ಬಿಎಸ್ವೈ ಇನ್ನು ಸ್ವಲ್ಪ ದಿನ ಮುಂದುವರಿಯುತ್ತಾರೆ; ಉಲ್ಟಾ ಹೊಡೆದ ಸಿದ್ದರಾಮಯ್ಯ
ಮೈಸೂರು, ಜನವರಿ 13: ಮಂತ್ರಿಮಂಡಲ ವಿಸ್ತರಣೆಯಿಂದಾಗಿ ಬಿಎಸ್ವೈ ಇನ್ನು ಸ್ವಲ್ಪ ದಿನ ಮುಂದುವರಿಯಬಹುದು ಎಂದು ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ನಡೆದ ಜನಾಧಿಕಾರ ಸಮಾವೇಶದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಈ ಹಿಂದೆ ಸಿಎಂ ಬದಲಾಗುತ್ತಾರೆ ಎಂದು ನೀಡಿದ್ದ ತಮ್ಮ ಹೇಳಿಕೆಯಿಂದ ಉಲ್ಟಾ ಹೊಡೆದರು. ಸಿಎಂ ಆಗಿ ಬಿಎಸ್ವೈ ಮುಂದುವರೆಯುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಈಗ ಸಂಪುಟ ವಿಸ್ತರಣೆ ಆಗಿರುವುದನ್ನು ನೋಡಿದರೆ ಇನ್ನು ಸ್ವಲ್ಪ ದಿನ ಯಡಿಯೂರಪ್ಪನವರೇ ಸಿಎಂ ಆಗಿ ಇರಬಹುದು. ಬಹುಶಃ ಸಂಪುಟ ವಿಸ್ತರಣೆ ಆದ ನಂತರ ರಾಜೀನಾಮೆ ಕೊಡ್ತೀನಿ ಅಂತ ಹೇಳಿರಬಹುದೇನೋ. ನಮಗಿದ್ದ ಮಾಹಿತಿ ಪ್ರಕಾರ, ಹೈಕಮಾಂಡ್ ಸಿಎಂ ಯಡಿಯೂರಪ್ಪದ ರಾಜೀನಾಮೆ ಕೇಳಿದ್ದರು. ಬಹುಶಃ ಸಂಪುಟ ವಿಸ್ತರಣೆ ಮಾಡಿ ಕೊಡ್ತೀನಿ ಅಂತ ಹೇಳಿರಬಹುದು. ಹಾಗಾಗಿ ಇನ್ನು ಸ್ವಲ್ಪ ದಿನ ಅವರೇ ಸಿಎಂ ಆಗಿ ಉಳಿಯುವ ಸಾಧ್ಯತೆ ಇದೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.
"ನಾಲಿಗೆ, ಮಾತು ಎರಡೂ ಕಳೆದುಕೊಂಡ ಸಿಎಂ ಯಡಿಯೂರಪ್ಪ''
ಬಜೆಟ್ ತಯಾರಿ ಬಗ್ಗೆ ಲೇವಡಿ
ಯಡಿಯೂರಪ್ಪ ಬಜೆಟ್ ಮಂಡಿಸಲೇಬೇಕು. ಇಲ್ಲವಾದರೆ ಮಾರ್ಚ್ ನಂತರ ಒಂದು ರುಪಾಯಿಯೂ ಖರ್ಚು ಮಾಡುವುದಕ್ಕೆ ಆಗೋದಿಲ್ಲ. ನನ್ನ ಬಜೆಟ್ ಸ್ಟೈಲ್ ಬೇರೆ ಇತ್ತು. ಇವರ ಬಜೆಟ್ ಸ್ಟೈಲ್ ಬೇರೆ ಇದೆ. ಈಗ ಮೀಟಿಂಗ್ ಮಾಡ್ತಿದ್ದೀವಿ ಅಂತ ಹೇಳಿದ್ದಾರೆ. ನೋಡೋಣ ಏನ್ ಮಾಡ್ತಾರೆ ಅಂತ ಎಂದು ಆಡಳಿತ ಪಕ್ಷದ ಬಜೆಟ್ ತಯಾರಿ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದರು.
