ಎಸ್.ಎಸ್.ಎಲ್.ಸಿ. ಪರೀಕ್ಷೆ ರದ್ದು ಮಾಡಿ; ಎಚ್. ವಿಶ್ವನಾಥ್ ಒತ್ತಾಯ
ಮೈಸೂರು, ಜುಲೈ 04; "ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸಲು ಮುಂದಾಗಿರುವ ಸರ್ಕಾರದ ತೀರ್ಮಾನದಿಂದ ಮಕ್ಕಳ ಮೇಲೆ ಒತ್ತಡ ಎದುರಾಗಿದ್ದು, ಮಕ್ಕಳ ಆರೋಗ್ಯ, ವಾತಾವರಣ ಹಾಗೂ ಸಂರಕ್ಷಣೆಯ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಪರೀಕ್ಷೆ ರದ್ದು ಮಾಡಬೇಕೆಂದು" ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ಹೆಚ್. ವಿಶ್ವನಾಥ್ ಆಗ್ರಹಿಸಿದರು.
ಭಾನುವಾರ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, "ರಾಜ್ಯ ಸರ್ಕಾರ ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಆರೋಗ್ಯ, ಸುರಕ್ಷೆಯ ನಂತರ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಬಹಳಷ್ಟು ರಾಜ್ಯದಲ್ಲಿ ಪರೀಕ್ಷೆ ನಡೆದಿಲ್ಲ. ಚಿಕ್ಕ ರಾಜ್ಯಗಳಲ್ಲೂ ಪರೀಕ್ಷೆ ನಡೆಸುತ್ತಿಲ್ಲ" ಎಂದರು.
"ಎಲ್ಲಕ್ಕಿಂತ ಮುಖ್ಯವಾಗಿ 10ನೇ ತರಗತಿ ಮಕ್ಕಳಿಗೆ ವ್ಯಾಕ್ಸಿನ್ ನೀಡಿಲ್ಲ. ರಾಜ್ಯದಲ್ಲಿ ಎಂಟೂವರೆ ಲಕ್ಷ ಮಕ್ಕಳಿದ್ದು, ಮೈಸೂರಿನಲ್ಲಿ 39 ಸಾವಿರ ಮಕ್ಕಳಿದ್ದಾರೆ. ಏರ್ಪೋರ್ಟ್ಗೆ ಹೋಗಬೇಕು ಅಂದರೆ ನೆಗಟಿವ್ ಸರ್ಟಿಫಿಕೇಟ್ ಕೊಡಬೇಕು. ಆದರೆ ಮಕ್ಕಳಿಗೆ ಯಾವ, ಸರ್ಟಿಫಿಕೇಟ್ ಕೊಡಲು ಆಗುತ್ತೆ?" ಎಂದು ಪ್ರಶ್ನಿಸಿದರು.
"ರಾಜ್ಯದಲ್ಲಿ ಡೆಲ್ಟಾ ವೈರಸ್ ಇದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಒಪ್ಪಿಕೊಂಡಿದ್ದಾರೆ. ಈ ಡೆಲ್ಟಾ ಸೋಂಕು ಮಕ್ಕಳನ್ನೇ ಟಾರ್ಗೆಟ್ ಮಾಡುತ್ತಿದೆ ಅಂತಾ ಜಗತ್ತಿನ ದೊಡ್ಡ ವೈದ್ಯರೆಲ್ಲ ಹೇಳುತ್ತಿದ್ದಾರೆ. ನಮ್ಮದು ದೊಡ್ಡ ರಾಜ್ಯ. ಕೊರೊನಾ ಕಾರಣದಿಂದ ಬಹುತೇಕ ಮಕ್ಕಳು ಶಾಲೆ ಮುಖವನ್ನೇ ನೋಡಿಲ್ಲ. ಹೀಗಿರುವಾಗ ಮಕ್ಕಳು ಪರೀಕ್ಷೆಯನ್ನು ಹೇಗೆ ಬರೆಯಬೇಕು?" ಎಂದು ಪ್ರಶ್ನಿಸಿದರು.
"ಪರೀಕ್ಷೆ ನಡೆಸಬೇಕೆಂಬ ಸರ್ಕಾರದ ನಿರ್ಧಾರದಿಂದ ಮಕ್ಕಳಲ್ಲಿ ಮಾನಸಿಕ ಒತ್ತಡ ಜಾಸ್ತಿ ಆಗುತ್ತಿದೆ. ಸಣ್ಣ ಸಣ್ಣ ವಿಷಯಕ್ಕೆ ಕೆರೆಗೆ ಬೀಳುವುದು, ಆತ್ಮಹತ್ಯೆ ಮಾಡಿಕೊಳ್ಳುವ ಕೆಲಸ ಮಾಡುವ ಮನಸ್ಥಿತಿ ಮಕ್ಕಳಿಗೆ ಪರೀಕ್ಷೆ ನಡೆಸುವುದು ಸೂಕ್ತವಲ್ಲ" ಎಂದು ಹೇಳಿದರು.
ಪಕ್ಷ ಸಂಘಟನೆಯಲ್ಲಿ ಚತುರತೆ; ಕಾಂಗ್ರೆಸ್ ಪಕ್ಷಕ್ಕೆ ಮರಳುವ ಶಾಸಕರಿಗೆ ಡಿ. ಕೆ. ಶಿವಕುಮಾರ್ ಆಹ್ವಾನ ನೀಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಶ್ವಾನಾಥ್, "ಡಿ. ಕೆ. ಶಿವಕುಮಾರ್ ಒಬ್ಬ ಕಾಂಗ್ರೆಸ್ ಪಕ್ಷದ ಸಂಘಟನಾ ಚತುರ. ಪಕ್ಷವನ್ನು ಸಂಘಟನೆ ಮಾಡುವುದನ್ನು ಕರಗತ ಮಾಡಿಕೊಂಡಿರುವ ನಾಯಕ. ವೈಯಕ್ತಿಕವಾಗಿ ಆತನ ಸೌಜನ್ಯತೆಯನ್ನ ನಾನು ಮೆಚ್ಚುತ್ತೇನೆ. ಮಾತೃ ಸಂಸ್ಥೆಗೆ ಮತ್ತೆ ಬನ್ನಿ ಎಂದು ಕರೆಯುವುದು ಡಿಕೆಶಿ ಅವರ ಸೌಜನ್ಯಯುತ ನಡೆ" ಎಂದರು.