ಮೈಸೂರು ಸಿಸಿಬಿಗೆ ಸೆರೆಸಿಕ್ಕ ಟಿಂಬರ್ ಅತೀಫ್ ಹತ್ಯಾಕಾಂಡಗಳ ರಹಸ್ಯ ಬಯಲು
ಮೈಸೂರು, ಏಪ್ರಿಲ್ 28:ಹಲವು ಹತ್ಯಾ ಪ್ರಕರಣಗಳ ಮಾಸ್ಟರ್ ಮೈಂಡ್, ನರಹಂತಕ ಮೂವತ್ತೊಂಬತ್ತು ವರ್ಷದ ಟಿಂಬರ್ ಅತೀಫ್ ಎಂಬಾತನನ್ನು ಮೈಸೂರಿನ ಸಿಸಿಬಿ ಮತ್ತು ಕುವೆಂಪುನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಈತನ ಬಂಧನದ ಬಳಿಕ ಇಡೀ ಮೈಸೂರನ್ನೇ ತಲ್ಲಣಗೊಳಿಸಿದ್ದ ಆರ್ಎಸ್ಎಸ್ ಮತ್ತು ಬಿಜೆಪಿ ಕಾರ್ಯಕರ್ತ ಕ್ಯಾತಮಾರನಹಳ್ಳಿ ರಾಜು ಹತ್ಯೆ, ಜಿಮ್ ಮಾಲೀಕ ಶಶಿಕುಮಾರ್ ಕೊಲೆ, ಬಿಜೆಪಿ ಮುಖಂಡ ಗಿರಿಧರ್ ಮೇಲೆ ಮಾರಣಾಂತಿಕ ಹಲ್ಲೆ, ಹುಣಸೂರು ಉದ್ಯಮಿಗಳ ಪುತ್ರರ ಹತ್ಯೆ ಹೀಗೆ ಹಲವು ಹತ್ಯಾ ಕಾಂಡಗಳ ರಹಸ್ಯ ಬಯಲಾಗುತ್ತಾ ಹೋಗುತ್ತಿದೆ.
ಮರ್ಯಾದೆ ಹತ್ಯೆ: ತೆಲಂಗಾಣದ ಪ್ರಣಯ್ ಕುಮಾರ್ ಕೊಲೆ ಆರೋಪಿಗೆ ಜಾಮೀನು
ಸುಮಾರು ಒಂದು ದಶಕಗಳ ಕಾಲ ತನ್ನದೇ ಪಟಾಲಂ ಕಟ್ಟಿಕೊಂಡು ಹಿಂದೂ ಮುಖಂಡರನ್ನೇ ಟಾರ್ಗೆಟ್ ಮಾಡುತ್ತಾ ಹತ್ಯೆಗೈಯ್ಯುತ್ತಿದ್ದ ಮೈಸೂರಿನ ಲಷ್ಕರ್ ಮೊಹಲ್ಲಾದ ಎರೆಕಟ್ಟೆ ಬೀದಿ ನಿವಾಸಿ ಅಬ್ದುಲ್ ರವೂಫ್ ಷರೀಫ್ ಪುತ್ರ ಅತೀಫ್ ಅಹಮದ್ ಷರೀಫ್ ಅಲಿಯಾಸ್ ಟಿಂಬರ್ ಅತೀಫ್ನ ಬಂಧನದ ಬಳಿಕ ಜನ ನೆಮ್ಮದಿಯುಸಿರು ಬಿಟ್ಟಿದ್ದಾರೆ.
ಮೈಸೂರಲ್ಲಿ ನಡೆದ ಬಿಜೆಪಿ ಮುಖಂಡರ ಹತ್ಯೆಗಳ ತನಿಖೆ ನಡೆಸಿದ ಪೊಲೀಸರು ಈ ಹಿಂದೆಯೇ ಹಲವರನ್ನು ಬಂಧಿಸಿದ್ದಾರೆಯಾದರೂ ಮಾಸ್ಟರ್ ಮೈಂಡ್ ಟಿಂಬರ್ ಅತೀಫ್ ಮಾತ್ರ ಪೊಲೀಸರಿಗೆ ಸಿಕ್ಕಿ ಬೀಳದೆ ತಪ್ಪಿಸಿಕೊಳ್ಳುತ್ತಿದ್ದನು.
