ದೇವಸ್ಥಾನ, ಮತ ಎಣಿಕೆ ಕೇಂದ್ರಗಳತ್ತ ಅಭ್ಯರ್ಥಿಗಳ ಚಿತ್ತ
ಮೈಸೂರು, ಮೇ 23: ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಮತ ಎಣಿಕೆ ಆರಂಭವಾಗಿದ್ದು, ಫಲಿತಾಂಶ ಹೊರಬೀಳು ಮುನ್ನ ಅಭ್ಯರ್ಥಿಗಳು ದೇವಸ್ಥಾನ ಹಾಗೂ ಮತ ಎಣಿಕೆ ಕೇಂದ್ರದತ್ತ ಮುಖ ಮಾಡಿದ್ದಾರೆ.
ಗೆಲುವು, ಸೋಲಿನ ಲೆಕ್ಕಾಚಾರದ ನಿರೀಕ್ಷೆಯ ಫಲಿತಾಂಶ ಇನ್ನೇನು ಹೊರಬೀಳಲಿರುವ ಈ ಸಮಯದಲ್ಲಿ ಅಭ್ಯರ್ಥಿಗಳು ಗೆಲುವಿನ ಭರವಸೆಯೊಂದಿಗೆ ಮುನ್ನಡೆದಿದ್ದಾರೆ.
ಸಾ ರಾ ಮಹೇಶ್ ವಿಶ್ವಾಸ
ನಾಡ ಅಧಿದೇವತೆ ಚಾಮುಂಡಿ ತಾಯಿಯ ದರ್ಶನ ಪಡೆದ ಸಂಸದ ಪ್ರತಾಪ್ ಸಿಂಹ ಹಾಗೂ ಸಚಿವ ಸಾ ರಾ ಮಹೇಶ್ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಸಾ ರಾ ಮಹೇಶ್, ಈ ಬಾರಿ ನಿಖಿಲ್ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಮೈಸೂರಿನ ಪಡುವರಹಳ್ಳಿಯಲ್ಲಿರುವ ಮಹಾರಾಣಿ ವಾಣಿಜ್ಯ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಇದೇ ವೇಳೆ ಭೇಟಿ ನೀಡಿದರು. ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿ, ಕಳೆದ ಬಾರಿ ತಾಯಿ ಚಾಮುಂಡೇಶ್ವರಿ ತನ್ನ ವಾಹನ ಪ್ರತಾಪ್ ಸಿಂಹನನ್ನು ಕೈ ಬಿಟ್ಟಿರಲಿಲ್ಲ. ಅದೇ ರೀತಿ ಈ ಬಾರಿಯೂ ಕೈ ಬಿಡಲ್ಲ ಅನ್ನೋ ಭರವಸೆ ನನಗಿದೆ ಎಂದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.
ಗೆಲ್ಲುವ ನಿರೀಕ್ಷೆಯಲ್ಲಿ ವಿಜಯ ಶಂಕರ್
ಮೈತ್ರಿ ಅಭ್ಯರ್ಥಿ ವಿಜಯ್ ಶಂಕರ್ ಸಹ ಮಾತನಾಡಿ ಇಂದು ಲೋಕಸಭಾ ಚುನಾವಣೆ ಫಲಿತಾಂಶ ಹೊರಬೀಳಲಿದೆ. ನನಗೆ ಯಾವುದೇ ರೀತಿ ಭಯವಿಲ್ಲ. ನನಗೆ ಗೆಲ್ಲುವ ವಿಶ್ವಾಸವಿದೆ. ನನ್ನನ್ನು ಜನ ಕೈ ಬಿಡಲ್ಲ ಅನ್ನೋ ನಂಬಿಕೆ ಇದೆ. ನನ್ನದಲ್ಲದ ತಪ್ಪಿಗೆ ನಾನು 2004-2009ರಲ್ಲಿ ಸೋತಿದ್ದೇನೆ. ಈ ಚುನಾವಣೆ ನನಗೆ ರಾಜಕೀಯ ಜೀವನದ ಮರುಹುಟ್ಟು. ಈ ಬಾರಿ ಚುನಾವಣೆಯಲ್ಲಿ ನಾನೇ ಗೆಲುವನ್ನ ಸಾಧಿಸುತ್ತೇನೆ ಎಂದರು.