ಬಿಜೆಪಿ ನಾಯಕರಿಗೆ ಕುಟುಕಿದ ಸಿದ್ದರಾಮಯ್ಯ
ಇದೇ ವೇಳೆ ಮಾತನಾಡಿದ ಸಿದ್ದರಾಮಯ್ಯ, ಇಲ್ಲಿಯವರೆಗೆ ನಾನು ಗೋಮಾಂಸ ತಿಂದಿಲ್ಲ, ಆದರೆ ತಿನ್ನಬೇಕು ಅನ್ನಿಸಿದರೆ ತಿಂತೀನಿ. ಅದನ್ನು ಕೇಳೋಕೆ ಇವರು ಯಾರು? ಎಂದು ಹೇಳುವ ಮೂಲಕ ಮತ್ತೆ ಗೋಮಾಂಸ ಸೇವನೆ ಕುರಿತು ಬಿಜೆಪಿ ನಾಯಕರಿಗೆ ಕುಟುಕಿದರು. ಆಹಾರ ನನ್ನ ಹಕ್ಕು, ಅದನ್ನು ಪ್ರಶ್ನಿಸೋಕೆ ಇವರ್ಯಾರು. ಯಡಿಯೂರಪ್ಪಗೆ ಗೊತ್ತಿಲ್ಲ ಹೇಳ್ತಿನಿ ಕೇಳಿ, I am making it very clear ನಾನು ಈವರೆಗೆ ಗೋಮಾಂಸ ತಿಂದಿಲ್ಲ, ನಾನು ಹಂದಿ ಮಾಂಸ ತಿಂದಿಲ್ಲ. ಆದರೆ ತಿನ್ನಬೇಕು ಅನ್ನಿಸಿದ್ರೆ ತಿಂತೀನಿ ಎಂದರು.
2ನೇ ಬಾರಿಗೆ ಸಚಿವ ಸ್ಥಾನ ಅಲಂಕರಿಸಲಿರುವ ಸಿಪಿ ಯೋಗೇಶ್ವರ್ ವ್ಯಕ್ತಿಚಿತ್ರಣ
ನಮ್ಮ ಆಹಾರ ಪದ್ದತಿ ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ
ನಾನು ತಿಂದಿರೋದು ಕೋಳಿ ಮಾಂಸ, ಕುರಿಮಾಂಸ, ಆಡಿನ ಮಾಂಸ ಮಾತ್ರ. ಆದರೆ ನಮ್ಮ ಆಹಾರ ಪದ್ದತಿ ಪ್ರಶ್ನಿಸುವ ಹಕ್ಕು ಇಲ್ಯಾರಿಗೂ ಇಲ್ಲ. ಯಡಿಯೂರಪ್ಪ ಗೋಮಾಂಸ ತಿನ್ನೋದೆ ಸಾಧನೆ ಅಂತ ಹೇಳಿದ್ದಾನೆ. ಆದರೆ ನಾನೇನು ಅವನ ತರಹ ಸೋಪ್ಪು ತಿನ್ನಲಾ. ನಾನು ಸೋಪ್ಪು ಬೇಕು ಅಂದ್ರೆ ಸೋಪ್ಪು ತಿಂತೀನಿ, ಮಾಂಸ ಬೇಕು ಅಂದ್ರೆ ಮಾಂಸ ತಿಂತೀನಿ. ನಾನೇನಾದರೂ ನಿಂಗೆ ಹೇಳಿದ್ದೀನಾ ಮಾಂಸ ತಿನ್ನು ಅಂತಾ?. ಮತ್ತೆ ತಿನ್ನೋರಿಗೆ ಸುಮ್ಮನೆ ಯಾಕೆ ಪ್ರಶ್ನೆ ಮಾಡ್ತೀಯಾ ಎಂದು ಸಿಎಂ ಅವರನ್ನು ಸಿದ್ದರಾಮಯ್ಯ ಪ್ರಶ್ನಿಸಿದರು.