ಈತನ ಮೇಲೆ ಕೇರಳದಲ್ಲಿದ್ದುಕೊಂಡು ಕರ್ನಾಟಕದ ಮೇಲೆ ನಿಗಾವಹಿಸುತ್ತಿರುವ ನಿಷೇಧಿತ ಪಿಎಫ್ಐ ಮತ್ತು ಕೆಎಫ್ಡಿ ಸಂಘಟನೆಯೂ ಪ್ರಭಾವ ಬೀರಿದೆ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ. ಪೊಲೀಸರು ಕ್ಯಾತಮಾರನಹಳ್ಳಿ ರಾಜು ಹತ್ಯೆಗೆ ಸಂಬಂಧಿಸಿದಂತೆ ತನಿಖೆ ನಡೆಸಿದಾಗ ನಟೋರಿಯಸ್ ಮೂವತ್ತನಾಲ್ಕು ವರ್ಷದ ಅಬೀದ್ಪಾಷಾ ಎಂಬಾತ ಸಿಕ್ಕಿಬಿದ್ದಿದ್ದನು.
ಗೋವಾ ಹೋಟೆಲ್ ಕೋಣೆಯಲ್ಲಿ ಪ್ರವಾಸಿ ಮಹಿಳೆ ಶವ ಪತ್ತೆ, ಗೆಳೆಯ ನಾಪತ್ತೆ
ಈತ ಹುಣಸೂರಿನ ಬಜಾರ್ ರಸ್ತೆ ನಿವಾಸಿಯಾಗಿದ್ದು, ಮೈಸೂರು ಉದಯಗಿರಿ ವ್ಯಾಪ್ತಿಯಲ್ಲಿ ನೆಲೆಸಿದ್ದನಲ್ಲದೆ, ಬೈಯ್ಯ, ಇಬ್ರಾಹಿಂ, ಉಸ್ಮಾನ್ ಹೀಗೆ ವಿವಿಧ ಹೆಸರುಗಳಿಂದ ಕರೆಯಿಸಿಕೊಳ್ಳುತ್ತಿದ್ದನು. ಈತನನ್ನು ವಿಚಾರಣೆಗೊಳಪಡಿಸಿದಾಗ ರಾಜು ಹತ್ಯೆ ಸೇರಿದಂತೆ ಹಲವು ಹತ್ಯೆಗಳ ಹಿಂದೆ ಮಾಸ್ಟರ್ ಮೈಂಡ್ ಟಿಂಬರ್ ಅತೀಫ್ ಎಂಬಾತ ಇದ್ದಾನೆ ಎಂಬುದು ಬೆಳಕಿಗೆ ಬಂದಿತ್ತು.
ಎಲ್ಲ ಹತ್ಯೆಗಳಿಗೂ ಟಿಂಬರ್ ಅತೀಫ್ ಸೂತ್ರಧಾರನಾಗಿದ್ದು, ಹತ್ಯೆ ಪ್ರಕರಣಗಳಲ್ಲಿ ಈತನ ಸಹಚರರು ಸಿಕ್ಕಿ ಬೀಳುತ್ತಿದ್ದರಾದರೂ ಟಿಂಬರ್ ಅತೀಫ್ ಮಾತ್ರ ಎಸ್ಕೇಪ್ ಆಗಿಬಿಡುತ್ತಿದ್ದನು.
ಅಬೀದ್ ಪಾಷಾ ಬಂಧನ
ನೆನಪಿರಬಹುದು 2016 ರ ಮಾರ್ಚ್ 13 ರಂದು ಉದಯಗಿರಿಯ ಮಹಾತ್ಮಗಾಂಧೀಜಿ ವೃತ್ತದಲ್ಲಿರುವ ವಿನಾಯಕ ಟೀ ಅಂಗಡಿಯಲ್ಲಿ ಎಂದಿನಂತೆ ಟೀ ಕುಡಿಯುತ್ತಾ ಪೇಪರ್ ಓದುತ್ತಾ ಕ್ಯಾತಮಾರನಹಳ್ಳಿ ನಿವಾಸಿ, ಆರ್ಎಸ್ಎಸ್, ಬಿಜೆಪಿ ಕಾರ್ಯಕರ್ತ ರಾಜು ಕುಳಿತಿದ್ದರು. ಇದ್ದಕ್ಕಿದ್ದಂತೆ ಬೈಕ್ನಲ್ಲಿ ಬಂದ ಇಬ್ಬರು ರಾಡ್ ಹಾಗೂ ಲಾಂಗ್ನ್ನು ರಾಜು ಮೇಲೆ ಎಲ್ಲೆಂದರಲ್ಲಿ ಬೀಸಿ ಎಸ್ಕೇಪ್ ಆಗಿದ್ದರು. ಗಂಭೀರ ಗಾಯಗೊಂಡಿದ್ದ ರಾಜು ಸಾವನ್ನಪ್ಪಿದ್ದರು. ಸಿಸಿಟಿವಿಯನ್ನು ಗಮನಿಸಿದಾಗ ಅದರಲ್ಲಿ ಎಲ್ಲವೂ ಅಸ್ಪಷ್ಟ ಮಾಹಿತಿಗಳಿದ್ದವು. ತಕ್ಷಣಕ್ಕೆ ಆರೋಪಿಗಳನ್ನು ಪತ್ತೆಹಚ್ಚುವುದು ಕಷ್ಟಕರವಾಗಿತ್ತು. ಆದರೂ ಅದನ್ನು ಎತ್ತಿಟ್ಟುಕೊಂಡ ತನಿಖಾ ತಂಡ ತನ್ನ ಪತ್ತೆ ಕಾರ್ಯವನ್ನು ಮುಂದುವರೆಸಿ ಮೈಸೂರಿನ ಉದಯಗಿರಿ ಠಾಣಾ ವ್ಯಾಪ್ತಿಯ ರಿಂಗ್ ರಸ್ತೆಯ ರಾಜೀವ್ನಗರ ಕ್ರಾಸ್ನಲ್ಲಿರುವ ವಾಟರ್ ಟ್ಯಾಂಕ್ ಬಳಿ ಅಬೀದ್ ಪಾಷಾನನ್ನು ಬಂಧಿಸಲಾಯಿತು. ಈ ವೇಳೆ ಆತನೊಂದಿಗೆ ಇದ್ದವನು ಮತ್ತು ಎಸ್ಕೇಪ್ ಆದವನು ಟಿಂಬರ್ ಅತೀಫ್ ಎಂಬುದು ಗೊತ್ತಾಗಿತ್ತು.
ಕ್ಷಣಾರ್ಧದಲ್ಲೇ ಹತ್ಯೆಗೈದು ಪರಾರಿ
ಇದೀಗ ವ್ಯವಸ್ಥಿತ ಯೋಜನೆ ರೂಪಿಸಿ ಟಿಂಬರ್ ಅತೀಫ್ನನ್ನು ಏಪ್ರಿಲ್ 24ರ ಬುಧವಾರ ರಾತ್ರಿ ಬೆಂಗಳೂರಿನಲ್ಲಿ ಬಂಧಿಸಿರುವ ಮೈಸೂರಿನ ಸಿಸಿಬಿ ಮತ್ತು ಕುವೆಂಪುನಗರ ಠಾಣೆ ಪೊಲೀಸರು, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಟಿಂಬರ್ ಅತೀಫ್ ವೃತ್ತಿನಿರತ ಹಂತಕನಾಗಿದ್ದು, ವಿವಿಧ ನಗರಗಳಲ್ಲಿ ತನ್ನದೇ ಆದ ತಂಡವನ್ನು ಕಟ್ಟಿಕೊಂಡು ತಾನು ಹತ್ಯೆ ಮಾಡಬೇಕಾದ ವ್ಯಕ್ತಿಯ ಚಲನ-ವಲನಗಳನ್ನು ಸೂಕ್ಷ್ಮವಾಗಿ ಗಮನಿಸಿ ವ್ಯವಸ್ಥಿತ ಸಂಚು ರೂಪಿಸಿ, ಕ್ಷಣಾರ್ಧದಲ್ಲೇ ಹತ್ಯೆಗೈದು ಪರಾರಿಯಾಗುತ್ತಿದ್ದನು ಎಂಬುದು ಈಗ ಬೆಳಕಿಗೆ ಬಂದಿದೆ.
