ಕಾವೇರಿ ವಿವಾದ; ಕೇಂದ್ರಕ್ಕೆ ಒತ್ತಡ ಹೇರುವಂತೆ ಸಲಹಾ ಸಮಿತಿ ಸಲಹೆ
ಮೈಸೂರು, ಜೂನ್ 26: ರಾಜ್ಯದ ಎಲ್ಲಾ ಸಂಸದರು ಕಾವೇರಿ ಜಲಾನಯನ ಪ್ರದೇಶದಿಂದ ತಮಿಳುನಾಡಿಗೆ ನೀರು ಬಿಡದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ ಎಂದು ಕಾವೇರಿ ತಾಂತ್ರಿಕ ಸಲಹಾ ಸಮಿತಿ ಮನವಿ ಮಾಡಿದೆ.
ಕಾವೇರಿ ತಾಂತ್ರಿಕ ಸಲಹಾ ಸಮಿತಿ ಮೈಸೂರಿನಲ್ಲಿ ಸಭೆ ನಡೆಸಿ, ಮುಂದಿನ ಮೂರು ದಿನಗಳೊಳಗೆ ಕರಡು ತಯಾರಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸುವುದು ಮತ್ತು ರಾಜ್ಯದ 28 ಸಂಸದರಿಗೂ ಕರಡು ಕಳುಹಿಸುವುದರ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗಿದೆ. ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ರಾಜ್ಯ ಸರ್ಕಾರದ ಪ್ರತಿನಿಧಿಗಳು ಹಾಗೂ ರಾಜ್ಯದ ಎಲ್ಲ ಸಂಸದರನ್ನು ಒಳಗೊಂಡ ನಿಯೋಗ ಭೇಟಿ ಮಾಡಬೇಕು. ರಾಜ್ಯದ ಜಲಾಶಯಗಳ ಸ್ಥಿತಿಗತಿ ಹಾಗೂ ಮುಂಗಾರು ಮಳೆ ವಿಫಲಗೊಳ್ಳುತ್ತಿರುವ ಕುರಿತು ವಸ್ತುಸ್ಥಿತಿಯನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಮಳೆ ಬಂದರೆ ಮಾತ್ರ ತಮಿಳುನಾಡಿಗೆ ನೀರು, ಕರ್ನಾಟಕಕ್ಕೆ ನೆಮ್ಮದಿ
ಕಾವೇರಿ ನೀರಿನ ವಿವಾದದ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ನೀರಾವರಿ ಇಲಾಖೆಯ ಎಂಜಿನಿಯರುಗಳ ತುರ್ತು ಸಭೆ ನಡೆಸಿ, ಜಲಾಶಯಗಳಲ್ಲಿ ಲಭ್ಯ ಇರುವ ನೀರಿನ ಹಂಚಿಕೆ ಕುರಿತು ವೈಜ್ಞಾನಿಕ ನಿರ್ಣಯ ಕೈಗೊಳ್ಳಬೇಕು. ಬೆಳೆಗಳಿಗೆ ನೀರು ಹರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿರುವ ರೈತ ಸಂಘಟನೆಗಳ ಮುಖಂಡರು ಹಾಗೂ ರೈತರ ಮನವೊಲಿಸಬೇಕು ಎಂದು ಸಭೆ ಮನವಿ ಮಾಡಿತು.
ತಮಿಳುನಾಡಿಗೆ ಕರ್ನಾಟಕದಿಂದ ಹರಿಸಬೇಕಾದ ನೀರಿನ ಪ್ರಮಾಣವೆಷ್ಟು?
ಸರ್ಕಾರ ಹವಾಮಾನ ಬದಲಾವಣೆ ಕುರಿತು ತಜ್ಞರ ಸಮಿತಿಯನ್ನು ತುರ್ತಾಗಿ ನೇಮಿಸಬೇಕು. ಇವರ ಸಲಹೆ ಪಡೆದು ವಿಧಾನ ಮಂಡಲದ ಅಧಿವೇಶನದಲ್ಲಿ ಚರ್ಚಿಸಬೇಕು. ಜಲ ಸಂರಕ್ಷಣೆ ಕುರಿತು ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಸಮರೋಪಾದಿಯಲ್ಲಿ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು. ಸರ್ಕಾರ ಜನರಿಗೆ ಆಹಾರ ಭದ್ರತೆಯ ಜತೆಗೆ ನೀರಿನ ಭದ್ರತೆಯನ್ನೂ ನೀಡಬೇಕು. ಇದಕ್ಕಾಗಿ ಹೊಸ ಹೊಸ ದೊಡ್ಡ ಯೋಜನೆಗಳನ್ನು ಕೈಗೊಳ್ಳದೇ ಲಭ್ಯ ಇರುವ ನೀರನ್ನು ವೈಜ್ಞಾನಿಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಎಲ್ಲರೂ ಒತ್ತಾಯಿಸಿದರು.