ಕರ್ನಾಟಕ ಲೋಕಸಭೆ ಚುನಾವಣಾ ಫಲಿತಾಂಶ LIVE:ಮಂಡ್ಯದಲ್ಲಿ ಸುಮಲತಾ ಅಂಬರೀಶ್ಗೆ ಮುನ್ನಡೆ
ಬಿಗಿ ಪೊಲೀಸ್ ಬಂದೋಬಸ್ತ್
ಮೈಸೂರಿನ ಪಡುವರಳ್ಳಿಯಲ್ಲಿರುವ ಮಹಾರಾಣಿ ಕಾಲೇಜಿನಲ್ಲಿ ಮತ ಎಣಿಕೆ ನಡೆಯುತ್ತಿದೆ. ಮತ ಎಣಿಕೆ ಸುತ್ತ ಮುತ್ತ ಪೋಲಿಸ್ ಸರ್ಪಗಾವಲು ಹಾಕಲಾಗಿದೆ. ಬಂದೋಬಸ್ತ್ ಗಾಗಿ ನಗರದ್ಯಾಂತ 1930 ಮಂದಿ ಪೋಲಿಸರು, ಮತ ಎಣಿಕೆಯ ಸುತ್ತಮುತ್ತ 1050 ಪೋಲಿಸರನ್ನು ನೇಮಿಸಲಾಗಿದೆ.
4 ಮಂದಿ ಡಿಸಿಪಿ,6 ಎಸಿಪಿ, 22 ಇನ್ಸ್ ಪೆಕ್ಟರ್, 23 ಪಿಎಸ್ ಐ, 103, ಎ ಎಸ್ ಐ-,582 ಪಿಸಿ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಮತ ಎಣಿಕೆ ಕೇಂದ್ರದ ಸುತ್ತಮುತ್ತ ಅಶ್ವರೋಹಿದಳ, ಶ್ವಾನದಳ ಸೇರಿದಂತೆ ಬಂದೋಬಸ್ತ್ ಮಾಡಲಾಗಿದೆ.
ಪ್ರತಾಪ್ ಸಿಂಹ ತಪಾಸಣೆ
ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ ಎಣಿಕೆ ಕೇಂದ್ರಕ್ಕೆ ಆಗಮಿಸುವ ವೇಳೆ ಪ್ರತಾಪ್ ಸಿಂಹ ರವರನ್ನು ತಪಾಸಣೆ ಮಾಡಿ ಕರ್ತವ್ಯ ಮೆರೆದಿದ್ದಾರೆ. ಅಭ್ಯರ್ಥಿ ಪ್ರತಾಪ್ ಸಿಂಹರವರ ಗುರುತಿನ ಚೀಟಿ ಪರೀಕ್ಷಿಸಿ ನಂತರ ಪೋಲಿಸ್ ಸಿಬ್ಬಂದಿ ಒಳ ಬಿಟ್ಟಿದ್ದಾರೆ.
ಕಾನ್ಸ್ ಟೆಬಲ್ ಸಿಎಸ್ ಮಂಜುನಾಥರಿಂದ ತಪಾಸಣೆ ನಡೆಸಲಾಯಿತು. ನಂತರ ಪ್ರತಾಪ್ ಸಿಂಹರ ಗನ್ ಮೆನ್ ಗುರುತಿನ ಚೀಟಿ ನೀಡದ ಬಳಿಕ ಮತ ಎಣಿಕೆ ಕೇಂದ್ರಕ್ಕೆ ಅನುಮತಿ ನೀಡಿದರು.