ತಲಕಾಡಿನಲ್ಲಿ ಪ್ರಿ ವೆಡ್ಡಿಂಗ್ ಫೋಟೊಶೂಟ್ ವೇಳೆ ಜೋಡಿ ಸಾವು; ಆರು ಮಂದಿ ವಿರುದ್ಧ ಮೊಕದ್ದಮೆ
ಮೈಸೂರು, ನವೆಂಬರ್ 11: ತಲಕಾಡಿನಲ್ಲಿ ಕಾವೇರಿ ನದಿ ಮಧ್ಯೆ ಪ್ರಿ ವೆಡ್ಡಿಂಗ್ ಫೋಟೊಶೂಟ್ ಮಾಡಿಸಿಕೊಳ್ಳುವ ಸಂದರ್ಭ ನದಿಯಲ್ಲಿ ಮುಳುಗಿ ನವಜೋಡಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿದೆ.
ಫೋಟೊಶೂಟ್ ಗೆ ತೆಪ್ಪ ನೀಡಿದ ವ್ಯಕ್ತಿ, ಫೋಟೊಗ್ರಾಫರ್ ಸೇರಿದಂತೆ ಆರು ಜನರ ಮೇಲೆ ತಲಕಾಡು ಪೊಲೀಸ್ ಠಾಣೆಯಲ್ಲಿ ಐಸಿಪಿ ಸೆಕ್ಷನ್ 304ರ ಅಡಿ (ನಿರ್ಲಕ್ಷ್ಯದಿಂದ ಮರಣವನ್ನುಂಟು ಮಾಡುವುದು) ಪ್ರಕರಣ ದಾಖಲಾಗಿದೆ. ಫೋಟೊಗ್ರಾಫರ್ ನಿಖಿಲ್, ತೆಪ್ಪವನ್ನು ನೀಡಿದ ಕಟ್ಟೆಪುರ ನಿವಾಸಿ ಮೂಗಪ್ಪ ಸೇರಿದಂತೆ ಆರು ಜನರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಉನ್ನತಾಧಿಕಾರಿ ಸಿ.ಬಿ. ರಿಷ್ಯಂತ್ ಮಾಹಿತಿ ನೀಡಿದ್ದಾರೆ.
ತಲಕಾಡಿನಲ್ಲಿ ಪ್ರಿ ವೆಡ್ಡಿಂಗ್ ಫೋಟೊಶೂಟ್ ಮಾಡಿಸಿಕೊಳ್ಳುವಾಗ ಜೋಡಿ ಸಾವು
ಈ ತೆಪ್ಪವನ್ನು ಮೂಗಪ್ಪ ಅವರು ತಮ್ಮ ಸ್ವಂತ ಉಪಯೋಗಕ್ಕೆ ಬಳಕೆ ಮಾಡುತ್ತಿದ್ದರು. ಕಟ್ಟೆಪುರ-ಮುಡುಕುತೊರೆ ನಡುವೆ ಹರಿಯುವ ಕಾವೇರಿ ನದಿಯನ್ನು ದಾಟಲು ಮೂಗಪ್ಪ ಅವರು ತೆಪ್ಪ ಬಳಕೆ ಮಾಡುತ್ತಿದ್ದರು. ಪ್ರಿ ವೆಡ್ಡಿಂಗ್ ಶೂಟ್ಗೆ ತೆಪ್ಪವನ್ನು ನೀಡುವಂತೆ ನವಜೋಡಿ ಹಾಗೂ ಅವರ ಜತೆಗಿದ್ದವರು ಮನವಿ ಮಾಡಿದ ಹಿನ್ನೆಲೆಯಲ್ಲಿ ಮೂಗಪ್ಪ ಅವರು ತೆಪ್ಪ ನೀಡಿದ್ದಾರೆ ಎಂದು ವಿವರಿಸಿದರು.
ನದಿ ಪಾತ್ರದಲ್ಲಿ ಅಸುರಕ್ಷತೆಯಿಂದ ತೆಪ್ಪ, ದೋಣಿ, ಬೋಟ್ ನಡೆಸುವವರ ವಿರುದ್ಧ ಕ್ರಮ ವಹಿಸುವಂತೆ ನೀರಾವರಿ ಇಲಾಖೆಗೆ ಪತ್ರ ಬರೆಯಲಾಗುವುದು. ತೆಪ್ಪ, ದೋಣಿ, ಬೋಟ್ನಲ್ಲಿ ಸಾಗುವವರು ಕಡ್ಡಾಯವಾಗಿ ಲೈಫ್ ಜಾಕೆಟ್ ಬಳಕೆ ಮಾಡಬೇಕು. ಆದರೆಮುಡುಕುತೊರೆಯಲ್ಲಿ ನವ ಜೋಡಿ ಲೈಫ್ ಜಾಕೆಟ್ ಬಳಕೆ ಮಾಡದ ಹಿನ್ನೆಲೆಯಲ್ಲಿ ಪ್ರಾಣ ಕಳೆದುಕೊಂಡರು. ನದಿ ಪಾತ್ರದಲ್ಲಿ ತೆಪ್ಪ, ದೋಣಿ, ಬೋಟ್ಗಳನ್ನು ನಡೆಸುವವರಿಗೆ ಈ ಬಗ್ಗೆ ನೀರಾವರಿ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು ತಿಳಿಸಲಾಗುವುದು ಎಂದರು.
ಇದೇ ನವೆಂಬರ್ 9ರಂದು ತಲಕಾಡಿನ ಕಾವೇರಿ ನದಿ ಮಧ್ಯೆ ಪ್ರಿವೆಡ್ಡಿಂಗ್ ಫೋಟೊಶೂಟ್ ಮಾಡಿಸಿಕೊಳ್ಳುವ ಸಂದರ್ಭ ತೆಪ್ಪ ಮಗುಚಿಬಿದ್ದು ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಗಳಾದ ಚಂದ್ರು (28) ಹಾಗೂ ಶಶಿಕಲಾ(20) ಮೃತಪಟ್ಟಿದ್ದರು. ಇವರಿಬ್ಬರ ಮದುವೆಯು ಇದೇ ನವೆಂಬರ್ 22ರಂದು ನಿಶ್ಚಯವಾಗಿತ್ತು.