ಬಿ.ಶರತ್ ವರ್ಗಾವಣೆ; ಸಿಎಟಿ ಮುಂದಿನ ವಿಚಾರಣೆ ಅ.23ಕ್ಕೆ
ಮೈಸೂರು, ಅಕ್ಟೋಬರ್ 16: ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ಬಿ.ಶರತ್ ಅವರ ವರ್ಗಾವಣೆ ಕುರಿತ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡ ಸಿಎಟಿ, ಮುಂದಿನ ವಿಚಾರಣೆಯನ್ನು ಅಕ್ಟೋಬರ್ 23ಕ್ಕೆ ನಿಗದಿಗೊಳಿಸಿದೆ. ಈ ಮೂಲಕ ಇನ್ನಷ್ಟು ದಿನಗಳ ಕಾಲ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಮೈಸೂರು ಡಿಸಿ ಸ್ಥಾನ ಅಭಾದಿತವಾಗಿದೆ.
ವಿಚಾರಣೆ ಕುರಿತಂತೆ ಇಂದು ಆನ್ ಲೈನ್ ನಲ್ಲೇ ವಾದ ಪ್ರತಿವಾದವನ್ನು ಸಿಎಟಿ ಆಲಿಸಿತು.
ಶರತ್ ವರ್ಗಾವಣೆ ವಿಚಾರ; ಮತ್ತೆ ವಿಚಾರಣೆ ಮುಂದೂಡಿದ ಸಿಎಟಿ
ಶರತ್ ಅವರನ್ನು ನಿಯಮಬಾಹಿರವಾಗಿ ವರ್ಗಾವಣೆ ಮಾಡಲಾಗಿದೆ. ಎರಡು ವರ್ಷಗಳ ಕಾಲ ಕಡ್ಡಾಯ ಸೇವೆಯಲ್ಲಿ ಇರಬೇಕೆಂಬ ಸರ್ಕಾರದ ನಿಯಮವನ್ನು ಸರ್ಕಾರವೇ ಗಾಳಿಗೆ ತೂರಿದೆ ಎಂದು ಶರತ್ ಪರ ವಕೀಲ ಎ.ಎಸ್.ಪೊನ್ನಣ್ಣ ವಾದ ಮಂಡಿಸಿದ್ದರು. ಆದರೆ ಪ್ರತಿವಾದ ಮಂಡಿಸಲು ಎಜಿ ಕಾಲಾವಕಾಶ ಕೇಳಿದ ಕಾರಣ ಸಿಎಟಿ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 23ಕ್ಕೆ ಮುಂದೂಡಿತು.
ತಮ್ಮನ್ನು ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ದಿಢೀರ್ ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿ ನಿರ್ಗಮಿತ ಡಿಸಿ ಶರತ್ ಅವರು ಅಕ್ಟೋಬರ್ 1ರಂದು ಸಿಎಟಿ ಮೊರೆ ಹೋಗಿದ್ದರು. ಅರ್ಜಿ ಸಂಬಂಧ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಅಕ್ಟೋಬರ್ 7ಕ್ಕೆ ನಡೆಸುವುದಾಗಿ ಸಿಎಟಿ ತಿಳಿಸಿತ್ತು. ನಂತರ ವಿಚಾರಣೆಯನ್ನು ಅಕ್ಟೋಬರ್ 14ನೇ ತಾರೀಕಿಗೆ ಮುಂದೂಡಿತ್ತು. ಕೆಲವು ತಾಂತ್ರಿಕ ಕಾರಣಗಳಿಂದ ಅಂದು ವಿಚಾರಣೆ ನಡೆಸಲಾಗದೇ, ಇಂದು ವಿಚಾರಣೆಯನ್ನು ಕೈಗೆತ್ತಿಕೊಂಡಿತು. ಇದೀಗ ಮುಂದಿನ ವಿಚಾರಣೆಯು ಅಕ್ಟೋಬರ್ 23ಕ್ಕೆ ನಡೆಯಲಿದೆ.