ಮೈಸೂರಿನಲ್ಲಿ ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣ್ ಜನ್ಮಶತಮಾನೋತ್ಸವ
ಮೈಸೂರು, ಅಕ್ಟೋಬರ್ 31: "ಸಾವಿರ ಪದಗಳಲ್ಲಿ ಹೇಳಬಹುದಾದ್ದನ್ನು ಕೇವಲ ಒಂದು ವ್ಯಂಗ್ಯ ಚಿತ್ರದ ಮೂಲಕ ಜನಸಾಮಾನ್ಯನಿಗೂ ತಲುಪಿಸಿದವರು ಖ್ಯಾತ ವ್ಯಂಗ್ಯ ಚಿತ್ರಕಾರ ಆರ್ ಕೆ.ಲಕ್ಷ್ಮಣ್" ಎಂದರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ.
ಶನಿವಾರ ರಾಮಾನುಜ ರಸ್ತೆಯಲ್ಲಿರುವ ಮೈಸೂರು ಆರ್ಟ್ ಗ್ಯಾಲರಿಯಲ್ಲಿ ಕರ್ನಾಟಕ ವ್ಯಂಗ್ಯ ಚಿತ್ರಕಾರರ ಸಂಘ, ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ವಿಶ್ವವಿಖ್ಯಾತ ವ್ಯಂಗ್ಯಚಿತ್ರಕಾರ ದಿ.ಆರ್.ಕೆ.ಲಕ್ಷ್ಮಣ್ ಅವರ ಜನ್ಮಶತಮಾನೋತ್ಸವ ಆಚರಣೆ ಹಾಗೂ ಖ್ಯಾಯ ವ್ಯಂಗ್ಯ ಚಿತ್ರಕಾರ ಹಾಗೂ ಫುಲ್ ಬ್ರೈಟರ್ ಎಂ.ವಿ.ನಾಗೇಂದ್ರಬಾಬು ಅವರ ಆರ್.ಕೆ.ಲಕ್ಷ್ಮಣ್ ಅವರೊಂದಿಗಿನ ಒಡನಾಟದ ಭಾವಚಿತ್ರ ಹಾಗೂ ಲೇಖನಗಳ ಪ್ರದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದರು.
ಆರ್.ಕೆ. ಲಕ್ಷ್ಮಣರ ವ್ಯಂಗ್ಯಚಿತ್ರ ಕೌಶಲ್ಯ ಅರಳಿದ್ದು ಮೈಸೂರಲ್ಲಿ
ಪದ್ಮಭೂಷಣ, ಪದ್ಮವಿಭೂಷಣ ಎರಡೂ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದ ಮಹಾನ್ ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣ್. ಭಾರತದ ಆಡಳಿತವನ್ನು ಪ್ರಶ್ನೆ ಮಾಡುತ್ತ ಹೋಗುವ ಇಡೀ ನಲ್ವತ್ತು ವರ್ಷಗಳ ಜರ್ನಿ ಇದೆಯಲ್ಲ ಅದೇ ವಿಶೇಷ. ಇಡೀ ಭಾರತದ ಪತ್ರಿಕಾ ಲೋಕಕ್ಕೆ ಹೊಸ ಹುರುಪು ನೀಡಿದವರು ಎಂದು ಬಣ್ಣಿಸಿದರು.
"ಆರ್ ಕೆ.ಲಕ್ಷ್ಮಣ್. ಅವರ ವ್ಯಂಗ್ಯಚಿತ್ರದಲ್ಲಿ ತೀಕ್ಷ್ಣತೆ ಪ್ರಖರವಾಗಿರುತ್ತಿತ್ತು. ಒಂದು ಲೇಖನದಲ್ಲಿ ಹೇಳಬಹುದಾದ್ದನ್ನು ಕೇವಲ ಒಂದೇ ಒಂದು ವ್ಯಂಗ್ಯ ಚಿತ್ರದಲ್ಲಿ ಹೇಗೆ ಪ್ರಭಾವಶಾಲಿಯಾಗಿ ಜನರಿಗೆ ದಾಟಿಸುತ್ತಿದ್ದರು ಎಂಬುದೇ ಅವರ ವಿಶೇಷತೆ. ಆ ಕಲೆಯನ್ನು ವರ್ಣಿಸಲು ಸಾಧ್ಯವಿಲ್ಲ" ಎಂದರು.