ಬೆಳಗೊಳದ ಟೀ ಸ್ಟಾಲ್ ನಲ್ಲಿ ಗಾಂಜಾ ಮಾರಾಟ
ಮೈಸೂರು, ಫೆಬ್ರವರಿ 27: ಟೀ ಸ್ಟಾಲ್ ಇಟ್ಟುಕೊಂಡು, ಆ ಅಂಗಡಿಯಲ್ಲೇ ಗಾಂಜಾ ಕೂಡ ಮಾರಾಟ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ದಶಕಗಳಿಂದ ಗಾಂಜಾ ದಂಧೆಯಲ್ಲಿ ತೊಡಗಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿ ಅವರಿಂದ 23 ಕೆ.ಜಿ 567 ಗ್ರಾಂ ಗಾಂಜಾ ಮತ್ತು ನಗದು ವಶಪಡಿಸಿಕೊಂಡಿದ್ದಾರೆ.
ಫೆ.24ರಂದು ಖಚಿತ ಮಾಹಿತಿ ಮೇರೆಗೆ ಕೆಆರ್ ಎಸ್ ರಸ್ತೆಯಲ್ಲಿರುವ ಪಿಕೆಟಿಬಿ ಆಸ್ಪತ್ರೆ ಎದುರಿನ ಬಸ್ ಸ್ಟಾಪ್ ಬಳಿ ದಾಳಿ ಮಾಡಿ ಅಲ್ಲಿ ಒಂದು ಕಿಟ್ ಬ್ಯಾಗ್ನಲ್ಲಿ ಗಾಂಜಾವನ್ನು ತುಂಬಿಕೊಂಡು ಮಾರಾಟ ಮಾಡಲು ನಿಂತಿದ್ದ ಆರೋಪಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ಸಿದ್ದರಾಜು (60) ವಶಕ್ಕೆ ಪಡೆದು ಆತನ ಬಳಿ ಇದ್ದ 5 ಕೆ.ಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
5.6 ಟನ್ ಮಾದಕ ವಸ್ತು ಪತ್ತೆಹಚ್ಚಿದ ಪೊಲೀಸ್ ಶ್ವಾನ
ಈತನ ಮಗ ಬಿ.ಎಸ್.ಮಂಜುನಾಥ್ (36) ಮತ್ತೊಬ್ಬ ಆರೋಪಿಯಾಗಿದ್ದು, ಈತನ ಬೆಳಗೊಳದಲ್ಲಿರುವ ಟೀ ಸ್ಟಾಲ್ ಅಂಗಡಿಯಲ್ಲಿ ಮಾರಾಟ ಮಾಡಲು ಇಟ್ಟುಕೊಂಡಿದ್ದ, 18 ಕೆ.ಜಿ 117 ಗ್ರಾಂ ತೂಕದ ಗಾಂಜಾ ಮತ್ತು 5380 ರೂ. ನಗದು ಪಡಿಸಿಕೊಂಡಿದ್ದಾರೆ. ಆರೋಪಿ ಮಂಜುನಾಥ್ ಇದೇ ರೀತಿ ತನ್ನ ಅಂಗಡಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಸಂಬಂಧ ಈ ಹಿಂದೆ ಕೆಆರ್ ಎಸ್ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿ ಜೈಲಿಗೂ ಹೋಗಿ ಬಂದಿದ್ದಾನೆ. ಈ ಕುರಿತು ಸಿಸಿಬಿ ಘಟಕದಲ್ಲಿ ತನಿಖೆ ಮುಂದುವರೆದಿದೆ.