ಅಭಿವೃದ್ಧಿ, ಉದ್ಯೋಗ ಸೃಷ್ಟಿಗೆ ಪೂರಕವಲ್ಲದ ಬಜೆಟ್:ಸಿದ್ದರಾಮಯ್ಯ
ಕೇಂದ್ರದ 2017ರ ಬಜೆಟ್ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಪೂರಕವಾಗಿಲ್ಲ. ಅದೇ ರೀತಿ ಬಜೆಟಿನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರು, ಫೆಬ್ರವರಿ 2: ಕೇಂದ್ರದ ಬಜೆಟ್ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಪೂರಕವಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯಕ್ಕೂ ಬಜೆಟಿನಲ್ಲಿ ಅನ್ಯಾಯವಾಗಿದೆ ಎಂದೂ ಅವರು ದೂರಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಪನಗದೀಕರಣ ಬಳಿಕ ಸರ್ಕಾರಕ್ಕೆ ಬರುವ ಆದಾಯ ಭಾರಿ ಪ್ರಮಾಣದಲ್ಲಿ ಏರಿಕೆಯಾಗಬಹುದು. ಆ ಹಣವನ್ನು ಜನ ಕಲ್ಯಾಣಕ್ಕೆ ಬಳಸಬಹುದು ಎಂಬ ನಿರೀಕ್ಷೆ ಇತ್ತು. ಬಜೆಟ್ನಲ್ಲಿ ಹೇಳಿಕೆಗಳ ಮಹಾಪೂರವೇ ಇದೆ. ಆದರೆ ಅದಕ್ಕೆ ಪೂರಕವಾದ ಕಾರ್ಯಕ್ರಮಗಳು ಮತ್ತು ಅನುದಾನ ಕಂಡು ಬಂದಿಲ್ಲ ಎಂದು ತಿಳಿಸಿದರು. (ಚಿತ್ರ ಕೃಒಎ: ಪಿಟಿಐ)[ಜೇಟ್ಲಿ ಬಜೆಟನ್ನು ಠುಸ್ ಪಟಾಕಿ ಎಂದ ರಾಹುಲ್ ಗಾಂಧಿ]
ಇಂಕ್ರಿಮೆಂಟಲ್ ಬಜೆಟ್
ಕೇಂದ್ರದ ಬಜೆಟ್ನ್ನು ಇಂಕ್ರಿಮೆಂಟಲ್ ಬಜೆಟ್ ಎಂದು ಕರೆಯಬಹುದು. ಅಪನಗದೀಕರಣದ ಬಳಿಕ ಅದರಿಂದ ತೊಂದರೆಗೆ ಒಳಗಾದ ರೈತರು, ಕೂಲಿ ಕಾರ್ಮಿಕರು, ಬಡವರು, ಸಣ್ಣಪುಟ್ಟ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರ ನೆರವಾಗಬಹುದು ಎಂಬ ನಿರೀಕ್ಷೆ ಇತ್ತು. ಅದೂ ಹುಸಿಯಾಗಿದೆ. ಬಜೆಟ್ನಲ್ಲಿ ಆದಾಯ ತೆರಿಗೆ ಪ್ರಮಾಣವೂ ಹಿಂದಿನ ವರ್ಷದಷ್ಟೇ ಇದೆ. ಕೃಷಿ ವಿಚಾರದಲ್ಲಿ ರೈತರಿಗೆ ಅನುಕೂಲ ಆಗುವಂತಹ ಕಾರ್ಯಕ್ರಮಗಳು ಬಜೆಟ್ನಲ್ಲಿ ಕಾಣುತ್ತಿಲ್ಲ. ದೇಶದ ಅನೇಕ ರಾಜ್ಯಗಳಲ್ಲಿ ಭೀಕರವಾದ ಬರಗಾಲವಿದೆ. ಆ ಬಗ್ಗೆ ಮುಂಗಡ ಪತ್ರದಲ್ಲಿ ಏನನ್ನೂ ಹೇಳಿಲ್ಲ ಎಂದರು.
