆ, ಕೊಡಗಿನ ಕಾಫಿ, ಕಾಳುಮೆಣಸು, ಮೈಸೂರಿನ ತಂಬಾಕು ಬೆಳೆಗಾರರ ಹಿತರಕ್ಷಣೆ ಹಾಗೂ ಮೈಸೂರು, ಚಾಮರಾಜನಗರ ಭಾಗದ ರೇಷ್ಮೆ ಬೆಳೆಗಾರರಿಗೆ ಪೂರಕವಾಗುವಂತೆ ಸುಸಜ್ಜಿತ ಮಾರುಕಟ್ಟೆ ವ್ಯವಸ್ಥೆಯ ಕಲ್ಪಿಸುವಿಕೆ, ಹೆಚ್ಚುತ್ತಿರುವ ಪ್ರಾಣಿ-ಮನುಷ್ಯನ ನಡುವಿನ ಸಂಘರ್ಷಕ್ಕೆ ಇತಿಶ್ರೀ ಹಾಕಲು ಶಾಶ್ವತ ಯೋಜನೆಯ ಘೋಷಣೆ, ಮೈಸೂರು-ಕೊಡಗು ನಡುವೆ ಷಟ್ಪಥ ರಸ್ತೆ ನಿರ್ಮಾಣ ಸೇರಿದಂತೆ ಹಲವು ಬೇಡಿಕೆಗಳು ನೆಲಕಚ್ಚಿವೆ.
ನಿರ್ಮಲಾ ಚೊಚ್ಚಲ ಬಜೆಟ್ : ಯಾವುದು ಏರಿಕೆ ? ಯಾವುದು ಇಳಿಕೆ?
ಇದೇ ಸಂದರ್ಭದಲ್ಲಿ, ಬಜೆಟ್ ಕುರಿತು ಜಿಲ್ಲೆಯ ವಿವಿಧ ಕ್ಷೇತ್ರದ ಮುಖಂಡರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಹೋಟೆಲ್ ಉದ್ಯಮಕ್ಕೆ ಏನೂ ಇಲ್ಲ
ಹೋಟೆಲ್ ಉದ್ಯಮಕ್ಕೆ ಬಜೆಟ್ ನಲ್ಲಿ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದೆವು. ಜಿಎಸ್ ಟಿ ಜಾರಿಗೆ ಬಂದ ನಂತರ ಹೋಟೆಲ್ ಹಾಗೂ ರೆಸ್ಟೊರೆಂಟ್ ಗಳಿಗೆ ಶೇ.5ರಷ್ಟು ತೆರಿಗೆ ಇತ್ತು. ಕ್ಯಾಟರಿಂಗ್ ಗೂ ಶೇ. 5ರಷ್ಟು ಮಾಡಿ ಎಂದಿದ್ದೆವು. ಆದರೆ ಅದು ಮಾತ್ರ ಶೇ.18ರಷ್ಟು ಇದೆ. ಟೋಲ್ ಶುಲ್ಕ ರದ್ದು ಮಾಡಿ ಎಂದು ಹೋಟೆಲ್ ಮಾಲೀಕರ ಸಂಘದಿಂದ ಮನವಿ ಮಾಡಿದ್ದೆವು. ಅದೂ ಸಾಧ್ಯವಾಗಿಲ್ಲ. ನಮ್ಮ ನಿರೀಕ್ಷೆಗೆ ಈ ಬಾರಿ ಬಜೆಟ್ ತಲುಪಿಲ್ಲ ಎಂದಿದ್ದಾರೆ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣಗೌಡ.
ಖಾಸಗಿ ಆಸ್ಪತ್ರೆಯತ್ತ ಗಮನ ಕೊಡಬೇಕಿತ್ತು
ವೈದ್ಯಕೀಯ ಕ್ಷೇತ್ರಕ್ಕೆ ಈ ಬಾರಿ ಅಂತಹದ್ದೇನು ವಿಶೇಷ ಗಿಫ್ಟ್ ನೀಡಿಲ್ಲ. ಹೊಸ ಉದ್ಯಮಿಗಳು ಹಾಗೂ ಮಹಿಳಾ ಉದ್ಯಮಿಗಳಿಗೆ ನೀಡಿರುವ ಕೊಡುಗೆಯಲ್ಲಿ ವೈದ್ಯಕೀಯ ಕ್ಷೇತ್ರದ ವಿಭಾಗ ಇದೆಯೇ ಎಂದು ಪರಿಶೀಲಿಸಬೇಕು. ನಮ್ಮದು ಉದ್ಯಮವಾಗಿಬಿಟ್ಟಿದೆ, ನಮಗೆ ವಿಶೇಷತೆ ನೀಡಿಲ್ಲ. ಖಾಸಗಿ ಆಸ್ಪತ್ರೆಗೆ ವಿಶೇಷ ಮೀಸಲಾತಿಯನ್ನು ಬಜೆಟ್ ನೀಡಿಲ್ಲ. ಇದರಿಂದ ನಿರಾಸೆಯಾಗಿದೆ ಎಂದಿದ್ದಾರೆ ವೈದ್ಯರಾದ ರಾಜೇಶ್.
ಕೇಂದ್ರ ಬಜೆಟ್ 2019 : ಕರ್ನಾಟಕದ ನಾಯಕರ ಪ್ರತಿಕ್ರಿಯೆ
ಕೆಲವೊಂದು ಅಂಶಗಳು ಸ್ವಾಗತಾರ್ಹ
ನಾವು ಗುಜರಾತ್ ಮಾದರಿ ಉದ್ಯಮಿ ಸ್ನೇಹ ವ್ಯವಸ್ಥೆ ಜಾರಿಯಾಗಲಿದೆ ಎಂದು ಭಾವಿಸಿದ್ದೆವು. ಅದು ಸಾಧ್ಯವಾಗಿಲ್ಲ. ಎಂಎಸ್ಎಂಇ ಕ್ಷೇತ್ರಕ್ಕೆ ಮೋದಿ ಅವರ ಕೊಡುಗೆ ಅಪಾರ. ಆದರೆ ಅದು ಸಮರ್ಪಕವಾಗಿ ಜಾರಿಗೆ ಬರಲಿಲ್ಲ. 50 ಲಕ್ಷ ಇದ್ದ ಮುದ್ರಾ ಸಾಲ ಯೋಜನೆಯನ್ನು 1 ಲಕ್ಷಕ್ಕೆ ಏರಿಸಿದ್ದಾರೆ. ವಾಸ್ತವಿಕವಾಗಿ ಈ ಯೋಜನೆ ನಿಜವಾದ ಉದ್ಯಮಿಗಳಿಗೆ ತಲುಪುತ್ತಿಲ್ಲ. ಬ್ಯಾಂಕ್ ನವರು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಕೈಗಾರಿಕೆ ಬಗ್ಗೆ ಸಮರ್ಪಕ ಬಜೆಟ್ ಸಿಕ್ಕಿಲ್ಲ. ಆದರೂ ಎಲೆಕ್ಟ್ರಾನಿಕ್ ವಾಹನಗಳಿಗೆ 1.25 ಲಕ್ಷ ಸಹಾಯಧನ ಕೊಡುತ್ತಿರುವುದು, ಶೇ. 5 ತೆರಿಗೆ ಎಲೆಕ್ಟ್ರಾನಿಕ್ ಜಿಎಸ್ ಟಿ ನೀಡಿರುವುದು ಸ್ವಾಗತಾರ್ಹ. ಶೇ.2ರಷ್ಟು ಸಹಾಯಧನವನ್ನು ಎಂಎಸ್ಎಂಇ ಖಾತೆಗೆ ತಂದಿರುವುದು ಸಹ ಸ್ವಾಗತಾರ್ಹ. ಕಾರ್ಮಿಕರಿಗೂ ನಿರೀಕ್ಷಿತ ಮಟ್ಟದಲ್ಲಿ ಬಜೆಟ್ ತಲುಪಿಲ್ಲ ಎನ್ನುತ್ತಾರೆ ಉದ್ಯಮಿ ಸುರೇಶ್ ಕುಮಾರ್ ಜೈನ್.
ಪ್ರವಾಸೋದ್ಯಮಕ್ಕೆ ಶೂನ್ಯ ಕೊಡುಗೆ
ಈಗಿನ ಬಜೆಟ್ ನಲ್ಲಿ ಪ್ರವಾಸೋದ್ಯಮಕ್ಕೆ ಏನನ್ನೂ ನೀಡಿಲ್ಲ. ಮೈಸೂರು ಪ್ರವಾಸೋದ್ಯಮ ಕ್ಷೇತ್ರ. ಆದ್ದರಿಂದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಏನಾದರೂ ಬದಲಾವಣೆ ನಿರೀಕ್ಷೆಯಿತ್ತು. ಪೆಟ್ರೋಲ್ ಬೆಲೆ ಇಳಿಸಬೇಕಿತ್ತು. ಅದೂ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಟ್ರಾವೆಲ್ಸ್ ಮಾಲೀಕ ಶಿವಾನಂದ್.
ಕೇಂದ್ರ ಬಜೆಟ್ : ಪ್ರತಿ ಗ್ರಾಮ ಪಂಚಾಯಿತಿಗೂ ಇಂಟರ್ ನೆಟ್ ಸೌಲಭ್ಯ
ರೈತರ ಮೂಗಿಗೆ ತುಪ್ಪ ಸವರಿದ ಬಜೆಟ್
ರೈತರಿಗೆ ಈ ಬಾರಿ ಬಜೆಟ್ ದ್ರೋಹ ಬಗೆದಿದೆ. ಡಾ.ಸ್ವಾಮಿನಾಥನ್ ವರದಿ ಜಾರಿಗೆ ಬರಲು ಮಾಡಿದ ಪ್ರತಿಭಟನೆಯೆಲ್ಲವನ್ನು ಹುಸಿಗೊಳಿಸಿದ ಬಜೆಟ್ ಇದಾಗಿದೆ. ಆದಾಯ ದ್ವಿಗುಣಗೊಳಿಸುವ ಮೋದಿ ಯೋಜನೆ ಯಾವುದೂ ಜಾರಿಗೆ ಬಂದಿಲ್ಲ. ಬೆಂಬಲ ಬೆಲೆ, ಖರೀದಿ ಕೇಂದ್ರ, ಬರಗಾಲ, ಕೆರೆ ಅಭಿವೃದ್ಧಿ, ರೈತರಿಗೆ ಮಾಸಾಶನ ಇದ್ಯಾವುದು ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ರೈತ ಮುಖಂಡ ಬಸವರಾಜು.