ಮೃಗಾಲಯಕ್ಕೆ ಗೋಮಾಂಸ ಬದಲಿಗೆ ಕೋಳಿ ಮಾಂಸ ಸರಬರಾಜು: ಲವಲವಿಕೆ ಕಳಕೊಂಡ ಪ್ರಾಣಿಗಳು
ಮೈಸೂರು, ಫೆಬ್ರವರಿ 18: ಮಾಂಸಾಹಾರಿ ಪ್ರಾಣಿಗಳು ಅತ್ಯಂತ ಸಕ್ರಿಯ ಮತ್ತು ಚಟುವಟಿಕೆಯಿಂದ ಇರುತ್ತವೆ. ಏಕೆಂದರೆ ಅವು ಆಹಾರವನ್ನು ಬೇಟೆಯಾಡಿಯೇ ಸಂಪಾದಿಸಬೇಕಿರುವುದರಿಂದ ಇವುಗಳಿಗೆ ಅದು ಅನಿವಾರ್ಯ ಕೂಡ.
ಆದರೆ ಮೈಸೂರು ಮೃಗಾಲಯದಲ್ಲಿ ಮಾಂಸಾಹಾರಿ ಪ್ರಾಣಿಗಳಿಗೆ ಹೊಸದಾಗಿ ಕೋಳಿ ಮಾಂಸ ಸರಬರಾಜು ಮಾಡುತ್ತಿರುವುದರಿಂದ, ಅವು ಈಗ ಮೊದಲಿದ್ದ ಲವಲವಿಕೆಯನ್ನೆ ಕಳೆದುಕೊಂಡಿವೆ ಎಂದು ತಿಳಿದು ಬಂದಿದೆ.
ದೇಸಿ ತಳಿಗಳ ಹಸು ಸಂರಕ್ಷಣೆಗೆ ಯದುವೀರ್ ಸಹಕಾರ
ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧೀನದಲ್ಲಿರುವ ಎಲ್ಲಾ ಪ್ರಾಣಿ ಸಂಗ್ರಹಾಲಯಗಳು, ಮೈಸೂರು ಮೃಗಾಲಯ ಸೇರಿದಂತೆ ಎಲ್ಲೆಡೆಯೂ, ಜನವರಿ ಅಂತ್ಯದಿಂದ ಗೋಮಾಂಸದ ಬದಲಿಗೆ ಕೋಳಿ ಮಾಂಸವನ್ನು ನೀಡಲಾಗುತ್ತಿದೆ. ರಾಜ್ಯ ಸರ್ಕಾರವು ಗೋಮಾಂಸ ನಿಷೇಧವನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದಿರುವ ಕಾರಣ ಗೋಮಾಂಸದ ಬದಲಿಗೆ ಕೋಳಿ ಮಾಂಸವನ್ನು ನೀಡಲಾಗುತ್ತಿದೆ.
ದಿನಕ್ಕೆ 350 ಕೆಜಿ ಗೋಮಾಂಸ
ಕರ್ನಾಟಕವು ದೇಶದಲ್ಲಿಯೇ ಅತಿ ಹೆಚ್ಚು ಪ್ರಾಣಿ ಸಂಗ್ರಹಾಲಯಗಳನ್ನು ಹೊಂದಿದೆ. ಮೈಸೂರು ಮೃಗಾಲಯದಲ್ಲಿ ಚಿರತೆಗಳು, ಬಿಳಿ ಹುಲಿಗಳು, ಜಾಗ್ವಾರ್ ಗಳು ಮತ್ತು ಒಂದು ಡಜನ್ ಗೂ ಹೆಚ್ಚು ರಾಯಲ್ ಬಂಗಾಳ ಹುಲಿಗಳು, ಎರಡು ಡಜನ್ ಚಿರತೆಗಳು ಮತ್ತು ತೋಳಗಳು ಮತ್ತು ನರಿಗಳು ಇವೆ. ಈ ಹಿಂದೆ ಮೃಗಾಲಯವು ಮಾಂಸಾಹಾರಿ ಪ್ರಾಣಿಗಳಿಗೆ ಆಹಾರಕ್ಕಾಗಿ ದಿನಕ್ಕೆ 350 ಕೆಜಿ ಗೋಮಾಂಸವನ್ನು ಖರೀದಿಸುತ್ತಿತ್ತು. ಕೋಳಿ ಮಾಂಸಕ್ಕೆ ಬದಲಾದ ನಂತರ ಹುಲಿಗಳು ವಿಶ್ರಾಂತಿ ಪಡೆಯುವ ಅವಧಿಯನ್ನು ಹೆಚ್ಚಿಸಿಕೊಂಡಿವೆ ಎಂದು ಮೃಗಾಲಯದ ಮೂಲಗಳು ತಿಳಿಸಿವೆ.
