ಟಿ.ನರಸೀಪುರ ಠಾಣೆಯಲ್ಲಿ ಕಾಣೆಯಾಗಿದ್ದ ಬುಲೆಟ್ ಗಳು ಕೊನೆಗೂ ಸಿಕ್ಕಿದ್ದು ಎಲ್ಲಿ?
ಮೈಸೂರು, ಜೂನ್ 11: ಇಲ್ಲಿಗೆ ಸಮೀಪದ ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಈಚೆಗೆ ನಾಪತ್ತೆಯಾಗಿದ್ದ ಬುಲೆಟ್ಗಳು ಕೊನೆಗೂ ಪತ್ತೆಯಾಗಿವೆ. ನಂಜನಗೂಡು ತಾಲೂಕಿನ ಕಪಿಲೆ ನದಿಯಲ್ಲಿ ಈ ಬುಲೆಟ್ ಗಳು ಸಿಕ್ಕಿವೆ.
Recommended Video
ಪೊಲೀಸ್ ಠಾಣೆಗಳಲ್ಲಿರುವ ಶಸ್ತ್ರಾಸ್ತ್ರಗಳನ್ನು ಪರಿಶೀಲಿಸುವ ಸಂದರ್ಭ ರೈಫಲ್ ನ ಐವತ್ತು ಬುಲೆಟ್ ಗಳು ನಾಪತ್ತೆಯಾಗಿರುವ ಸಂಗತಿ ತಿಳಿದುಬಂದಿತ್ತು. ನಂತರ ತನಿಖೆ ಕೈಗೊಂಡು, ಇಬ್ಬರು ಕಾನ್ ಸ್ಟೆಬಲ್ ಗಳನ್ನು ಅಮಾನತು ಮಾಡಲಾಗಿತ್ತು.
ಇಲ್ಲಿನ ಠಾಣೆಯ ರೈಟರ್ ಆಗಿದ್ದ ಕೃಷ್ಣೇಗೌಡ ಅವರ ಮೇಲೆಯೇ ಪೊಲೀಸ್ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದರು. ವಿಚಾರಣೆ ತೀವ್ರಗೊಳ್ಳುತ್ತಿದ್ದಂತೆ ಈತ ಅಮಾಯಕನಂತೆ ನದಿಗೆ ಹಾರಿ ಆತ್ಮಹತ್ಯೆ ಮಾಡಿ ಮಾಡಿಕೊಳ್ಳುವ ನಾಟಕವನ್ನೂ ಮಾಡಿದ್ದ. ನಂತರ ಅಧಿಕಾರಿಗಳು ಈತನನ್ನು ವಶಕ್ಕೆ ಪಡೆದು ಕೂಲಂಕಷವಾಗಿ ಪ್ರಶ್ನಿಸಿದಾಗ ಕದ್ದ ಬುಲೆಟ್ಗಳನ್ನು ನಂಜನಗೂಡು ಕಪಿಲಾ ನದಿಯಲ್ಲಿ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾನೆ.
ಟಿ.ನರಸೀಪುರ ಠಾಣೆಯಲ್ಲಿ ಬುಲೆಟ್ ನಾಪತ್ತೆ ಪ್ರಕರಣ: ಹೆಡ್ ಕಾನ್ಸ್ ಟೆಬಲ್ಗಳ ಅಮಾನತು
ಬುಧವಾರ ಮುಳುಗು ತಜ್ಞರನ್ನು ಕರೆಸಿ ಶೋಧ ಕಾರ್ಯ ನಡೆಸಿದಾಗ 20 ಬುಲೆಟ್ ಗಳು ಸಿಕ್ಕಿವೆ. ಇನ್ನುಳಿದ ಬುಲೆಟ್ ಗಳಿಗಾಗಿ ಶೋಧ ನಡೆಸಲಾಗುತ್ತಿದೆ. ತನಿಖಾಧಿಕಾರಿ ಅಡಿಷನಲ್ ಎಸ್ಪಿ ಸ್ನೇಹ ನೇತೃತ್ವದಲ್ಲಿ ನಡೆದ ಬುಲೆಟ್ಗಳ ಶೋಧನಾ ಕಾರ್ಯ ಮುಂದುವರಿದಿದೆ.