ಉಪಚುನಾವಣೆಯಲ್ಲಿ ನಡೆಯುತ್ತಿದೆಯಾ ಅಕ್ರಮ?
ಬಿಸಿಲ ಬೇಗೆಯ ನಡುವೆಯೂ ಉಪಚುನಾವಣೆಯ ಅಬ್ಬರ ಮುಗಿಲು ಮುಟ್ಟಿದ್ದು, ಚುನಾವಣಾ ಆಯೋಗಕ್ಕೆ ಅಕ್ರಮವನ್ನು ತಡೆಯುವುದು ಸವಾಲೆನ್ನಿಸಿದೆ.
ಮೈಸೂರು, ಮಾರ್ಚ್ 30 :ರಣ ಬಿಸಿಲಿನ ಕೇಕೇಯ ನಡುವೆಯೇ ಅರಮನೆ ನಗರಿ ನಂಜನಗೂಡಿನಲ್ಲಿ ಏಪ್ರಿಲ್ 9ರಂದು ನಡೆಯಲಿರುವ ಉಪಚುನಾವಣೆಯ ಕಾವು ಎಲ್ಲೆಡೆ ಹಬ್ಬಿದೆ. ಏಪ್ರಿಲ್ 13, ಗುರುವಾರದಂದು ಹೊರಬೀಳುವ ಫಲಿತಾಂಶ ದಲ್ಲಿ ವಿಜೇತ ಪಟ್ಟವನ್ನು ತಮ್ಮ ಮುಡಿಗೇರಿಸಿಕೊಳ್ಳಲೇಬೇಕೆಂಬ ಹಠತೊಟ್ಟಿರುವ ಉಭಯ ಪಕ್ಷಗಳ ನಾಯಕರು ಮೈಸೂರಿನಲ್ಲಿಯೇ ಸಂಪೂರ್ಣ ಮೊಕ್ಕಾಂ ಹೂಡಿದಂತಿದೆ..[ವೀಕೆಂಡ್ ವಿತ್ ರಮೇಶ್: ಜಗ್ಗೇಶ್ ಎಪಿಸೋಡ್ ನಿರ್ಬಂಧ?]
ಬಿಸಿಲ ಬೇಗೆಗೆ ಬಸವಳಿದರು.
ಒಂದೆಡೆ ಉಪ ಚುನಾವಣೆಯ ಪ್ರಚಾರದ ಬಿರುಸು, ಇನ್ನೊಂದೆಡೆ ಸುಡು ಬಿಸಿಲಿನ ಧಗೆಯೂ ಜೋರು ಈ ಎರಡರ ಮಧ್ಯೆ ಬಸವಳಿಯುತ್ತಿರುವ ಜನ ನಾಯಕರೀಗ ಉರಿಬಿಸಿಲಿನ ಶಾಖ ತಡೆಯಲಾಗದೆ ತೋಟದ ಮನೆಯತ್ತ ಮುಖ ಮಾಡಲಾರಂಭಿಸಿದ್ದಾರೆ. ಬೀದಿ ಬೀದಿ ಸುತ್ತಿ ಬಸವಳಿದ ನಾಯಕರೀಗ ಈ ಬಿಸಲಿನ ಧಗೆ ತಪ್ಪಿಸಿಕೊಳ್ಳಲು ಆಯಾ ಬೀದಿಗಳ ಮತದಾರರನ್ನು ತೋಟದತ್ತ ಕರೆಸಿ, ಅಲ್ಲಿ ಚಿಕ್ಕದಾದ ಸಭೆನಡೆಸಿ ಚೊಕ್ಕವಾಗಿ ವ್ಯವಹಾರ ಕುದುರಿಸುವ ಯತ್ನ ನಡೆಸುತ್ತಿದ್ದಾರೆ.
ಮುಖ್ಯಮಂತ್ರಿ ಮೊಕ್ಕಾಂ..!
ಮಾರ್ಚ್ 31 ರಿಂದ ಸಿಎಂ ಸಿದ್ದರಾಮಯ್ಯ ಕ್ಷೇತ್ರ ಪ್ರವಾಸ ಮಾಡಲಿದ್ದು, ಅಖಾಡಕ್ಕೆ ಮತ್ತಷ್ಟು ಕಳೆಬರುತ್ತಿದೆ. ಒಟ್ಟಿನಲ್ಲಿ ಈ ಎರಡೂ ಕ್ಷೇತ್ರಗಳನ್ನು ಕಾಂಗ್ರೆಸ್ ಪರವಾಗಿಸಲು ಅವರು ಹರಸಾಹಸ ನಡೆಸುತ್ತಿದ್ದಾರೆ.[ಗುಂಡ್ಲುಪೇಟೆ ಉಪಚುನಾವಣೆ: ಗೆಲುವು ಸುಲಭವಲ್ಲ!]
ಬಿಜೆಪಿಯೂ ಕಡಿಮೆಯಿಲ್ಲ
ಮಾಜಿ ಮುಖ್ಯಮಂತ್ರಿ ಬಿಎಸ್ ವೈ ಈಗಾಗಲೇ ನಂಜನಗೂಡಿನ 28 ತಾಪಂಗಳನ್ನೂ ಅಭ್ಯರ್ಥಿ ವಿ.ಶ್ರೀನಿವಾಸ ಪ್ರಸಾದರನ್ನು ಕಟ್ಟಿಕೊಂಡೇ ಸುತ್ತಿದ್ದಾರೆ. ಸಾಲದೆಂಬಂತೆ ಏ.1 ರಿಂದ ಪ್ರತಿ ಗ್ರಾಮದ ಬೀದಿ ಬೀದಿಯಲ್ಲಿ ಪಾದಯಾತ್ರೆ ನಡೆಸಿ, ಶ್ರೀನಿವಾಸ್ ಪ್ರಸಾದರನ್ನು ಗೆಲ್ಲಿಸಿ ಈ ಭಾಗದಲ್ಲಿ ಬಿಜೆಪಿಗೊಂದು ಭದ್ರಬುನಾದಿ ನಿರ್ಮಿಸಿಕೊಡುವ ಪ್ರಯತ್ನದಲ್ಲಿದ್ದಾರೆ. ಇನ್ನು ಕಳಲೆ ಕೇಶವಮೂರ್ತಿ ಪರ ಪ್ರಚಾರಕ್ಕಾಗಿ ಕೈ ಪಾಳಯ ನಾಲ್ವರು ಸಂಸದರು, 9 ಸಚಿವರು ಹಾಗೂ 12 ಶಾಸಕರನ್ನು ಈಗಾಗಲೇ ಕಾಂಗ್ರೆಸ್ ನಿಯೋಜನೆಗೈದಿದೆ.[ಉಪಚುನಾವಣೆ: ಗೀತಾ ಮಹದೇವಪ್ರಸಾದ್ ಕಣ್ಣೀರು!]
ಮತಬೇಟೆಗಾಗಿ ಶುರುವಾಗುತ್ತಿದೆ ಆನ್ಲೈನ್ ಪ್ಲಾನ್..!
ರಾಜಕೀಯ ಪಕ್ಷಗಳ ಮುಖಂಡರ ಚಿತ್ತ ಈಗ ಸ್ತ್ರೀ ಶಕ್ತಿ ಸಂಘಗಳತ್ತ ನೆಟ್ಟಿದೆ. ರಾಜಕೀಯ ಪಕ್ಷಗಳ ಮುಖಂಡರು ತಮ್ಮೂರಿಗೆ ಬರುತ್ತಾರೆ ಅಂದರೆ ಪುರುಷರಿಗಿಂತ ಮಹಿಳಾ ಸದಸ್ಯರೇ ತಮ್ಮ ಬೇಡಿಕೆಗಳನ್ನು ಅವರ ಮುಂದಿಡುವುದು ಹೆಚ್ಚು. ಇದನ್ನೇ ಪ್ಲಸ್ ಪಾಯಿಂಟನ್ನಾಗಿಸಿಕೊಂಡ ನಮ್ಮ ರಾಜಕೀಯ ಧುರೀಣರು ಇಂತಹ ಸಂಘಗಳ ಖಾತೆಗೆ ಹಣ ಜಮಾ ಮಾಡುವ ಕೆಲಸಕ್ಕೂ ಸಜ್ಜಾಗಿದ್ದಾರೆ. ಕೈಯಲ್ಲಿ ಹಣ ನೀಡುವ ಬದಲು ನೇರವಾಗಿ ಆನ್ ಲೈನ್ ಮೂಲಕ ಖಾತೆಗೆ ಹಣ ಹಾಕುವುದೇ ಉತ್ತಮ ಎಂಬ ನಿರ್ಧಾರಕ್ಕೆ ನಾಯಕರು ಬಂದಂತಿದೆ.
ಹಣ ಜಮಾ ಮಾಡುವ ಸಾಧ್ಯತೆ ಹೆಚ್ಚು…?
ಮತದಾರ ಪ್ರಭುವಿನ ಮನ ಗೆಲ್ಲಲ್ಲು ಸದ್ದಿಲ್ಲದ್ದೆ ಕಾರ್ಯತಂತ್ರ ನಡೆಯುತ್ತಿದ್ದು, ಸ್ತ್ರೀ ಶಕ್ತಿ ಸಂಘಗಳ ಖಾತಗೆ ಹಣ ಜಮೆ ಮಾಡುವ ಸಾಧ್ಯತೆ ಇದೆ. ಕಳೆದ ಮೂರು ದಿನಗಳಿಂದ ಅನೇಕ ಗ್ರಾಮಗಳಲ್ಲಿ ಸದಸ್ಯರ ಸಂಖ್ಯೆ, ಸಂಘಗಳ ಖಾತೆ ನಂಬರ್ ಪಡೆದುಕೊಳ್ಳಲಾಗುತ್ತಿದೆ. ಬ್ಯಾಂಕ್ ವ್ಯವಹಾರಗಳ ಮೇಲೆ ಹದ್ದಿನ ಕಣ್ಣಿಡುವುದಕ್ಕೆ ಚುನಾವಣಾ ಆಯೋಗ ಹೇಳಿದ್ದರೂ ಅಕ್ರಮ ನಡೆಯುವ ಸೂಚನೆ ಸಿಕ್ಕುತ್ತಿರುವುದು ವಿಪರ್ಯಾಸವೇ ಸರಿ.[ಅದೆಲ್ಲ ಸರಿ, ಶ್ರೀನಿವಾಸ್ ಪ್ರಸಾದ್ ನಡೆ ಮಾತ್ರ ನಿಗೂಢ]