ಬಂದ್ಗೆ ಬೆಂಬಲಿಸದಿರಲು ಮೈಸೂರು ಉದ್ಯಮ ಸಂಘ ಒಕ್ಕೂಟದ ನಿರ್ಧಾರ
ಮೈಸೂರು, ಡಿಸೆಂಬರ್ 2: ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಡಿ.5ರಂದು ಕರೆ ನೀಡಿರುವ ಕರ್ನಾಟಕ ಬಂದ್ಗೆ ಮೈಸೂರು ಉದ್ಯಮ ಸಂಘಗಳ ಒಕ್ಕೂಟ ಬೆಂಬಲ ನೀಡದಿರಲು ನಿರ್ಧರಿಸಿವೆ.
ಕೊರೊನಾದಿಂದ ನೆಲ ಕಚ್ಚಿರುವ ಎಲ್ಲ ಉದ್ಯಮಗಳು ಈಗಷ್ಟೇ ಚೇತರಿಕೆ ಕಾಣುತ್ತಿವೆ. ಉದ್ಯಮಗಳು ಚೇತರಿಸಿಕೊಳ್ಳುತ್ತಿರುವ ಈ ಸಮಯದಲ್ಲಿ ಬಂದ್ ಗೆ ಕರೆ ನೀಡಿರುವುದು ಸರಿಯಲ್ಲ ಎಂದು ತಿಳಿಸಿದೆ.
ದಾವಣಗೆರೆ: ಡಿ.5ರ ಕರ್ನಾಟಕ ಬಂದ್ಗೆ ಬೆಂಬಲ ಸೂಚನೆ
ಕನ್ನಡ ನಾಡು ನುಡಿ ಭಾಷೆಗೆ ಸಂಬಂಧಿಸಿದ ಹೋರಾಟಕ್ಕೆ ನಾವು ಸದಾ ಬೆಂಬಲ ನೀಡುತ್ತೇವೆ. ಆದರೆ, ಸಂಕಷ್ಟದ ಪರಿಸ್ಥಿತಿಯಲ್ಲಿ ಬಂದ್ ನಡೆಸುತ್ತಿರುವುದು ಉದ್ಯಮಗಳ ತಲೆ ಮೇಲೆ ಕಲ್ಲು ಎಳೆದುಕೊಂಡಂತೆ ಆಗಲಿದೆ. ಆದ್ದರಿಂದ ಮೈಸೂರಿನಲ್ಲಿ ಟ್ಯಾಕ್ಸಿ ಟ್ರಾವೆಲ್ಸ್, ಹೋಟೆಲ್, ಬಸ್ಸು-ಪೆಟ್ರೋಲ್ ಬಂಕ್, ವಾಣಿಜ್ಯ ಮಳಿಗೆಗಳು ಮಂಡಿ ಮಾರುಕಟ್ಟೆಗಳು ಎಂದಿನಂತೆ ತೆರೆದಿರುವುದಾಗಿ ಒಕ್ಕೂಟದ ಸದಸ್ಯರು ತಿಳಿಸಿದ್ದಾರೆ.
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಮಾತನಾಡಿ, ಕನ್ನಡ ನಾಡು ನುಡಿಯ ಹೋರಾಟಕ್ಕೆ ಸದಾ ಬೆಂಬಲಿಸುತ್ತೇವೆ. ನಮ್ಮೊಂದಿಗೆ ಯಾವುದೇ ಚರ್ಚೆ ಮಾಡದೆ ಬಂದ್ ಘೋಷಿರುವುದು ಸರಿಯಲ್ಲ. ಹೀಗಾಗಿ ಉದ್ಯಮಗಳ ಹಿತ ದೃಷ್ಟಿಯಿಂದ ಬಂದ್ ದಿನದಂದು ಎಲ್ಲ ಹೋಟೆಲ್ ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದರು
ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಬಿ.ಎಸ್. ಪ್ರಶಾಂತ ಮಾತನಾಡಿ, ಕೊರೊನಾ ಹೊಡೆತದಿಂದ ಚೇತರಿಸಿಕೊಂಡು ಈಗಷ್ಟೇ ಉದ್ಯಮಗಳು ಚೇತರಿಸಿಕೊಳ್ಳುತ್ತಿವೆ. ಮೈಸೂರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪ್ರವಾಸೋದ್ಯಮವನ್ನು ಅವಲಂಬಿಸಿದೆ. ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮೈಸೂರಿಗೆ ಬರಬೇಕಾದ ಪ್ರವಾಸಿಗರು ಕೇರಳಕ್ಕೆ ಹೊರಟ್ಟಿದ್ದಾರೆ. ಇದರಿಂದ ತೊಂದರೆ ಯಾರಿಗೆ ಎಂದು ಪ್ರಶ್ನಿಸಿದರು.
ಹೋಟೆಲ್ ಗಳು, ಉಪಾಹಾರ ಗೃಹಗಳು, ಸಾರಿಗೆ, ಅಂಗಡಿಗಳು, ರಸ್ತೆ ಬದಿ ವ್ಯಾಪಾರಿಗಳು, ಕುದುರೆ ಸಾರೋಟುಗಳು ಹೀಗೆ ಹತ್ತಾರು ಉದ್ಯಮಗಳಿಗೆ ಆದಾಯ ಬರುವುದಿಲ್ಲ. ಈ ಉದ್ಯಮದ ಅವಲಂಬಿತರಾಗಿ ಲಕ್ಷಾಂತರ ಜನರಿದ್ದು, ಅವರಿಗೆಲ್ಲ ಸಮಸ್ಯೆಯಾಗುತ್ತದೆ. ಕನ್ನಡ ಸಂಘಟನೆಗಳ ಉದ್ದೇಶಕ್ಕೆ ನಮ್ಮ ಬೆಂಬಲವಿದೆ. ಆದರೆ ಹೋರಾಟಗಾರರ ಮಾರ್ಗ ಸರಿಯಿಲ್ಲ. ಹೀಗಾಗಿ ಬಂದ್ ಗೆ ಬೆಂಬಲ ನೀಡದಿರಲು ನಿರ್ಧರಿಸಿದ್ದೇವೆ ಎಂದು ಹೇಳಿದರು.