ಅಕ್ಷಯ ತೃತೀಯದಂದು ಚಿನ್ನ ಕೊಂಡರೆ ದರಿದ್ರ ಬರುತ್ತದೆ:ಮಾಜಿ ಶಾಸಕ ಸೋಮಶೇಖರ್
Recommended Video
ಮೈಸೂರು, ಮೇ 6: ಅಕ್ಷಯ ತೃತೀಯ ದಿನದಂದು ಚಿನ್ನಾಭರಣ ಕೊಂಡರೆ ಅಕ್ಷಯವಾಗಲ್ಲ, ದಾರಿದ್ರ್ಯ ಬರುತ್ತದೆ. ಅಲ್ಲದೇ ಈ ದಿನ ಖರೀದಿಸಿದ ಚಿನ್ನ ಅಕ್ಷಯವಾಗಿದ್ದರೆ ಅವರಿಗೆ ನಾನು 10 ಲಕ್ಷ ರೂ.ಗಳನ್ನು ನೀಡುವೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಸವಾಲೆಸೆದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿನ್ನದ ವ್ಯಾಪಾರಿಗಳು ಒಂದು ವ್ಯೂಹ ಮಾಡಿ ಮೋಸ ಮಾಡುತ್ತಿದ್ದಾರೆ. ಅಕ್ಷಯ ತೃತೀಯ ದಿನ ಚಿನ್ನ ತೆಗೆದುಕೊಂಡರೆ ದರಿದ್ರ ಬರುತ್ತದೆ. ದರಿದ್ರ ಅಂದ್ರೆ ಮೋಸ ಹೋಗುವುದು, ನಷ್ಟ ಆಗುವುದು ಎಂಬರ್ಥ. ಆತುರದಲ್ಲಿ ಚಿನ್ನ ಪಡೆಯಲು ಹೋಗಿ ಮೋಸ ಹೋಗ್ತಾರೆ. ಅಕ್ಷಯ ತೃತೀಯವೆಂದರೆ ಆಹಾರ. ದೇಶದಲ್ಲಿ ತುಂಬಾ ಬಡವರು ಇದ್ದಾರೆ. ಅವರಿಗೆ ಅನ್ನದಾನ ಮಾಡಿ ಎಂದರು.
ಅಕ್ಷಯ ತೃತೀಯದ ಬಗ್ಗೆ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯರಿಂದ ವಿವರಣೆ
ಗಂಡನಿಗೆ ಹಿಂಸೆ ಕೊಟ್ಟು ಪತ್ನಿ ಚಿನ್ನ ತೆಗೆಸಿಕೊಳ್ಳುತ್ತಾಳೆ. ಇದರಿಂದ ಸಾಲ ಹೆಚ್ಚಾಗಿ, ಬಡ್ಡಿ ಕಟ್ಟಲು ಸಹ ಕಷ್ಟವಾಗಿದೆ. ಇದರಿಂದ ದರಿದ್ರವೇ ಹೆಚ್ಚಾಗುತ್ತದೆ. ಚಿನ್ನದ ವ್ಯಾಪಾರಿಗಳು ಜನರಿಗೆ ಮೋಸ ಮಾಡುತ್ತಿದ್ದಾರೆ. ಅವರ ಸ್ವಂತ ಲಾಭಕ್ಕಾಗಿ ಹೀಗೆ ಮೌಢ್ಯಗಳನ್ನು ಬೆಳೆಸಿದ್ದಾರೆ. ಚಿನ್ನದ ಅಂಗಡಿ ಮುಂದೆ ಪ್ರತಿಭಟನೆ ಮಾಡಿದರೆ ಪ್ರಯೋಜನ ಇಲ್ಲ. ಹಾಗಾಗಿ ಮಾಧ್ಯಮಗಳ ಮುಂದೆ ಮಾಹಿತಿ ಹೇಳುತ್ತಿದ್ದೇನೆ. ಇಲ್ಲಿಂದ ಲಕ್ಷಾಂತರ ಜನರಿಗೆ ಮಾಹಿತಿ ರವಾನೆಯಾಗುತ್ತದೆ. ನಮ್ಮ ಜನರು ಮುಗ್ಧರು ಹಾಗೂ ಬಡವರು. ಹಾಗಾಗಿ ಅವರಿಗೆ ಅರಿವು ಮೂಡಿಸಲು ಈ ಪ್ರಯತ್ನ ಮಾಡುತ್ತಿದ್ದೇನೆ ಎಂದರು.