ಉದ್ಯಮಿ ಪುತ್ರರ ಅಪಹರಣ-ಕೊಲೆ
2011 ರ ಜೂನ್ 8 ರಂದು ಹುಣಸೂರಿನ ಉದ್ಯಮಿ ಮೋಹನ್ಕುಮಾರ್ ಅವರ ಪುತ್ರ ಸುಧೀಂದ್ರ ಮತ್ತು ಆತನ ಗೆಳೆಯ ವಿಘ್ನೇಶ್ ಎಂಬಿಬ್ಬರು ಮೈಸೂರಿನ ಮಹಾಜನ ಕಾಲೇಜಿನಲ್ಲಿ ಓದುತ್ತಿದ್ದರು. ಹಣಕ್ಕಾಗಿ ಅವರನ್ನು ಕಿಡ್ನಾಪ್ ಮಾಡಿದ ಟಿಂಬರ್ ಅತೀಫ್ ಮತ್ತು ಸಹಚರರು ಅವರಿಬ್ಬರನ್ನು ತಂದು ಉದಯಗಿರಿಯ ಮನೆಯೊಂದರಲ್ಲಿ ಕೂಡಿಟ್ಟಿದ್ದನು. ಹಣದ ಬೇಡಿಕೆಯಿಟ್ಟಿದ್ದನಾದರೂ ಪೊಲೀಸರು ಹುಡುಕುತ್ತಿದ್ದು, ಸಿಕ್ಕಿಬಿದ್ದರೆ ತೊಂದರೆಯಾಗುತ್ತದೆ ಎಂದು ಜೂ.11ರಂದು ಕತ್ತು ಬಿಗಿದು ಕೊಲೆ ಮಾಡಿ ಬಳಿಕ ಶವವನ್ನು ಬೆಂಗಳೂರು ಮೂಲಕ ಚಿಕ್ಕಬಳ್ಳಾಪುರದ ರಾಷ್ಟ್ರೀಯ ಹೆದ್ದಾರಿ ಬಳಿಯ ಅಗಲಗುರ್ಕಿ ಗ್ರಾಮದ ಹತ್ತಿರ ಶವವನ್ನು ಎಸೆದು ತಲೆಮರೆಸಿಕೊಂಡಿದ್ದರು.
ಮೆನ್ಸ್ ಪಾರ್ಲರ್ ಮಾಲೀಕನ ಕೊಲೆ
2008 ರಲ್ಲಿ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೆನ್ಸ್ ಪಾರ್ಲರ್ ನಡೆಸುತ್ತಿದ್ದ ಜಿಮ್ ಮಾಲೀಕ ಶಶಿಕುಮಾರನನ್ನು ಬೆಳ್ಳಂಬೆಳಿಗ್ಗೆ ಆತ ಪಾರ್ಲರ್ ಬಾಗಿಲು ತೆಗೆಯುತ್ತಿದ್ದಂತೆಯೇ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಹಂತಕರ ಸುಳಿವು ಸಿಗದೆ ಪೊಲೀಸರು ಪರದಾಡುವಂತಾಗಿತ್ತು. ಉದಯಗಿರಿ ಪೊಲೀಸರಿಂದ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು. ಆಗಲೂ ಪ್ರಯೋಜನವಾಗದಿದ್ದಾಗ ಪ್ರಕರಣ ಸಿಐಡಿ ತನಿಖೆಗೆ ಒಳಪಡಿಸಲಾಗಿತ್ತು. ಈ ಪ್ರಕರಣದ ಜಾಡು ಹಿಡಿದು ಹೋದ ಪೊಲೀಸರಿಗೆ ಟಿಂಬರ್ ಅತೀಫ್ನ ಕೈವಾಡವಿರುವುದು ಬೆಳಕಿಗೆ ಬಂದಿತ್ತು. ಅವತ್ತಿನಿಂದಲೇ ಮೈಸೂರು ಪೊಲೀಸರು ಈತನ ಬಂಧನಕ್ಕಾಗಿ ಹುಡುಕಾಟ ಆರಂಭಿಸಿದ್ದರು. ಆದರೆ ಪೊಲೀಸರಿಗೆ ಸಿಕ್ಕಿಬೀಳದೆ ತಪ್ಪಿಸಿಕೊಳ್ಳುತ್ತಲೇ ಇದ್ದನು.