ಹೊಸ ಗೋವಧೆ ನಿಷೇಧ ಕಾನೂನು
ಅಧಿಕಾರಿಗಳು ಗೋಮಾಂಸದ ಬದಲಿಗೆ ಕುರಿ ಮಾಂಸವನ್ನು ನೀಡಲು ಪ್ರಯತ್ನಿಸದರೂ, ಅವು ತಿನ್ನಲಿಲ್ಲ ಎನ್ನಲಾಗಿದೆ. ನಂತರ ಬ್ಯಾಯ್ಲರ್ ಚಿಕನ್ ನ್ನು ನೀಡಲು ಆರಂಭಿಸಲಾಗಿದೆ. ಹೊಸ ಗೋವಧೆ ನಿಷೇಧ ಕಾನೂನಿನ ಪ್ರಕಾರ, ಎಮ್ಮೆ ಮಾಂಸವನ್ನು ಅನುಮತಿಸಲಾಗಿದೆ. ಆದರೆ ಇದು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿಲ್ಲ. ಅಲ್ಲದೆ ನಾಟಿ ಕೋಳಿಯ ಬೆಲೆ ಹೆಚ್ಚಿರುವುದರಿಂದ, ಪ್ರಾಣಿ ಸಂಗ್ರಹಾಲಯಗಳು ಬ್ರಾಯ್ಲರ್ ಕೋಳಿ ಮಾಂಸದ ಮೇಲೆ ಹೆಚ್ಚು ಅವಲಂಬಿತವಾಗಿವೆ.
ಮೂಳೆಗಳನ್ನು ತಿನ್ನದೆ ಉಳಿಸುತ್ತಿದ್ದವು
ರಣಹದ್ದುಗಳಂತಹ ಪಕ್ಷಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಮಾಂಸಾಹಾರಿ ಪ್ರಾಣಿಗಳು ಕಡಿಮೆ ಕ್ರಿಯಾಶೀಲವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ವಲ್ಪ ಮಟ್ಟಿಗೆ, ಚಿರತೆಗಳು ನಿಷ್ಕ್ರಿಯವಾಗಿಲ್ಲ. ಆದರೆ ಹುಲಿಗಳು ಮತ್ತು ಹೆಚ್ಚು ಓಡಾಡುವ ನರಿಗಳು ಮತ್ತು ಹೈನಾಗಳು ಸಹ ಕಡಿಮೆ ಚಟುವಟಿಕೆಯನ್ನು ತೋರಿಸುತ್ತಿವೆ ಎಂದು ಮೂಲಗಳು ತಿಳಿಸಿವೆ. ಹುಲಿಗಳಿಗೆ ಗೋಮಾಂಸವನ್ನು ನೀಡುತ್ತಿದ್ದಾಗ 14 ಕೆಜಿ ಮಾಂಸದಲ್ಲಿ ಮೂರು ಕೆಜಿ ಮೂಳೆಗಳನ್ನು ತಿನ್ನದೆ ಉಳಿಸುತ್ತಿದ್ದವು. ಆದರೆ ಈಗ 8 ಕೆಜಿ ಕೋಳಿ ಮಾಂಸ ನೀಡಿದಾಗ, ಅವರು 2 ಕೆಜಿ ಮೂಳೆಗಳನ್ನು ಬಿಡುತ್ತಿವೆ. ಮಾಂಸಾಹಾರಿ ಪ್ರಾಣಿಗಳ ಮೇಲೆ ಕೋಳಿ ಮಾಂಸದ ದೀರ್ಘಕಾಲದ ಆಹಾರದ ಪರಿಣಾಮದ ಬಗ್ಗೆ ಮೃಗಾಲಯದ ಸಿಬ್ಬಂದಿ ಕಳವಳ ವ್ಯಕ್ತಪಡಿಸುತ್ತಾರೆ.
ಸಂಗ್ರಹಾಲಯಗಳಲ್ಲಿ ಆಹಾರದ ಕೊರತೆ
ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಅವರು ಮಾತನಾಡಿ, ಪ್ರಾಣಿ ಸಂಗ್ರಹಾಲಯಗಳಲ್ಲಿ ಗೋಮಾಂಸ ಸರಬರಾಜು ಮಾಡಲು ರಾಜ್ಯ ಸರ್ಕಾರದಿಂದ ಕಾನೂನಿನ ವಿನಾಯ್ತಿಗೆ ಕಾಯಲಾಗುತ್ತಿದೆ ಎಂದು ಹೇಳಿದರು. ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಅವರು ಈ ಕುರಿತು ಯಾವುದೇ ದೂರು ಬಂದಿಲ್ಲ, ಪ್ರಾಣಿ ಸಂಗ್ರಹಾಲಯಗಳಲ್ಲಿ ಆಹಾರದ ಕೊರತೆ ಕುರಿತು ಅಧಿಕಾರಿಗಳು ವಿವರ ನೀಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದರು.