ಸಿದ್ದರಾಮಯ್ಯರಿಗೆ ಭ್ರಮನಿರಸನವಾದ ಉಪಚುನಾವಣೆ
ಮೈಸೂರು, ಡಿಸೆಂಬರ್ 10: ಉಪಚುನಾವಣೆಯ ಫಲಿತಾಂಶದ ಬಳಿಕ ರಾಜ್ಯ ರಾಜಕೀಯದಲ್ಲಿ ಒಂದಷ್ಟು ಬದಲಾವಣೆಯಾಗಬಹುದೆಂದು ಕಾದು ಕುಳಿತ ವಿಪಕ್ಷ ನಾಯಕರಿಗೆ ಭ್ರಮನಿರಸನವಾಗಿದೆ.
ಪಕ್ಕದ ಮಹಾರಾಷ್ಟ್ರದಲ್ಲಾದಂತೆ ರಾಜ್ಯದಲ್ಲಿಯೂ ಆಗಬಹುದು, ಕೊನೆಯ ಪ್ರಯತ್ನ ಎಂಬಂತೆ ಮತ್ತೆ ಜೆಡಿಎಸ್ ಮತ್ತು ಕಾಂಗ್ರೆಸ್ ಒಂದಾಗಿ ಬಿಜೆಪಿಯನ್ನು ದೂರವಿಡಬಹುದೆಂದು ನಂಬಿದ್ದರು. ಅದರಂತೆ ಕೆಲವೊಂದು ಲೆಕ್ಕಾಚಾರಗಳನ್ನು ಹಾಕಿಕೊಂಡು ಉಪಚುನಾವಣೆಯನ್ನು ಎದುರಿಸಲು ಮುಂದಾಗಿದ್ದರು. ಆದರೆ ಎಲ್ಲ ಲೆಕ್ಕಾಚಾರಗಳನ್ನು ಮತದಾರರು ತಲೆಕೆಳಗೆ ಮಾಡುವ ಮೂಲಕ ವಿಪಕ್ಷದ ನಾಯಕರಿಗೆ ಶಾಕ್ ನೀಡಿ, ಆಡಳಿತ ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ. ಅಷ್ಟರ ಮಟ್ಟಿಗೆ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ರಾಜಕೀಯ ಅಸ್ಥಿರತೆ ಬರದಂತೆ ತಡೆದಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ವೇಳೆ ಬೆಳವಣಿಗೆ
ಒಂದು ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ಅತಿಹೆಚ್ಚು ಸ್ಥಾನ ಪಡೆದು ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಬಹುಮತ ಕಳೆದುಕೊಂಡರೆ ಮತ್ತೆ ರಾಜಕೀಯ ಅಸ್ಥಿರತೆ ಶುರುವಾಗುತ್ತದೆ ಎಂಬ ಭಯವೂ ಇತ್ತು. ಈಗ ಅದೆಲ್ಲವೂ ದೂರವಾಗಿದೆ. ಆದರೆ ಮುಂದಿನ ದಿನಗಳಲ್ಲಿ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ವೇಳೆ ಬೆಳವಣಿಗೆಗಳು ಕಂಡು ಬಂದರೆ ಅಚ್ಚರಿಪಡಬೇಕಾಗಿಲ್ಲ.
ಸಿದ್ದರಾಮಯ್ಯ ರಾಜೀನಾಮೆ ಹಿಂದಿರುವ ರಾಜಕೀಯ ಲೆಕ್ಕಾಚಾರಗಳೇನು?
ಗೆಲುವಿಗೆ ಬೂತ್ ಮಟ್ಟದಿಂದಲೇ ಪ್ರಯತ್ನಿಸಿದ ಬಿಜೆಪಿ
ಸಮ್ಮಿಶ್ರ ಸರ್ಕಾರ ಪತನಗೊಂಡ ಮಾರನೆಯ ದಿನದಿಂದಲೇ ಬಿಜೆಪಿ ಗೆಲುವಿಗೆ ಏನು ಬೇಕೋ ಅದೆಲ್ಲವನ್ನು ಬೂತ್ ಮಟ್ಟದಿಂದಲೇ ಮಾಡುತ್ತಾ ಬಂದಿತ್ತು. ಹದಿನೈದಕ್ಕೆ ಹದಿನೈದು ಕ್ಷೇತ್ರವನ್ನು ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿತ್ತು. ಹೀಗಾಗಿಯೇ ಎಲ್ಲ ನಾಯಕರು ತಳಮಟ್ಟದಿಂದಲೇ ಕೆಲಸವನ್ನು ಆರಂಭಿಸಿದ್ದರು.
ಬಹುಶಃ ಸಮ್ಮಿಶ್ರ ಸರ್ಕಾರ ಪತನಗೊಂಡ ಬಳಿಕವೂ ಎರಡು ಪಕ್ಷಗಳ ಉಳಿದ ನಾಯಕರು ಒಗ್ಗಟ್ಟನ್ನು ಬಿಟ್ಟುಕೊಡದೆ ಹೋಗಿದ್ದರೆ ಮತದಾರರು ನಂಬುತ್ತಿದ್ದರೇನೋ, ಆದರೆ ಸರ್ಕಾರ ಪತನದ ಬಳಿಕ ಎರಡು ಪಕ್ಷಗಳ ನಾಯಕರು ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿ ಪ್ರತ್ಯೇಕವಾಗಿ ಚುನಾವಣೆಗೆ ಹೋಗಿದ್ದರು. ಹೀಗಿರುವಾಗ ಮತದಾರರಿಗೆ ಬೇರೆ ಯಾವ ಮಾರ್ಗಗಳೇ ಇರಲಿಲ್ಲ. ಹಾಗಾಗಿ ಬಹುತೇಕ ಕ್ಷೇತ್ರಗಳಲ್ಲಿ ಮತದಾರರು ಆಡಳಿತ ಪಕ್ಷದ ಪರವಾಗಿ ಅನರ್ಹ ಶಾಸಕರಿಗೆ ಮತ ಹಾಕಿ ಅರ್ಹರನ್ನಾಗಿ ಮಾಡಿದರು ಎಂಬುದನ್ನು ಒಪ್ಪಿಕೊಳ್ಳಲೇಬೇಕಾಗಿದೆ.ಸಿದ್ದರಾಮಯ್ಯ ಪಾಲಿಗೆ ಅಗ್ನಿಪರೀಕ್ಷೆಯಾಗಿದ್ದ ಉಪ ಚುನಾವಣೆ
ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೇವಲ ಅನರ್ಹ ಶಾಸಕರನ್ನು ಟೀಕೆ ಮಾಡುತ್ತಾ ಬಂದರೇ ವಿನಃ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಏನು ತಂತ್ರ ಮಾಡಬೇಕಿತ್ತೋ ಅದನ್ನು ಮಾಡಲಿಲ್ಲ. ಜತೆಗೆ ತಮ್ಮ ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರಗಳಿಗೆ ಕರೆದುಕೊಂಡು ಹೋಗಿ ಪ್ರಚಾರವನ್ನು ಮಾಡಿಸಲಿಲ್ಲ. ಎಲ್ಲಿಯೂ ನಾಯಕರು ಒಗ್ಗಟ್ಟನ್ನು ಪ್ರದರ್ಶಿಸಲೇ ಇಲ್ಲ.
ಕಳೆದ ವಿಧಾನಸಭೆ ಮತ್ತು ಲೋಕಸಭೆಯ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿಯೇ ನಡೆಸಿತ್ತು. ಅದೆರಡರಲ್ಲಿಯೂ ಸಿದ್ದರಾಮಯ್ಯ ಅವರ ಸಾಧನೆ ಕಳಪೆ ಎಂಬುದು ಕೂಡ ಸಾಬೀತಾಗಿತ್ತು. ಈ ಬಾರಿಯ ಉಪಚುನಾವಣೆ ಅವರ ಪಾಲಿಗೆ ಅಗ್ನಿಪರೀಕ್ಷೆಯಾಗಿತ್ತು. ಅದನ್ನು ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿದ್ದರು. ಆದರೆ ಕೊನೆಗೂ ಅದರಲ್ಲಿ ಸೋತರು ಎಂಬುದನ್ನು ಇದೀಗ ಒಪ್ಪಿಕೊಳ್ಳಲೇಬೇಕಾಗಿದೆ. ಜತೆಗೆ ಶಾಸಕಾಂಗ ಮತ್ತು ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಬೆಲೆ ತೆರುವಂತಾಗಿದೆ.
ಸಿದ್ದರಾಮಯ್ಯಗೆ ''ಹೌದು ಹುಲಿಯಾ'' ಎಂದವ ಇಂದು ಬಿಜೆಪಿಗೆ
ರಾಜೀನಾಮೆ ನಷ್ಟವೇ? ಲಾಭವೇ?
ಇವತ್ತು ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ತಕ್ಷಣಕ್ಕೆ ಮುಂದಿನ ದಿನದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಬೆಳವಣಿಗೆ ಕಾಣುತ್ತದೆಯಾ? ಎಂಬ ಪ್ರಶ್ನೆಯೂ ಕಾಡತೊಡಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೂ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದಾರೆ. ಈ ಇಬ್ಬರು ನಾಯಕರ ರಾಜೀನಾಮೆಯಿಂದ ಪಕ್ಷಕ್ಕೆ ಲಾಭನಾ, ನಷ್ಟನಾ ಎಂಬುದಕ್ಕೆ ಸದ್ಯಕ್ಕೆ ಯಾರ ಬಳಿ ಉತ್ತರವಿಲ್ಲ. ಒಂದು ವೇಳೆ ಸಿದ್ದರಾಮಯ್ಯ ಅವರು ಪಕ್ಷದಿಂದ ಬದಿಗೆ ಸರಿದರೆ ಪಕ್ಷಕ್ಕೆ ಇನ್ನಷ್ಟು ಹಿನ್ನಡೆ ಆಗುವ ಎಲ್ಲ ಸಾಧ್ಯತೆಗಳಿವೆ. ಹೀಗಿರುವಾಗ ಮುಂದೇನು? ಎಂಬುದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.