ಬಿಎಸ್ವೈ ವಿರುದ್ಧ ಏಕವಚನದಲ್ಲೇ ವಾಗ್ದಾಳಿ
ಜಗತ್ತಿನಲ್ಲಿ ಮಾಂಸಹಾರಿಗಳೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಚೀನಾದಲ್ಲಿ ನಾಲ್ಕು ಕಾಲಿನ ಮಂಚವೊಂದನ್ನು ಬಿಟ್ಟು ಇನ್ನೆಲ್ಲವನ್ನು ತಿಂತಾರೆ ಗೊತ್ತಾ ನಿಮಗೆ? ಹಾಗಾದರೆ ಅಮೆರಿಕಾದಲ್ಲಿ ಇರುವವರು ಪ್ರಾಣಿಗಳಾ? ಇಂಗ್ಲೆಂಡ್, ಬ್ರಿಟನ್, ಸೇರಿದಂತೆ ಬೇರೆ ದೇಶದಲ್ಲಿ ದನ ತಿಂತಾರೆ. ಹಾಗಾದರೆ ಅವರೆಲ್ಲಾ ಪ್ರಾಣಿಗಳಾ? ನಿಮಗೆ ಸೋಪ್ಪು ಇಷ್ಟ ಇದ್ರೆ ತಿನ್ನಿ. ಬೇರೆಯವರಿಗೆ ಏನು ಇಷ್ಟ ಇದೆಯೋ ಅದನ್ನು ತಿನ್ನೋಕೆ ಬಿಡಿ ಎಂದು ಮೈಸೂರಿನಲ್ಲಿ ಬಿಎಸ್ವೈ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಗೋಮಾಂಸದ ಬಗ್ಗೆ ಶ್ಲೋಕವಿದೆ
ದನದ ಮಾಂಸ ತಿನ್ನುವ ಬಗ್ಗೆ ಶ್ಲೋಕವೇ ಇದೆ. ಅದು ನನಗೆ ನೆನಪಾಗುತ್ತಿಲ್ಲ ಆಮೇಲೆ ನೆನಪು ಮಾಡ್ಕೊಂಡು ಹೇಳ್ತೀನಿ. ಗೋಮಾಂಸದ ಬಗ್ಗೆ ಶ್ಲೋಕವಿದೆ ಎಂದು ಸಿದ್ದರಾಮಯ್ಯ ಉಲ್ಲೇಖ ಮಾಡಿದರು. ದನದ ಮಾಂಸದ ಬಗ್ಗೆ ಶ್ಲೋಕ ಬರೆಯಲಾಗಿದೆ. ಶ್ಲೋಕ ಬರೆದಿರೋದು ಯಾರಪ್ಪ. ಸಂಸ್ಕೃತ ಗೊತ್ತಿರೋರೆ ತಾನೆ ಬರೆಯೋದು. ಹಾಗಾದ್ರೆ ಶ್ಲೋಕದಲ್ಲಿ ತಪ್ಪು ಇದ್ಯಾ? ಒಳ್ಳೆಯ ದನದ ಮಾಂಸ ತಿಂದರೆ ಆರೋಗ್ಯ ಚೆನ್ನಾಗಿರುತ್ತೆ ಅಂತ ಆ ಶ್ಲೋಕದಲ್ಲಿ ಹೇಳಿದ್ದಾರೆ. ಸದ್ಯಕ್ಕೆ ಆ ಶ್ಲೋಕ ನೆನಪಾಗುತ್ತಿಲ್ಲ ಎಂದು ಹೇಳುವ ಮೂಲಕ ಕಾರ್ಯಕರ್ತರನ್ನು ನಗೆಗಡಲಲ್ಲಿ ತೇಲಿಸಿದರು. ಮತ್ತೆ ಮೈಸೂರಿಗೆ ಬಂದಾಗ ಆ ಶ್ಲೋಕ ಹೇಳ್ತೀನಿ. ಈಗ ಹೇಳಿದರೆ ಅದನ್ನು ವಿವಾದ ಮಾಡಿ ಬಿಡುತ್ತಾರೆ. ನಾನು ಹೇಳಿದ ವಿಷಯ ಬಿಟ್ಟು ಬೇರೆ ಅರ್ಥದಲ್ಲಿ ಅದನ್ನು ಹೇಳಿ ಬಿಡುತ್ತಾರೆ. ಅದಕ್ಕೆ ಶ್ಲೋಕವನ್ನು ಸರಿಯಾಗಿಯೇ ಹೇಳ್ತೀನಿ ಎಂದು ಮೈಸೂರಿನಲ್ಲಿ ಜನಾಧಿಕಾರ ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.