ಸಾಲ ಮನ್ನಾ ಮಾಡಿಲ್ಲ
ಸಾಲ ಮನ್ನಾ ಸೇರಿದಂತೆ ಬರಗಾಲದಿಂದ ಸಂಕಷ್ಟಕ್ಕೆ ಗುರಿಯಾಗಿರುವ ರೈತರಿಗೆ ಕೊಡುಗೆ ಘೋಷಿಸಬಹುದು ಎಂದು ಅಂದುಕೊಂಡಿದ್ದೆವು. ಅದೂ ಕಾಣುತ್ತಿಲ್ಲ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಅನುದಾನದ ಮೊತ್ತ ಕಳೆದ ವರ್ಷದಷ್ಟೇ ಇದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಿಲ್ಲ. ಆದರೆ, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಮತ್ತು ತ್ವರಿತ ನೀರಾವರಿ ಯೋಜನೆಗೆ ನಿಗದಿಯಾಗಿದ್ದ ಅನುದಾನದಲ್ಲಿ ಮಾತ್ರ ಕೊಂಚ ಏರಿಕೆಯಾಗಿದೆ.[ಬಜೆಟ್ 2017: 'ಡಿಜಿಟಲ್ ವ್ಯವಹಾರ'ವೇ ಮೋದಿ ಸರಕಾರದ ಮಂತ್ರ]
ರಾಜ್ಯಕ್ಕೆ ಅನ್ಯಾಯ
ಮೆಟ್ರೊ ರೈಲು ನೀತಿಯೂ ರೂಪುಗೊಂಡಿಲ್ಲ. ಜೊತೆಗೆ ಬೃಹತ್ ಯೋಜನೆಗಳಲ್ಲೂ ಪ್ರಮುಖವಾದ ಬದಲಾವಣೆಗಳೇನೂ ಕಾಣುತ್ತಿಲ್ಲ. ಪ್ರಧಾನ ಮಂತ್ರಿಯವರ ಫಸಲ್ ಭೀಮಾ ಯೋಜನೆಗೆ 9 ಸಾವಿರ ಕೋಟಿ ರೂ. ನಿಗದಿಯಾಗಿದೆ. ಆದರೆ ಇದರಲ್ಲಿ ರಾಜ್ಯ ಸರ್ಕಾರಗಳ ಪಾಲು ಶೇ.50ರಷ್ಟು ಇರುತ್ತದೆ. ರಾಷ್ಟ್ರೀಕೃತ ಬ್ಯಾಂಕ್ಗಳ ಮೂಲಕ ರೈತರು ಪಡೆದಿರುವ ಸಾಲ ಮನ್ನಾ ಕುರಿತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿತ್ತು. ಆ ಕುರಿತು ಬಜೆಟ್ನಲ್ಲಿ ಚಕಾರವಿಲ್ಲ. ಬರ ಪರಿಹಾರ ಕಾಮಗಾರಿಗಳಿಗೆ ನೆರವು ಒದಗಿಸುವ ವಿಚಾರದಲ್ಲೂ ರಾಜ್ಯಕ್ಕೆ ಅನ್ಯಾಯವಾಗಿದೆ. ಅದನ್ನೂ ಸರಿಪಡಿಸಿಲ್ಲ.
ಅಚ್ಛೇ ದಿನ್ ಬರಲಿಲ್ಲ
'ಅಚ್ಛೇ ದಿನ ಆಯೇಗಾ ಆಯೇಗಾ' ಎಂದು ಬಿಜೆಪಿ ನಾಯಕರು ಹೇಳುತ್ತಿದ್ದರು. ಕೇಂದ್ರದಲ್ಲಿ ಆ ಪಕ್ಷದ ಸರ್ಕಾರ ಬಂದು ಮೂರು ವರ್ಷ ಕಳೆದರೂ ಅಚ್ಛೇ ದಿನ್ ಬರಲಿಲ್ಲ. ದೇಶದಲ್ಲಿ ಇರುವ ಕಪ್ಪು ಹಣ ನಿವಾರಿಸಿ ಬಡವರ ಬ್ಯಾಂಕ್ ಖಾತೆಗಳಿಗೆ ತಲಾ 15 ಲಕ್ಷ ರೂ. ತುಂಬುವುದಾಗಿಯೂ ಬಿಜೆಪಿ ಹೇಳಿತ್ತು. 15 ಪೈಸೆಯೂ ಬರಲಿಲ್ಲ. ಇದರಿಂದ ಜನರ ಗಮನ ಬೇರೆ ಕಡೆ ಸೆಳೆಯುವುದಕ್ಕಾಗಿಯೇ ಅಪನಗದೀಕರಣ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.
ಕಪ್ಪು ಹಣ ಬಂತಾ?
ನೋಟು ಅಮಾನ್ಯದ ಬಳಿಕ ಸಿಕ್ಕ ಕಪ್ಪು ಹಣ ಎಷ್ಟು ಎಂಬುದನ್ನು ಬಜೆಟ್ನಲ್ಲಿ ಹೇಳಿಲ್ಲ. ನೋಟು ಅಮಾನ್ಯದಿಂದ ತೊಂದರೆಗೆ ಸಿಲುಕಿದವರು ಬಡವರೇ ಹೊರತು ಭ್ರಷ್ಟರು ಅಥವಾ ಕಾಳಧನಿಕರಲ್ಲ ಎಂದು ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸದರು.