ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಮೈಸೂರಿನಲ್ಲಿ ಉದ್ಯಮಿ ಆತ್ಮಹತ್ಯೆ
ಮೈಸೂರು, ಜುಲೈ 3: ಆರ್ಥಿಕ ಸಂಕಷ್ಟದಿಂದ ಹತಾಶೆಗೊಂಡು ಉದ್ಯಮಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
Recommended Video
ಕುವೆಂಪುನಗರ ನಿವಾಸಿ ರಮೇಶ್ (52) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಇವರು ರಿಯಲ್ ಎಸ್ಟೇಟ್ ಹಾಗೂ ಪ್ರಿಂಟಿಂಗ್ ಪ್ರೆಸ್ ವ್ಯವಹಾರ ನಡೆಸುತ್ತಿದ್ದರು. ಆದರೆ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ ಯಾವುದೇ ರೀತಿಯ ಆದಾಯ ಬರುತ್ತಿರಲಿಲ್ಲ. ಜತೆಗೇ ತಿಂಗಳ ಬಾಡಿಗೆ, ಇತ್ಯಾದಿ ಖರ್ಚುಗಳೂ ಹೆಚ್ಚಾಗುತ್ತಿತ್ತು.
ಕರ್ನಾಟಕದ ಕಥೆ: ಲಾಕ್ ಡೌನ್ ವೇಳೆ ಪ್ರತಿನಿತ್ಯ ಒಬ್ಬ ರೈತ ಆತ್ಮಹತ್ಯೆ!
ಇದರಿಂದ ಖಿನ್ನತೆಗೆ ಒಳಗಾಗಿದ್ದ ಇವರು, ಮೈಸೂರಿನ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗದ ಹೋಟೆಲ್ ಕೊಠಡಿಯೊಂದನ್ನು ಮಂಗಳವಾರ ಬಾಡಿಗೆ ಪಡೆದಿದ್ದರು. ಗುರುವಾರ ಸಂಜೆಯಾದರೂ ರಮೇಶ್ ಕೊಠಡಿಯಿಂದ ಆಚೆ ಬಾರದಿದ್ದಾಗ, ಹೋಟೆಲ್ ಸಿಬ್ಬಂದಿ ಅನುಮಾನದಿಂದ ಬಾಗಿಲು ತಳ್ಳಿ ನೋಡಿದ್ದಾರೆ. ಆಗ ಇವರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಕೂಡಲೇ ಹೋಟೆಲ್ನ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು, ಮೃತದೇಹವನ್ನು ಕೊರೊನಾ ವೈರಸ್ ಪರೀಕ್ಷೆ ಮಾಡಿ ಕುಟುಂಬಸ್ಥರಿಗೆ ನೀಡಲು ನಿರ್ಧರಿಸಿದ್ದಾರೆ. ಈ ಸಂಬಂಧ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಮೇಶ್ ಅವರಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.