ಕೇಂದ್ರ ಜಲ ಆಯೋಗದಿಂದ ವಾಸ್ತವ ವರದಿ: ದೇವೇಗೌಡ ವಿಶ್ವಾಸ
ನಂಜನಗೂಡು, ಅಕ್ಟೋಬರ್ 13: ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್.ಝಾ ನೇತೃತ್ವದ 13 ಸದಸ್ಯರ ತಂಡವು ಕರ್ನಾಟಕ ಹಾಗೂ ತಮಿಳುನಾಡಿನ ವಾಸ್ತವ ವರದಿಯನ್ನೇ ನೀಡಲಿದೆ ಎಂಬ ವಿಶ್ವಾಸವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ವ್ಯಕ್ತಪಡಿಸಿದ್ದಾರೆ.
ಪತ್ನಿ ಚೆನ್ನಮ್ಮ, ಎರಡನೇ ಮಗ ಬಾಲಕೃಷ್ಣ, ಸೊಸೆ ಸೌಮ್ಯರಮೇಶ್ ಅವರೊಂದಿಗೆ ನಂಜನಗೂಡಿಗೆ ಆಗಮಿಸಿ ಶ್ರೀಕಂಠೇಶ್ವರನ ದರ್ಶನ ಪಡೆದರು. ಆ ನಂತರ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಅಧ್ಯಯನ ನಡೆಸಿದ ತಂಡವು ವಾಸ್ತವ ಅಂಶವನ್ನು ವರದಿಯಲ್ಲಿ ನೀಡುವ ವಿಶ್ವಾಸವಿದೆ ಎಂದು ಹೇಳಿದರು.[ಮೋದಿ ಹಾಗೂ ದೇವೇಗೌಡರಿಗೆ ಥ್ಯಾಂಕ್ಸ್ ಎಂದ ಕರ್ನಾಟಕ]
ಕೇಂದ್ರ ಜಲ ಆಯೋಗದ ತಂಡದಲ್ಲಿ ಉನ್ನತ ಮಟ್ಟದ ಹಿರಿಯ ತಾಂತ್ರಿಕ ಅಧಿಕಾರಿಗಳಿದ್ದು, ಎರಡು ರಾಜ್ಯಗಳಲ್ಲೂ ಪರಿಶೀಲನೆ ನಡೆಸಿ ವಾಸ್ತವ ವರದಿಯನ್ನು ನೀಡಲಿದೆ ಎಂದರು. ಇನ್ನು ಈಶ್ವರ ನಮ್ಮ ಕುಲದೇವರಾಗಿದ್ದು, ನಾನು ಮೂರು ವರ್ಷದ ಬಾಲಕನಾಗಿದ್ದಾಗಿನಿಂದಲೂ ತಂದೆ- ತಾಯಿಗಳ ಜೊತೆ ರೈಲಿನಲ್ಲಿ ಬಂದು ದರ್ಶನ ಪಡೆದಿದ್ದೆ ಎಂದರು.[ದೇವೇಗೌಡರಿಂದ ಕಾವೇರಿಗಾಗಿ ಉಪವಾಸ ಸತ್ಯಾಗ್ರಹ]
ಅದರಂತೆ ವರ್ಷಕ್ಕೆ 2 ಬಾರಿ ಶೃಂಗೇರಿ ಶಾರದಾಂಬೆ, ಧರ್ಮಸ್ಥಳ ಮಂಜುನಾಥ ಹಾಗೂ ಶ್ರೀಕಂಠೇಶ್ವರನ ದರ್ಶನ ಪಡೆಯುತ್ತಿದ್ದೇನೆ. ಇದರಲ್ಲಿ ಯಾವುದೇ ವಿಶೇಷ ಇಲ್ಲ ಎಂದ ಅವರು, ನಂಜನಗೂಡು ವಿಧಾನಸಭೆಯಲ್ಲಿ ಮರು ಚುನಾವಣೆಯಾಗುವ ಲಕ್ಷಣಗಳಿದ್ದು, ಒಂದು ವೇಳೆ ಆದರೆ ನಿಮ್ಮ ಪಕ್ಷದಿಂದ ಅಭ್ಯರ್ಥಿಯನ್ನು ಹಾಕುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ದೇವರ ದರ್ಶನಕ್ಕೆ ಇಲ್ಲಿಗೆ ಬಂದಿದ್ದೇನೆ, ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ ಎಂದರು.