ಬಿಜೆಪಿ ಮುಖಂಡ ಗಿರಿಧರ್ ಮೇಲೆ ಹಲ್ಲೆ
2009 ರ 2ನೇ ಆಷಾಢ ಶುಕ್ರವಾರದಂದು ಸಂಜೆ ಬಿಜೆಪಿ ಮುಖಂಡ ಗಿರಿಧರ್ ಮೇಲೆ ಅವರ ಮನೆ ಮುಂದೆಯೇ ಪತ್ನಿ ಕಣ್ಣೆದುರೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿತ್ತು. ಹಲವಾರು ದಿನ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದ ಗಿರಿಧರ್ ಅವರಿಗೆ ಸರ್ಕಾರವೇ ಖಾಸಗಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಕೊಡಿಸುವ ಮೂಲಕ ಅವರ ಪ್ರಾಣ ಉಳಿಸಿತ್ತು. ಈ ಪ್ರಕರಣದಲ್ಲಿ ಅಬಿದ್ಪಾಷ, ಮುಜಾಮಿಲ್, ಆಮೀನ್ ಮುಂದಾದವರು ಸಿಕ್ಕಿಬಿದ್ದರು. ಇದರ ಮಾಸ್ಟರ್ ಮೈಂಡ್ ಟಿಂಬರ್ ಅತೀಫ್ ಎಂಬುದು ಕೂಡ ಅವತ್ತು ಗೊತ್ತಾಗಿತ್ತು. ಆದರೆ ಹಂತಕ ಟಿಂಬರ್ ಅತೀಫ್ ಅವತ್ತು ಕೂಡ ಪೊಲೀಸರಿಗೆ ಸಿಕ್ಕಿ ಬಿದ್ದಿರಲಿಲ್ಲ.
ಮಹಿಳೆಯೊಬ್ಬಳ ಹತ್ಯೆಯಲ್ಲಿಯೂ ಕೈವಾಡ
ಇನ್ನು ಲಷ್ಕರ್ ಮೊಹಲ್ಲಾದಲ್ಲಿ ಆನಂದ್ಪೈ ಮತ್ತು ರಮೇಶ್ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಈ ಪ್ರಕರಣದಲ್ಲಿ ರಮೇಶ್ ಸಾವನ್ನಪ್ಪಿದ್ದರು. ಮಂಡಿಮೊಹಲ್ಲಾದಲ್ಲಿ ಸಹೋದರರಾದ ಸತೀಶ್ ಮತ್ತು ಹರೀಶ್ ಎಂಬುವರ ಮೇಲೆಯೂ ನಡೆದ ಮಾರಣಾಂತಿಕ ಹಲ್ಲೆಯನ್ನು ನಡೆಸಿದ್ದು, ಗಂಭೀರ ಗಾಯಗೊಂಡ ಸತೀಶ್ ಸಾವನ್ನಪ್ಪಿದ್ದರು. ಇಷ್ಟೇ ಅಲ್ಲದೆ ಮಹಿಳೆಯೊಬ್ಬಳ ಹತ್ಯೆಯಲ್ಲಿಯೂ ಟಿಂಬರ್ ಅತೀಫ್ ಕೈವಾಡವಿದೆ ಎನ್ನಲಾಗಿದೆ.
ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ
ಸದ್ಯ ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಮಾರ್ಗದರ್ಶನದಲ್ಲಿ ಡಿಸಿಪಿ ಎಂ. ಮುತ್ತುರಾಜ್, ಸಿಸಿಬಿ ಎಸಿಪಿ ವಿ. ಮರಿಯಪ್ಪ ನೇತೃತ್ವದಲ್ಲಿ ಸಿಸಿಬಿ ಇನ್ಸ್ಪೆಕ್ಟರ್ ಸಿ. ಕಿರಣ್ಕುಮಾರ್, ಕುವೆಂಪುನಗರ ಠಾಣೆಯ ಇನ್ಸ್ಪೆಕ್ಟರ್ ಜಿ.ಸಿ. ರಾಜು, ಸಿಬ್ಬಂದಿಗಳಾದ ನಿರಂಜನ್ ಮತ್ತು ರಾಜೇಂದ್ರ ಅವರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಈತನ ಬಂಧನದ ವಿಷಯ ತಿಳಿಯುತ್ತಿದ್ದಂತೆಯೇ ಹೈದರಾಬಾದ್ ಪೊಲೀಸರು ಮೈಸೂರಿಗೆ ಆಗಮಿಸಿ, ಅಲ್ಲಿನ ಹತ್ಯೆ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಆತನನ್ನು ತಮ್ಮ ವಶಕ್ಕೆ ನೀಡಬೇಕೆಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲಿ ಇನ್ಯಾವ ರೀತಿಯ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ.