ಅನೈತಿಕ ಸಂಬಂಧ ಪ್ರಶ್ನಿಸಿದ್ದ ಪತ್ನಿಯನ್ನೇ ಕೊಲೆ ಮಾಡಿದ್ದ ಅಧಿಕಾರಿ ಅಮಾನತು
ಮೈಸೂರು, ಮಾ. 10: ನೇಣು ಹಾಕಿ ಪತ್ನಿಯನ್ನು ಕೊಲೆ ಮಾಡಿರುವ ಆರೋಪ ಎದುರಿಸುತ್ತಿರುವ ಮೈಸೂರು ಜಿಲ್ಲೆ ಟಿ. ನರಸಿಪುರ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ವೆಂಕಟಪ್ಪ ಅವರನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಮಾಡಿದೆ.
ಮೈಸೂರು ಜಿಲ್ಲೆ ಟಿ.ನರಸಿಪುರ ತಾಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ಶಿಶು ಯೋಜನಾಧಿಕಾರಿ ವೆಂಕಟಪ್ಪ ಅಮಾನತುಗೊಳಿಸಿ ಆದೇಶ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಹುಣಸೂರು ಸಿಡಿಪಿಒಯಿಂದ ಕೊಲೆ ಯತ್ನ; ಚಿಕಿತ್ಸೆ ಫಲಿಸದೇ ಪತ್ನಿ ಸಾವು
ವೆಂಕಟಪ್ಪ ಅಮಾನತುಗೊಳಿಸಿ ಸಚಿವೆ ಶಶಿಕಲಾ ಜೊಲ್ಲೆ ಆದೇಶ
ಪ್ರಕರಣದ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಸಮಾಜ ಕಲ್ಯಾಣ ಇಲಾಕೆ ಸಚಿವೆ ಶಶಿಕಲಾ ಜೊಲ್ಲೆ ಅವರು, ಮೈಸೂರು ಜಿಲ್ಲೆ ಟಿ.ನರಸಿಪುರ ತಾಲೂಕಿನಲ್ಲಿ ಸಿಡಿಪಿಒ ಆಗಿರುವ ವೆಂಕಟಪ್ಪ ತನ್ನ ಪತ್ನಿಗೆ ಹೊಡೆದು, ಬಡೆದು ಅವಳನ್ನು ನೇಣು ಹಾಕಿರುವ ವಿಷಯ ಬೆಳಕಿಗೆ ಬಂದಿತ್ತು. ಸಮಾಜ ಕಲ್ಯಾಣ ಇಲಾಖೆಯ ಮೈಸೂರು ಜಿಲ್ಲೆಯ ಉಪನಿರ್ದೇಶಕರಿಂದ ಇಲಾಖಾ ತನಿಖೆ ನಡೆಸಿ ವರದಿ ಕೊಡುವಂತೆ ಆದೇಶ ಮಾಡಿದ್ದೆ. ಅದರಂತೆ ಇಲಾಖಾ ವರದಿ ಬಂದಿದ್ದು, ಜೊತೆಗೆ ಈ ಬಗ್ಗೆ FIR ಸೇರಿದಂತೆ ಉಳಿದ ವಿಚಾರಣೆ ವರದಿಗಳನ್ನು ನೋಡಿದಾಗ ಕಳೆದ ಹಲವು ವರ್ಷಗಳಿಂದ ಹೆಂಡತಿಗೆ ಪತಿ ವೆಂಕಟಪ್ಪ ದೈಹಿಕ ಹಿಂಸೆ ಕೊಡುತ್ತಿದ್ದರು ಎಂಬುದು ತಿಳಿದು ಬಂದಿದೆ ಎಂದು ಹೇಳಿದ್ದಾರೆ.
ಸಿಡಿಪಿಒ ವೆಂಕಟಪ್ಪ ಅವರು ತನ್ನ ಪತ್ನಿಗೆ ಬಹಳ ವರ್ಷಗಳಿಂದ ಹೊಡೆಯುವುದು, ಬಡಿಯುವುದು ಹಾಗೂ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರು ಎಂಬುದು ಇಲಾಖೆಯ ತನಿಖಾ ವರದಿಯಲ್ಲಿದೆ. ಜೊತೆಗೆ ಪೊಲೀಸರು ದಾಖಲಿಸಿರುವ ಎಫ್ಐಆರ್ನಲ್ಲಿಯೂ IPC ಸೆಕ್ಷನ್ 307 (ಕೊಲೆಯತ್ನ) 498, 504 ಕಲಂಗಳಡಿ ಪ್ರಕರಣ ದಾಖಲಾಗಿದೆ. ಸಿಡಿಪಿಒ ಅಪರಾಧಿ ಸ್ಥಾನದಲ್ಲಿರುವುದರಿಂದ ಪ್ರಕರಣ ಇತ್ಯರ್ಥವಾಗುವ ವರೆಗೆ ವೆಂಕಟಪ್ಪ ಅವರನ್ನು ಅಮಾನತ್ತು ಮಾಡಿ ಆದೇಶ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಕೊಲೆ ಯತ್ನದ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ನಾಗವೇಣಿ
ವೆಂಕಟಪ್ಪನ ಅನೈತಿಕ ಸಂಬಂಧ ವಿರೋಧಿಸಿದ್ದೆ ಪತ್ನಿ ನಾಗವೇಣಿ ಕೊಲೆಗೆ ಕಾರಣ ಎಂದು ತಿಳಿದು ಬಂದಿತ್ತು. ಕಳೆದ ಮಾರ್ಚ್ 3 ರಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ನಾಗವೇಣಿ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಿಸುವಾಗಲೇ ಪ್ರಜ್ಞೆ ಕಳೆದುಕೊಂಡಿದ್ದ ನಾಗವೇಣಿ ಅವರು, ಸತತ 7 ದಿನಗಳ ಕಾಲ ಆಸ್ಪತ್ರೆಯಲ್ಲಿ ಸಾವು ಬದುಕಿನೊಂದಿಗೆ ಹೋರಾಡಿ ಮಾರ್ಚ್ 9 ರಂದು ಮೃತಪಟ್ಟಿದ್ದರು.
ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಯ ಕೊಲೆ
ಪತಿಯ ಅನೈತಿಕ ವ್ಯವಹಾರಗಳಿಂದ ಬೇಸತ್ತ ನಾಗವೇಣಿ ಎಲ್ಲ ವಿಷಯಗಳನ್ನು ತನ್ನ ಪೋಷಕರಿಗೆ ತಿಳಿಸುವುದಾಗಿ ಪತಿ ವೆಂಕಟ್ಟಪ್ಪನಿಗೆ ಬೆದರಿಕೆ ಹಾಕಿದ್ದರು. ಬೆದರಿಕೆಗೆ ಹೆದರಿದ್ದ ವೆಂಕಟಪ್ಪ ನೇಣು ಬಿಗಿದು ಪತ್ನಿಯನ್ನು ಕೊಲೆ ಮಾಡಿದ್ದಾರೆಂದು ನಾಗವೇಣಿ ಪೋಷಕರು ಆರೋಪಿಸಿದ್ದಾರೆ.
FIR ದಾಖಲಿಸಿ ವಾರವಾದರು ವೆಂಕಟಪ್ಪ ಬಂಧಿಸದ ಪೊಲೀಸರು
FIR ಆಗಿ ಆರು ದಿನಗಳು ಕಳೆದಿದ್ದರೂ ಆರೋಪಿ ಸಹಾಯಕ ಶಿಶುಯೋಜನಾಧಿಕಾರಿ ವೆಂಕಟಪ್ಪ ಅವರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿಲ್ಲ.
ಈಗಲಾದರೂ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುತ್ತಾರೆಂಬ ನಂಬಿಕೆಯಲ್ಲಿ ನತದೃಷ್ಟ ನಾಗವೇಣಿ ಅವರ ಪೋಷಕರಿದ್ದಾರೆ.